ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಿತ್ತಿ ಪತ್ರಿಕೆ ಅನಾವರಣ

Suddi Udaya

ಉಜಿರೆ: ಭಿತ್ತಿಪತ್ರಿಕೆಗಳಿಂದ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ವಿಚಾರಗಳ ಕುರಿತು ಆಸಕ್ತಿ ಮೂಡಿಸುವ ಕೆಲಸ ಆಗಬೇಕು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನಿಲ್ ಹೆಗ್ಡೆ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅ.11 ರಂದು ‘ವನಿತೆ’ ಭಿತ್ತಿಪತ್ರಿಕೆ ಅನಾವರಣಗೊಳಿಸಿ ಅವರು ಮಾತನಾಡಿದರು.


“ಭಿತ್ತಿಪತ್ರಿಕೆಯಲ್ಲಿರುವ ಮಾಹಿತಿ ನಮ್ಮ ಸ್ವಂತದ್ದಾಗಿದ್ದು, ಚಿಕ್ಕದಾಗಿ ಇರಬೇಕು. ನೋಡಿದ ಕೂಡಲೇ ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಹೇಳುವಂತಿರಬೇಕು” ಎಂದು ಅವರು ತಿಳಿಸಿದರು.
ವಿದ್ಯಾರ್ಥಿನಿಯರು ತಯಾರಿಸಿದ ವಿವಿಧ ಕರಕುಶಲ ವಸ್ತುಗಳನ್ನು ವೀಕ್ಷಿಸಿದ ಅವರು, ಅವುಗಳ ಬಗ್ಗೆ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜನರಿಗೆ ಸ್ವೋದ್ಯೋಗಕ್ಕೆ ನೆರವಾಗುವ ಬಗ್ಗೆ ಸಲಹೆ ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಅವರು ಮಾತನಾಡಿ, “ಭಿತ್ತಿಪತ್ರಿಕೆಯ ಮೂಲಕ ಆರಂಭವಾದ ಈ ಬರವಣಿಗೆ ಮುಂದೆ ನಿಮ್ಮ ಪ್ರತಿಭೆಯನ್ನು ಸಮಾಜ ಗುರುತಿಸುವಂತೆ ಮಾಡಲಿ. ಇದರಿಂದ ಸಂಸ್ಥೆಗೆ ಶುಭವಾಗಲಿ” ಎಂದು ಹಾರೈಸಿದರು.


ಉತ್ತಮ ಭಿತ್ತಿಪತ್ರಿಕೆ ರಚಿಸಿದ ಎರಡು ತಂಡಗಳಿಗೆ ಪ್ರಥಮ, ದ್ವಿತೀಯ ಬಹುಮಾನ ವಿತರಿಸಲಾಯಿತು.
ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು.

Leave a Comment

error: Content is protected !!