ಪಾರೆಂಕಿ ಖಾಸಗಿ ವ್ಯಕ್ತಿಯಿಂದ ಸಾರ್ವಜನಿಕ ಕಾಲು ದಾರಿಗೆ ತಡೆಯಾಗಿದ್ದು, ತೆರವುಗೊಳಿಸಲು ಆಗ್ರಹ: ಸಾರ್ವಜನಿಕರು, ಕೃಷಿಕರ ಕುಂದುಕೊರತೆಗಳ ನಿವಾರಣೆಗೆ ಕನ್ನಡ ಸೇನೆ ಕರ್ನಾಟಕ ಹೋರಾಟ

Suddi Udaya

  • ಸರಕಾರದ ಗಮನ ಸೆಳೆಯಲು ‘ಕನ್ನಡ ಉಳಿಸಿ-ಕನ್ನಡ ಬೆಳೆಸಿ’ ರಥಯಾತ್ರೆ
  • ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಗುರುಪ್ರಸಾದ್ ಮಾಲಾಡಿ ಹೇಳಿಕೆ

ಬೆಳ್ತಂಗಡಿ: ಮಡಂತ್ಯಾರು ಸಮೀಪದ ಪಾರೆಂಕಿಯಲ್ಲಿ ಖಾಸಗಿ ವ್ಯಕ್ತಿಯೋರ್ವರು ಸಾರ್ವಜನಿಕ ಕಾಲುಸಂಕವನ್ನು ಬಂದ್ ಮಾಡಿದ್ದರಿಂದ ಕೃಷಿಕರಿಗೆ ಸಮಸ್ಯೆಯಾಗಿದ್ದು, ಇದನ್ನು ತಕ್ಷಣ ತೆರವುಗೊಳಿಸಬೇಕು, ಕೃಷಿಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಚಿನ್ನದ ಸಾಲದ ಬಡ್ಡಿ ದರವನ್ನು ಶೇ ೩ಕ್ಕೆ ಇಳಿಸಬೇಕು,
ಸರಕಾರದ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಿಸಬೇಕು, ಪಡಿತರ ಚೀಟಿ ತಿದ್ದುಪಡಿಯಲ್ಲಿ ಸರ್ವರ್ ಸಮಸ್ಯೆಯನ್ನು ಪರಿಹರಿಸಬೇಕು ಮೊದಲಾದ ಕೃಷಿಕರ ಕುಂದುಕೊರತೆಗಳ ಬಗ್ಗೆ ಕನ್ನಡ ಸೇನೆ ಕರ್ನಾಟಕ ಇದರ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಕನ್ನಡ ಸೇನೆ ಕರ್ನಾಟಕ ಇದರ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಗುರುಪ್ರಸಾದ್ ಮಾಲಾಡಿ ಹೇಳಿದರು.

ಅವರು ಅ.13ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಡಂತ್ಯಾರು ಗ್ರಾ.ಪಂ ವ್ಯಾಪ್ತಿಯ ಪಾರೆಂಕಿ ಎಂಬಲ್ಲಿ ಸ.ನಂಬ್ರ 141ರ ಪಹಣಿ ಕಲಂ 11ರಲ್ಲಿ 10 ಲಿಂಕ್ಸ್ ಕಾಲುದಾರಿ ಊರ್ಜಿತದಲ್ಲಿದ್ದು, ಈ ಕಾಲು ದಾರಿಯನ್ನು ಖಾಸಗಿ ವ್ಯಕ್ತಿಯೋರ್ವರು ಗೇಟು ಅಳವಡಿಸಿ ಮುಚ್ಚಿದ್ದಾರೆ. ಇದರಿಂದಾಗಿ ಆದಂ ಎಂಬವರ ಅಡಿಕೆ ತೋಟಕ್ಕೆ ಹೋಗಲು ಆಗದೆ ೪೦ ಅಡಿಕೆ ಮರ ನಾಶಗೊಂಡಿದೆ. ಆನೇಕ ಮಂದಿ ಹೈನುಗಾರರು, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಈ ಕಾಲು ದಾರಿಯನ್ನು ಅವಲಂಭಿಸಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಈ ರಸ್ತೆ ಮಹಿಷಮರ್ದಿನಿ ದೇವಸ್ಥಾನಕ್ಕೆ ಬರುವ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಈ ರಸ್ತೆ ಸರಕಾರದ ಮತ್ತು ಸಾರ್ವಜನಿಕರ ಸೊತ್ತಾಗಿರ. ರಸ್ತೆ ತಡೆ ಬಗ್ಗೆ ಗ್ರಾಮ ಪಂಚಾಯಿತ್, ತಹಸೀಲ್ದಾರರಿಗೆ ಮನವಿ ನೀಡಿದ್ದು, ಜಿಲ್ಲಾಧಿಕಾರಿಯವರು ರಸ್ತೆಗಿರುವ ತಡೆ ತಕ್ಷಣ ತೆರವು ಗೊಳಿಸಬೇಕೆಂದು ಆದೇಶ ನೀಡಿದ್ದರೂ, ಅಧಿಕಾರಿಗಳು ತೆರವುಗೊಳಿಸಲು ಹಿಂಜರಿಯುತ್ತಿದ್ದಾರೆ. ಇದರ ಬಗ್ಗೆ ಮಾಜಿ ಸಚಿವ ಗಂಗಾಧರ ಗೌಡರ ಮೂಲಕ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಅಲ್ಲದೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲೂ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ತಕ್ಷಣ ತಡೆ ಗೇಟನ್ನು ತೆರವುಗೊಳಿಸಬೇಕು, ರಸ್ತೆ ತಡೆ ತೆರವುಗೊಳಿಸದಿದ್ದಲ್ಲಿ ಇದರ ಬಗ್ಗೆ ಹಂತ ಹಂತದ ಹೋರಾಟ ನಡೆಸಲಾಗುವುದು. ಇದು ಫಲ ನೀಡದಿದ್ದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.

“ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಮತ್ತು ಆನ್ಲೈನ್ ವ್ಯವಸ್ಥೆ ನಡುವೆ ಹಲವು ಗೊಂದಲದಿಂದ ಫಲಾನುಭವಿಗಳಿಗೆ ಯೋಜನೆ ತಲುಪದರಿಂದ ಪರ್ಯಾಯ ವ್ಯವಸ್ಥೆ ಬಗ್ಗೆ ಗಮನಹರಿಸಬೇಕು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆನ್ ಲೈನ್ ವ್ಯವಸ್ಥೆಯಿಂದ ತಾಂತ್ರಿಕ ತೊಂದರೆ ಆಗುವುದನ್ನು ಸರಿಪಡಿಸಬೇಕು. ಪಡಿತರ ಚೀಟಿ ವ್ಯವಸ್ಥೆಯ ತಿದ್ದುಪಡಿಯಲ್ಲಿ ಸಾರ್ವಜನಿಕರಿಗೆ ತೀವ್ರ ಕಿರುಕುಳ ಆಗುತ್ತಿದ್ದು ಸಮಯಾವಕಾಶ ವಿಸ್ತರಣೆ ಜತೆ ಸಾರ್ವಜನಿಕರ ಕಚೇರಿ ಅಲೆದಾಡುವುದನ್ನು ತಪ್ಪಿಸಬೇಕು, ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿ ಸಮುದಾಯಕ್ಕೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶೂನ್ಯ ಬಡ್ಡಿ ದರದಲ್ಲಿ 2ಲಕ್ಷ ರೂ ಶೈಕ್ಷಣಿಕ ಸಾಲ ನೀಡಬೇಕು, ಮಾರುಕಟ್ಟೆ ವ್ಯವಸ್ಥೆ, ಬೆಳೆ ವಿಮೆ,ಬೆಳೆ ಹಾನಿ ಪರಿಹಾರ,ರಸಗೊಬ್ಬರ ಬೆಲೆ ಏರಿಕೆ,ಬೆಂಬಲ ಬೆಲೆ ಇದರ ಬಗ್ಗೆ ಸರಕಾರ ಗಮನಹರಿಸಬೇಕು. ಟೋಲ್ ಗೇಟ್ ನಲ್ಲಿ ಬೇಕಾಬಿಟ್ಟಿ ದರ ಹೆಚ್ಚು ಮಾಡಿ ವಾಹನ ಸವಾರರಿಗೆ ಕಿರುಕುಳ ನೀಡಬಾರದು.ಈ ವಿಚಾರಗಳ ಬಗ್ಗೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.ಅಲ್ಲದೆ ದಕ ಉಡುಪಿ ಜಿಲ್ಲೆಯಲ್ಲಿ ಪ್ಲಾಟಿಂಗ್ ಭೂ ಪರಿವರ್ತನೆ ಸಮಸ್ಯೆ ಬಗ್ಗೆ ಸಾರ್ವಜನಿಕರು ಕಳೆದ ಐದು ಹತ್ತು ವರ್ಷಗಳಿಂದ ಕಚೇರಿ ಅಲೆದಾಡಿದರು ಕೆಲಸವಾಗುತ್ತಿಲ್ಲ ಪ್ಲಾಟಿಂಗ್ ವ್ಯವಸ್ಥೆ ಮೊದಲಿನಂತೆ ಜಾರಿಯಾಗಬೇಕು. ಸರಕಾರಿ ಕಚೇರಿಗಳಲ್ಲಿ ದಾಖಲೆಗಳನ್ನು ತಪ್ಪಾಗಿ ನೀಡಿ ಸಾರ್ವಜನಿಕರನ್ನು ಅಲೆದಾಡುವಂತೆ ಮಾಡಬಾರದು, ಮೊದಲಾದ ಬೇಡಿಕೆಗಳಿದ್ದು ಈ ಬಗ್ಗೆ ಸರಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು”ಎಂದು ಹೇಳಿದರು.

ಎಸ್.ಪಿ. ಕಚೇರಿ ಪುತ್ತೂರುಗೆ ಆಗ್ರಹ:

ಕರ್ನಾಟಕ ಕನ್ನಡ ಸೇನೆ ದ.ಕ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅವರು ಮಾತನಾಡಿ, ಸರಕಾರದ ಗೌರವ ಹೆಚ್ಚಾಗಿ ಸಾರ್ವಜನಿಕರಿಗೆ ನ್ಯಾಯ ಸಿಗಲಿ,ಕನ್ನಡ ಉಳಿಸಿ ಕನ್ನಡ ಬೆಳೆಸಿ ರಥಯಾತ್ರೆ ಮೂಲಕ ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಹೋರಾಟ ನಡೆಸುವ ಸೂಚನೆ ಈ ಮೂಲಕ ನೀಡಲಾಗುತ್ತಿದೆ. ಈಗಿನ ಸರಕಾರದ ಮುಖ್ಯಮಂತಿಗಳು ಕನ್ನಡ ಸೇನೆ ತಿಳಿಸುವುದೇನೆಂದರೆ, ನಮ್ಮ ಪುತ್ತೂರು ತಾಲೂಕು ಗ್ರಾಮಾಂತರ ಜಿಲ್ಲೆಯಾಗಬೇಕು. ಪುತ್ತೂರಿನ ಎಸ್.ಪಿ ಕಛೇರಿಯನ್ನು ತೆರೆಯವರೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಯು. ಅಬ್ಬಾಸ್, ಪ್ರಧಾನ ಕಾರ್ಯದರ್ಶಿ ಕೃಷ್ಣ, ಉಪಾಧ್ಯಕ್ಷ ಆದಂ, ಮುಖಂಡರಾದ ಜೋಸೆಫ್ ಮೊರಾಸ್ ಉಪಸ್ಥಿತರಿದ್ದರು

Leave a Comment

error: Content is protected !!