ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌ನಿಂದ 542ನೇ ಸೇವಾ ಯೋಜನೆ: ಅ.1: 11 ಆಶ್ರಮಗಳಿಗೆ ಅಕ್ಕಿ, 11 ಬಡರೋಗಿಗಳಿಗೆ ವಸ್ತ್ರ, 11 ವಿವಿಧ ಬಗೆಯ ಹಣ್ಣುಹಂಪಲು ವಿತರಣೆ: ಡಿ.28: ಮಂಗಳೂರಿನಲ್ಲಿ 12 ಜೋಡಿಗಳ ಉಚಿತ ಸಾಮೂಹಿಕ ವಿವಾಹ

Suddi Udaya


ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇದರ 11ನೇ ವರ್ಷದ ಪ್ರಯುಕ್ತ 542ನೇ ಸೇವಾ ಯೋಜನೆಯಾಗಿ, ಅವಿಭಜಿತ ಜಿಲ್ಲೆಯ 11 ಆಶ್ರಮಗಳಿಗೆ ಅಕ್ಕಿ ವಿತರಣೆ, 11 ಅಶಕ್ತ ಬಡ ರೋಗಿಗಳಿಗೆ ವಸ್ತ್ರ ವಿತರಣೆ, 11 ವಿವಿಧ ಬಗೆಯ ಹಣ್ಣು ಹಂಪಲು ಗಿಡಗಳ ವಿತರಣೆ ಹಾಗೂ ಸಹ ಸಂಘಟನೆಗಳ ಸಹಕಾರದಲ್ಲಿ 12 ಜೋಡಿಗಳ ಉಚಿತ ಸಾಮೂಹಿಕ ವಿವಾಹ, 3 ಬಡ ಕುಟುಂಬಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಹಾಗೂ ಗೌರವ ಸಲಹೆಗಾರರಾದ ರೋಶನ್ ಸ್ವಿಕ್ವೇರಾ ಹೇಳಿದರು.


ಸೆ.25 ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೀಪಕ್ ಜಿ. ಅವರು ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ 11ನೇ ವರ್ಷದ ಪ್ರಯುಕ್ತ ಅವಿಭಜಿತ ಜಿಲ್ಲೆಯ 11 ಅಶಕ್ತ ಆಶ್ರಮಗಳಿಗೆ ತಲಾ 1 ಕ್ವಿಂ. ಅಕ್ಕಿ ಇದರಲ್ಲಿ 50 ಕೆ.ಜಿ ಬೆಳ್ತಂಗಡಿಗೆ ಮತ್ತು 50 ಕೆ.ಜಿ ಕುಚುಲಕ್ಕಿ ವಿತರಣೆ, 11 ಅಶಕ್ತ ಬಡ ರೋಗಿಗಳಿಗೆ ವಸ್ತ್ರ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ 11 ವಿವಿಧ ಬಗೆಯ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ಅ.1ರಂದು ಬೆಳ್ತಂಗಡಿ ಬಸ್‌ನಿಲ್ದಾಣದ ಬಳಿ ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಟ್ರಸ್ಟ್‌ನ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ ಇವರ ಅಧ್ಯಕ್ಷತೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದದ್ದಾರೆ. ವಿಶೇಷ ಆಕರ್ಷಣೆಯಾಗಿ ಮದಿಮಯೇ ತುಳು ಚಲನಚಿತ್ರ ತಂಡ ಹಾಗೂ ಟೋಬಿ ಚಲನಚಿತ್ರದ ಬಾಲನಟ ಅಮನ್ ಎಸ್. ಕರ್ಕೆರ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.


12 ಜೊತೆ ಸಾಮೂಹಿಕ ವಿವಾಹ:
ಟ್ರಸ್ಟ್‌ನ ಗೌರವಾಧ್ಯಕ್ಷ ರೋಶನ್ ಸ್ವಿಕ್ವೇರಾ ಅವರು ಮಾತನಾಡಿ, ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್, ಅರಸು ಫ್ರೆಂಡ್ಸ್ ಬಳಗ ಮಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಅಳಕೆ ಫ್ರೆಂಡ್ಸ್ ಟ್ರಸ್ಟ್ ಮಂಗಳೂರು ಇದರ ನೇತೃತ್ವದಲ್ಲಿ 12 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಾಗೂ 3 ಬಡ ಕುಟುಂಬಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಬರುವ ಡಿ.28ರಂದು ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ತಿಳಿಸಿದರು.


ಸಂಘಟನೆಗಳ ವತಿಯಿಂದ ವಧುವಿಗೆ ಒಂದು ಪವನ್‌ನ ಕರಿಮಣಿಸರ, ಧಾರೆ ಸೀರೆ ನೀಡಲಾಗುವುದು. ಧಾರೆ ಸೀರೆಯನ್ನು ತಾಲೂಕಿನ ಪ್ರತಿಷ್ಠಿತ ವಸ್ತ್ರ ಮಳಿಗೆಯಲ್ಲಿ ಆಯ್ಕೆಗೆ ಅವರಿಗೆ ಅವಕಾಶ ನೀಡಲಾಗುವುದು, ವರನಿಗೆ ವಸ್ತ್ರ ನೀಡಲಾಗುವುದು, ಈಗಾಗಲೇ ಮೂರು ಜೋಡಿ ನಮ್ಮಲ್ಲಿ ಹೆಸರು ನೀಡಿದ್ದಾರೆ. ಉಚಿತ ವಿವಾಹ ನೋಂದಾವಣೆಯ ಪ್ರಕ್ರಿಯೆನ್ನು ವಕೀಲರಾದ ಯದುನಂದನ್ ನಿರ್ವಹಿಸುತ್ತಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಆಸಕ್ತಿ ಇರುವವರು ಸಂಘಟನೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮೂರು ಬಡ ಕುಟುಂಬದವರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನಲ್ಲಿ ಮನೆ ನಿರ್ಮಾಣದ ಕಾರ್ಯ ನಡೆಯುತ್ತಿದೆ.


ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌ನ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ, ಸಂಚಾಲಕ ಶಶಿಕಾಂತ್, ಕಾರ್ಯದರ್ಶಿ ಪ್ರಶಾಂತ್ ಗುರುವಾಯನಕೆರೆ ಉಪಸ್ಥಿತರಿದ್ದರು.

Leave a Comment

error: Content is protected !!