ಉಜಿರೆ ರುಡ್‌ಸೆಟ್ ಸಂಸ್ಥೆಯ ಬ್ಯೂಟಿಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಉಜಿರೆ: ಯುವಶಕ್ತಿಯನ್ನು ಉದ್ದಿಮೆದಾರರನ್ನಾಗಿ ರೂಪಿಸುವಲ್ಲಿ ರುಡ್‌ಸೆಟ್ ಸಂಸ್ಥೆಯ ಪಾತ್ರ ಹಿರಿದು. ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಠಿ ಚಿಂತನೆ ಸುಮಾರು 4 ದಶಕಗಳ ಹಿಂದೆಯೆ ಈ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು. ದೇಶವೇ ಮೆಚ್ಚುವ ಈ ಮಹಾನ್ ಸಂಸ್ಥೆಯಿಂದ ಇಂದು ಲಕ್ಷಾಂತರ ಯುವ ಜನರು ತಮ್ಮ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವುದು ಇಲ್ಲಿನ ತರಬೇತಿಯ ವೈಶಿಷ್ಠ್ಯತೆಯನ್ನು ತಿಳಿಸಿಕೊಡುತ್ತದೆ. ಕಡಿಮೆ ಅವಧಿಯಲ್ಲಿ ವಸತಿಯುತವಾಗಿ ಪರಿಪೂರ್ಣ ತರಬೇತಿಯನ್ನು ನೀಡುವುದಲ್ಲದೆ ಸ್ವ ಉದ್ಯೋಗವನ್ನು ಸ್ಥಾಪಿಸುವಲ್ಲಿ ಬ್ಯಾಂಕ್ ಮೂಲಕ ಹಣಕಾಸಿನ ನೆರವನ್ನು ಸಹ ಪಡೆದುಕೊಳ್ಳುವ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತದೆ. ಬ್ಯೂಟಿಪಾರ್ಲರ್ ಪ್ರಸ್ತುತ ದಿನಗಳಲ್ಲಿ ಗ್ರಾಮ ಮಟ್ಟದಲ್ಲೂ ಅತೀ ಬೇಡಿಕೆಯನ್ನು ಹೊಂದಿರುವ ಒಂದು ಸ್ವ ಉದ್ಯೋಗ ಕ್ಷೇತ್ರ. ಈ ನಿಟ್ಟಿನಲ್ಲಿ ನಿಮ್ಮಲ್ಲಿ ಬರುವ ಗ್ರಾಹಕನ ಸಂಪೂರ್ಣ ಜವಾಬ್ದಾರಿಯನ್ನು ಅರಿತು ಉತ್ತಮ ಸೇವೆಯನ್ನು ನೀಡಿ ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರವರು ಅಭಿಪ್ರಾಯ ಪಟ್ಟರು.

ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಬ್ಯೂಟಿಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರರವರು ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿ ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು, ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್‌ರವರು ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿದರು. ತರಬೇತಿಯ ಅತಿಥಿ ಉಪನ್ಯಾಸಕಿ ಶ್ರೀಮತಿ ಮಾಧವಿ ರೈ ರವರು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರ್ವಹಿಸಿದರೆ, ಹಿರಿಯ ಉಪನ್ಯಾಸಕಿ ಶ್ರೀಮತಿ ಅನಸೂಯರವರು ಧನ್ಯವಾದವಿತ್ತರು. ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬ್ಯೂಟಿಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿಯ 35 ಶಿಬಿರಾರ್ಥಿಗಳ ಜೊತೆಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿಯ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Leave a Comment

error: Content is protected !!