ಜಮೀಯತುಲ್ ಫಲಾಹ್ ಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

Suddi Udaya

ಬೆಳ್ತಂಗಡಿ; ಉದ್ಯೋಗದ ಗುರಿಯ ಹೊರತಾಗಿ ಜ್ಞಾನದ ವೃದ್ದಿಗೆ ಓದುವುದು ಮುಖ್ಯ ಎನಿಸಿದಾಗ ಅವಕಾಶದ ಬಾಗಿಲು ತನ್ನಿಂತಾನೇ ತೆರೆದುಕೊಳ್ಳುತ್ತದೆ. ಸರಕಾರಿ ಉದ್ಯೋಗಕ್ಕಾಗಿಯೇ ಶಿಕ್ಷಣ ಪಡೆಯುವುದು ಎಂಬ ನಮ್ಮ ಮನೋಭಾವನೆಯನ್ನು ಬದಲಾಯಿಸಿ, ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಆದಾಯ ಮತ್ತು ಗೌರವ ಸಂಪಾದಿಸಿದವರಿದ್ದಾರೆ ಎಂಬುದನ್ನು ನೋಡಿ ಅನುಸರಿಸಬೇಕಾದುದಿದೆ ಎಂದು ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿ (ಎಡಿಸಿ ಕೇಡರ್) ಡಾ. ಔದ್ರಾಮ ಅಬ್ದುಲ್ ರಹಿಮಾನ್ ಉಜಿರೆ ಹೇಳಿದರು.

ಜಮೀಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲೆ, ಬೆಳ್ತಂಗಡಿ ಘಟಕದ ವತಿಯಿಂದ ಬೆಳ್ತಂಗಡಿಯಲ್ಲಿ ನಡೆದ ಈ‌ ವರ್ಷದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಗೌವರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಹಾಜಿ ಬಿ ಶೇಕುಂಞಿ ವಹಿಸಿದ್ದು, ಜಮೀಯತುಲ್ ಫಲಾಹ್ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡುವ ಕಾರ್ಯ ಮಾಡುತ್ತಿದೆ ಎಂದರು.

ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್ ಎಸ್ ಅವರು, ಜಮೀಯತುಲ್ ಫಲಾಹ್ ಘಟಕವು ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ, ಮಾರ್ಗದರ್ಶನ ಶಿಬಿರ ಆಯೋಜಿಸುತ್ತಿರುವುದರಿಂದ ತಾಲೂಕಿನ ಫಲಿತಾಂಶ ಸಾಧನೆಗೂ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಗೌರವ ಉಪಸ್ಥಿತರಿದ್ದು ಖಿರಾಅತ್ ಪಠಿಸಿದರು.
ಸಮಾರಂಭದಲ್ಲಿ ಡಾ. ಔದ್ರಾಮ, ದಮಾಮ್ ಘಟಕದ ಮಾಜಿ ಅಧ್ಯಕ್ಷ ಸಯ್ಯಿದ್ ಶಾಹುಲ್ ಹಮೀದ್, ಜಿಲ್ಲಾ ಉಪಾಧ್ಯಕ್ಷ ಫರ್ವೇಝ್ ಆಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರು ಕಾರ್ಯಕ್ರಮಕ್ಕೆ ಸಂದರ್ಭೋಚಿತವಾಗಿ ಶುಭ ಕೋರಿದರು.

ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಘಟಕದ ಕಾರ್ಯದರ್ಶಿ ಆಲಿಯಬ್ಬ ಪುಲಾಬೆ ಸ್ವಾಗತಿಸಿ ಪ್ರಸ್ತಾಪವನೆಗೈದರು.
ಕೋಶಾಧಿಕಾರಿ ಅಬ್ಬೋ‌ನು ಮದ್ದಡ್ಕ, ಹಾಲಿ ಮತ್ತು‌ ಮಾಜಿ ಪದಾಧಿಕಾರಿಗಳಾದ ಯು.ಹೆಚ್ ಮುಹಮ್ಮದ್, ಖಾಲಿದ್ ಪುಲಾಬೆ, ಅಬೂಬಕ್ಕರ್ ಕಾಶಿಪಟ್ಣ, ಇಲ್ಯಾಸ್ ಕರಾಯ, ಕೆ.ಎಸ್ ಅಬ್ದುಲ್ಲ, ಇಬ್ರಾಹಿಂ ಮುಸ್ಲಿಯಾರ್, ಕಾಸಿಂ ಮಲ್ಲಿಗೆಮನೆ, ಅಬ್ಬಾಸ್,‌ಉಮರ್ ಅಹಮ್ಮದ್, ಎಸ್.ಎಂ ತಂಙಳ್, ಅಶ್ರಫ್ ಚಿಲಿಂಬಿ, ಉಸ್ಮಾನ್ ಆಲಂದಿಲ, ಹಮೀದ್, ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಸಾಧಕರಾದ ಫಾತಿಮಾ ಶಝಾ ಮತ್ತು ತಸ್ಲೀಮಾ ಅವರಿಗೆ ಪ್ರತಿಭಾ ಪುರಸ್ಕಾರ, 86 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು. ಅಲ್ಪ ಸಂಖ್ಯಾತ ಇಲಾಖೆಯ ಮುಹಮ್ಮದ್ ನಝೀರ್ ವಿದ್ಯಾರ್ಥಿಗಳ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ಘಟಕದ ಮಾಜಿ ಅಧ್ಯಕ್ಷ
ಉಮರ್‌ಕುಂಞಿ ನಾಡ್ಜೆ ವಂದಿಸಿದರು.

Leave a Comment

error: Content is protected !!