ಟವರ್ ಬಿದ್ದ ಕಿರಿಯಾಡಿ ಕ್ರಾಸ್ ಬಳಿ ಮೆಸ್ಕಾಂನಿಂದ ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಪೂರೈಕೆ

Suddi Udaya

ಬೆಳ್ತಂಗಡಿ: ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿವಿದ್ಯುತ್ ಸಂಪರ್ಕದ ಮುಖ್ಯ ಲೈನ್‌ನ ಟವರ್ ಕುಸಿದು ಬಿದ್ದ ಸ್ಥಳದಲ್ಲಿ ಇಂದು ಟವರ್ ಬದಲಿಗೆ ವಿದ್ಯುತ್ ಕಂಬ ಅಳವಡಿಸಿ, ಧರ್ಮಸ್ಥಳ ಕಡೆಗೆ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಉಜಿರೆ ಮೆಸ್ಕಾಂ ಉಪವಿಭಾಗದ ಸ.ಕಾ. ಅಭಿಯಂತರಾದ ಕ್ಲೇಮೆಂಟ್ ಬೆಂಜಮಿನ್ ಬ್ಲಾಗ್ಸ್ ತಿಳಿಸಿದ್ದಾರೆ. ಭಾನುವಾರ ಸಂಜೆ ಜಡಿಮಳೆಗೆ ಕಿರಿಯಾಡಿ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ವಿದ್ಯುತ್ ಟವರ್ ನೆಲದತ್ತ ಬಾಗುತ್ತಿರುವುದನ್ನು ಗಮನಿಸಿದ್ದ ಮೆಸ್ಕಾಂ ಪವರ್ ಮ್ಯಾನ್, ಉಜಿರೆ ಉಪವಿಭಾಗದ ಸ.ಕಾ.ಇಂಜಿನಿಯರ್ ಕ್ಲೇಮೆಂಟ್ ಬೆಂಜಮಿನ್ ಬ್ಲಾಗ್ಸ್ ಅವರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಬೆಂಜಮಿನ್ ಅವರು ದೊಂಡೋಲೆಯ ಪವರ್ ಪ್ರಾಜೆಕ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭ ಪವರ್ ಪ್ರೊಜೆಕ್ಟ್ ನ ಸಿಬ್ಬಂದಿಗಳು ಬಂದಿದ್ದ ಒಂದು ಕಾರು ಮತ್ತು ಬೈಕ್‌ನ ಮೇಲೆಯೇ ವಾಲಿಕೊಂಡು ಬಂದಿದ್ದ ಟವರ್ ಬಿದ್ದು, ಕಾರಿನಲ್ಲಿ ಪವರ್ ಪ್ರಾಜೆಕ್ಟ್ ನ ಗಣೇಶ್ ಎಂಬವರಿದ್ದು, ಸಣ್ಣ, ಪುಟ್ಟ ಗಾಯಕ್ಕೊಳಗಾಗಿ ಅಪಾಯದಿಂದ ಪಾರಾಗಿದ್ದರು.

ಮೆಸ್ಕಾಂ ಇಲಾಖೆಯ ತುರ್ತು ಸ್ಪಂದನೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿತ್ತು. ಟವರ್ ಕುಸಿತದ ಕಾರಣ ಸ್ಥಗಿತಗೊಂಡಿ ಧರ್ಮಸ್ಥಳ ಭಾಗದ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಬದಲಿ ಕಂಬದ ವ್ಯವಸ್ಥೆ ಮಾಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment

error: Content is protected !!