ಬೆಳಾಲು ಶ್ರೀ ಧ. ಮಂ.ಪ್ರೌ. ಶಾಲೆಯಲ್ಲಿ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮ

Suddi Udaya

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಆಶ್ರಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ, ಪುರಾತನ ಮತ್ತು ಚಾರಿತ್ರಿಕ ಮಹತ್ವವನ್ನು ಅರಿತುಕೊಳ್ಳುವ ಪ್ರಾಚ್ಯ ಪ್ರಜ್ಞೆ ಎಂಬ ತಾಲೂಕು ಮಟ್ಟದ ಕಾರ್ಯಕ್ರಮ ಜರಗಿತು.

ಉದ್ಘಾಟನೆಯನ್ನು ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎಸ್ ವಿರೂಪಾಕ್ಷಪ್ಪರವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬೆಳಾಲು ಗ್ರಾಮ ಪಂಚಾಯತ್ತಿನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡರವರು ಮಾತನಾಡುತ್ತಾ , ಸ್ಮಾರಕಗಳು ನಮ್ಮ ಹೆಮ್ಮೆ. ನಮ್ಮ ದೇಶದ ಸಂಸ್ಕೃತಿಯ ಭಾಗವಾಗಿರುವ ಹಬ್ಬಗಳು, ಮಂದಿರ ಸ್ಮಾರಕಗಳು, ಶಾಸನಗಳು, ಶಿಲ್ಪಕಲೆಗಳೆಲ್ಲ ನಮ್ಮ ಹಿರಿಯರು ನಮಗೆ ಕೊಟ್ಟಿರುವ ಕೊಡುಗೆಗಳು. ಆ ಬಗ್ಗೆ ತಿಳುವಳಿಕೆ ಹೊಂದಿರಬೇಕಾದ್ದು ಇಂದಿನ ಅಗತ್ಯವಾಗಿದೆ. ಶತಶತಮಾನಗಳ ಅದೆಷ್ಟೋ ಸ್ಮಾರಕಗಳು ನಷ್ಟವಾಗಿರುವ ವರದಿಯಿದೆ. ನಮ್ಮ ಶ್ರೇಷ್ಠ ಪರಂಪರೆಯ ನೆನಪುಗಳು, ಸ್ಮಾರಕಗಳು ನಷ್ಟವಾಗಬಾರದು, ನಾವು ಮರೆಯಬಾರದು. ಅದನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲ ಜಾಗೃತರಾಗಬೇಕಾದ ಅನಿವಾರ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಇಲಾಖೆಯ ಪರಿವೀಕ್ಷಣಾಧಿಕಾರಿಗಳಾದ ಸಿದ್ಧಲಿಂಗ ಸ್ವಾಮಿಯವರು ಪ್ರಸ್ತಾವನೆಗೈದರು.

ಶ್ರೀಮತಿ ಚೇತನಾಕ್ಷಿ, ಸಮನ್ವಯಾಧಿಕಾರಿಗಳಾದ ಮೋಹನ್ ಕುಮಾರ್ ಸಿ ಎನ್ , ವಲಯ ಸಂಪನ್ಮೂಲ ಅಧಿಕಾರಿ ಶ್ರೀಮತಿ ಪ್ರತಿಮಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ್ ಕೊಲ್ಲಿಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಸ್ವಾಗತಿ, ಶಿಕ್ಷಕರಾದ ಜಗದೀಶ್ ವಂದಿಸಿದರು, ಸುಮನ್ ಯು ಎಸ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ದ ಖಮಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರನ್ನು ಶಿಕ್ಷಣ ಇಲಾಖಾ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಪ್ರಯುಕ್ತ ಭಾಷಣ, ಪ್ರಬಂಧ, ರಸಪ್ರಶ್ನೆ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ತಾಲೂಕಿನ ಇಪ್ಪತ್ತೊಂದು ಪ್ರೌಢಶಾಲೆಗಳಿಂದ ನೂರ ಐದು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಪರಾಹ್ನ ಬಹುಮಾನ ವಿತರಿಸಲಾಯಿತು. ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿಗಳು ಕಾರ್ಯಕ್ರಮವನ್ನು ಬಹಳ ಉತ್ತಮವಾಗಿ ಸಂಯೋಜನೆಯನ್ನು ಮಾಡಿದ್ದರು.

Leave a Comment

error: Content is protected !!