ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಕಾರ್ಯನಿರ್ವಹಣಾ ತಂಡದ ಸಭೆ

Suddi Udaya

ಬೆಳ್ತಂಗಡಿ: ಕೇಂದ್ರ ನರೇಂದ್ರ ಮೋದಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ” ಮೋದಿ ಗ್ಯಾರೆಂಟಿ” ಎಂಬ ಹೆಸರಿನಲ್ಲಿ ಡಿಸೆಂಬರ್ 23 ರಿಂದ ಜನವರಿ 26 ರವರೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ಕೇಂದ್ರ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕೇಂದ್ರದ ಅಧಿಕಾರಿಗಳ ತಂಡ ಬರಲಿದೆ ಎಂದು ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.


ಅವರು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಮಾತನಾಡಿದರು.


2009ರಲ್ಲಿ ಇದ್ದ ಯುಪಿಎ ಸರ್ಕಾರ ಜಿಲ್ಲೆಗೆ ಕೇವಲ 4 ಸಾವಿರ ಕೋಟಿ ಅನುದಾನ ನೀಡಿದ್ದಾರೆ, 2014 ರಿಂದ ಇದುವರೆಗೆ ಜಿಲ್ಲೆಗೆ 52 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಜಿಲ್ಲೆಗೆ ನೀಡಿದೆ. ಮುಂದಿನ ಒಂದು ವರ್ಷದೊಳಗೆ ಜಿಲ್ಲೆಯ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದರು.
ಕಳೆದ ನಾಲ್ಕೂವರೆ ವರ್ಷ ರಾಜ್ಯಾಧ್ಯಕ್ಷನಾಗಿ ರಾಜ್ಯ ಪ್ರವಾಸ ಮಾಡಿ ಸಂಘಟನೆ ಮಾಡಿದ್ದೇನೆ. ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾಗಿದ್ದಾರೆ. ಅವರು ಸಂಘದ ಸ್ವಯಂಸೇವಕರಾಗಿ, ಯುವಮೋರ್ಚಾದ ಪದಾಧಿಕಾರಿಯಾಗಿ, ನನ್ನ ಜೊತೆ ರಾಜ್ಯ ಉಪಾಧ್ಯಕ್ಷರಾಗಿ ಉತ್ತಮ ಸಂಘಟನೆಯನ್ನು ಮಾಡಿದ್ದಾರೆ. ಹಾಗಾಗಿ ಅರ್ಹವಾಗಿ ಅಧ್ಯಕ್ಷರಾಗಿ ‌ಆಯ್ಕೆಯಾಗಿದ್ದಾರೆ ಎಂದರು.


ಕಾರ್ಯನಿರ್ವಹಣಾ ತಂಡದ ಸಭೆಯನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ದೇಶದ ಪ್ರತೀ ಬೂತ್ ಗಳಿಗೆ ಶೇ. 90 ರಷ್ಟು ಪಲಾನುಭವಿಗಳಿಗೆ ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರ ಸರ್ಕಾರ ಯೋಜನೆಗಳನ್ನು ತಲುಪಿಸಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಗೆ ಸುಮಾರು ರೂ. 700 ಕೋಟಿ ಅನುದಾನವನ್ನು ತರುವ ಮೂಲಕ ಕೇಂದ್ರದ ಯೋಜನೆಯನ್ನು ತಾಲೂಕಿಗೆ ಕೊಡುಗೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನ ಇದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಸದರು ಕೇಂದ್ರದ ಅನುದಾನವನ್ನು ತರುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಇದೆ. ಆದರೆ ಬೆಳ್ತಂಗಡಿ ತಾಲೂಕಿಗೆ ಚುನಾವಣೆಯ ಆರು ತಿಂಗಳ ಮೊದಲು ಮಂಜೂರುಗೊಂಡ ಅನೇಕ ಕಾಮಗಾರಿಗಳ ಅನುದಾನವನ್ನು ಈಗಿನ ರಾಜ್ಯದ ಕಾಂಗ್ರೆಸ್ ಸರ್ಕಾರ ತಡೆಹಿಡಿಯುವ ಮೂಲಕ ತಾಲೂಕಿನ ಅಭಿವೃದ್ಧಿಗೆ ತಡೆಯನ್ನು ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ನ ದ್ವೇಷದ ರಾಜಕಾರಣ ಮಾಡುತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ , ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು.
ಬೆಳ್ತಂಗಡಿ ‌ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಮಂಡಲ ಉಪಾಧ್ಯಕ್ಷ ಸೀತಾರಾಮ ಬಿ.ಎಸ್. ವಂದಿಸಿದರು.

Leave a Comment

error: Content is protected !!