ಡಿಸೆಂಬರ್ ತಿಂಗಳಲ್ಲಿ ಶಿರ್ಲಾಲು ದೇವಸ್ಥಾನದ ಬ್ರಹ್ಮಕಲಶ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Suddi Udaya

ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಡಿಸೆಂಬರ್ 24 ರಿಂದ 28 ರವರೆಗೆ ನಡೆಯಲಿದ್ದು ಆ ಪ್ರಯುಕ್ತ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಭಕ್ತ ಸಮುದಾಯದ ಸಭೆಯು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಸರ್ವ ರೀತಿಯಲ್ಲೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ದೇವರ ಕಾರ್ಯದಲ್ಲಿ ಸಂಪೂರ್ಣವಾಗಿ ಭಾಗವಹಿಸಿಕೊಂಡಾಗ ನಮ್ಮ ಪಾಲಿಗೆ ಪುಣ್ಯ ಪ್ರಾಪ್ತಿಯಾಗಲು ಸಾಧ್ಯವಾಗುತ್ತದೆ. ದೇವರು ಸಂತುಷ್ಟರಾಗುವ ಜೊತೆಗೆ ಭಕ್ತ ಸಮುದಾಯ ಸಂಭ್ರಮಿಸುವ ರೀತಿಯಲ್ಲಿ ಬ್ರಹ್ಮಕಲಶವನ್ನು ಅದ್ದೂರಿಯಾಗಿ ನೆರವೇರಿಸಲು ಎಲ್ಲರೂ ಒಂದಾಗಿ ಸಹಕರಿಸಬೇಕು ಎಂದರು.

ಬ್ರಹ್ಮಕಲಶವನ್ನು ಯಶಸ್ವಿಯಾಗಿ ನಡೆಸುವ ನೆಲೆಯಿಂದ ವಿವಿಧ ಸಮಿತಿ, ಸಂಚಾಲಕರು, ಸದಸ್ಯರನ್ನು ಮಾಡಲಾಗಿದೆ. ಆದರೆ ಭಕ್ತರೆಲ್ಲರ ಒಮ್ಮನಸ್ಸಿನ ಸೇವಾ ಕಾರ್ಯವೇ ಬ್ರಹ್ಮಕಲಶದ ಯಶಸ್ಸಿಗೆ ಕಾರಣವಾಗುತ್ತದೆ ಎಂದ ಅವರು ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಅರ್ಚಕ ಸೂರ್ಯನಾರಾಯಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಎಂ ಪಾರೆಂಕಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್ ಒಡಿಮಾರ್, ಆಡಳಿತ ಸಮಿತಿ ಸದಸ್ಯರು, ಭಜನಾ ಮಂಡಳಿ ಅಧ್ಯಕ್ಷರು, ಮಹಿಳಾ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!