ಬೆಳ್ತಂಗಡಿ: ದೋಸೆ ಹಬ್ಬ ಕಾರ್ಯಕ್ರಮದ ಭಾಷಣದಲ್ಲಿ ಶಾಸಕ ಹರೀಶ್ ಪೂಂಜ ಅವರು ನನ್ನ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ನಾನು ಆ ಕೆಲಸ ಮಾಡಿಲ್ಲ, ನಾನು ತಪ್ಪು ಮಾಡಿದ್ದರೆ ಸುರುವಿಗೆ ಮಾರಿಗುಡಿ ಅಮ್ಮ ನನಗೆ ಪ್ರಾಯಶ್ಚಿತ ಮಾಡಲಿ, ಹರೀಶ್ ಪೂಂಜ ಸುಳ್ಳು ಹೇಳಿದ್ದರೆ, ಅವರಿಗೆ ಸರಿಯಾದ ಪ್ರಾಯಶ್ಚಿತ ಮಾಡಲಿ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ನ.22ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ,ದೋಸೆ ಹಬ್ಬಕ್ಕೆ ಲೈಟಿಂಗ್ಸ್ಗೆ ವಿದ್ಯುತ್ ಕಂಬದ ಬಳಿಯಲ್ಲೇ ಕಬ್ಬಿಣದ ಕಂಬ ಹಾಕಿದಾಗ ಇದರಿಂದ ಅಪಾಯವಾಗಬಹುದೆಂದು ಜನರು ಬಂದು ತಿಳಿಸಿದ್ದರಿಂದ ನಾನು ಬಂಟ್ವಾಳ ಮೆಸ್ಕಾಂಗೆ ಹೇಳಿದಾಗ ಅವರು ಬಂದು ಪರಿಶೀಲನೆ ನಡೆಸಿ ಮರದ ಕಂಬ ಹಾಕಲು ಹೇಳಿದ್ದರು. ಆದರೆ ಇವರು ಹಾಕಿಲ್ಲ, ವಿದ್ಯುತ್ಲೈನ್ಗಿಂತ ಎತ್ತರವಿದ್ದ ಮೂರು ಕಬ್ಬಿಣದ ಕಂಬವನ್ನು ಮಾತ್ರ ಬದಲಾಯಿಸಿದ್ದಾರೆ.ಬಸ್ಸ್ಟಾಂಡ್ನಲ್ಲಿ ದೋಸೆ ಹಬ್ಬ ಮಾಡಲು ಅನುಮತಿ ಬೇಕು, ಸಾರ್ವಜನಿಕ ಸಭೆ, ಸುಡುಮದ್ದು, ಭಜನೆ ನಡೆಸುವುದಾದರೂ ಅನುಮತಿ ಬೇಕು, ಇವರನ್ನು ಯಾರೂ ಕೇಳುವರಿಲ್ಲ, ಸಂಬಂಧ ಪಟ್ಟ ಇಲಾಖೆಯವರು ಏನೂ ಮಾಡುತ್ತಿದ್ದರು. ಕೆಎಸ್ಸಾರ್ಟಿಸಿಯವರು ಪರವಾನಿಗೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ನಗರ ಪಂಚಾಯತಿನವರು ಅನುಮತಿ ಕೊಟ್ಟಿಲ್ಲ, ಎನ್.ಒ.ಸಿ ಕೊಟ್ಟಿದ್ದೇವೆ ಎನ್ನುತ್ತಾರೆ. ಎನ್.ಒ.ಸಿ ಎಂದರೆ ಏನು? ಮುಖ್ಯಾಧಿಕಾರಿ ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆ. ನಗರದಲ್ಲಿ ಬ್ಯಾನರ್ ಹಾಕಿದ್ದಕ್ಕೆ ಅನುಮತಿ ಪಡೆದಿಲ್ಲ, ಇದನ್ನು ತೆರವುಗೊಳಿಸುವ ಕಾರ್ಯ ಅಧಿಕಾರಿಗಳು ಮಾಡಿಲ್ಲ, ತಾಲೂಕಿನ ಹೆಚ್ಚಿನ ಅಧಿಕಾರಿಗಳಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ಭಾವನೆಯೇ ಬಂದಿಲ್ಲ, ಈಗಲೂ ಬಿಜೆಪಿಯ ಗುಂಗಿನಲ್ಲೇ ಇದ್ದಾರೆ ಎಂದು ಆರೋಪಿಸಿದರು. ನಾನು ಮೆಸ್ಕಾಂ ಅಧಿಕಾರಿಗೆ ಬೈದಿದ್ದೇನೆ ಎಂದು ಶಾಸಕರು ಆರೋಪಿಸಿದ್ದರು. ಆದರೆ ನಾನು ಅಧಿಕಾರಿಗೆ ಪತ್ರ ಬರೆದು ಕೇಳಿದಾಗ, ನನಗೆ ಬೈದಿಲ್ಲ ಎಂದು ಲೆಟರ್ ಕೊಟ್ಟಿದ್ದಾರೆ ಎಂದು ಸ್ವಷ್ಟಪಡಿಸಿದರು.
ತಾಲೂಕಿನಲ್ಲಿ ನಿರಂತವಾಗಿ ಮರಳು ದಂಧೆ ನಡೆಯುತ್ತಿದೆ. ರಾತ್ರಿ ಸಮಯ ಇದನ್ನು ಮಾಡುತ್ತಿದ್ದಾರೆ. ಇದರಲ್ಲಿ ಪೊಲೀಸ್ ಇಲಾಖೆ, ಗ್ರಾ.ಪಂ ಪಿಡಿಒಗಳು, ಗಣಿಗಾರಿಕೆ ಇಲಾಖೆ, ಈ ಹಿಂದಿನ ತಹಶೀಲ್ದಾರ್ ಇವರೆಲ್ಲ ಭಾಗಿಯಾಗಿದ್ದಾರೆ. ಮರಳು ದಂಧೆಯವರು ಕಡಿರುದ್ಯಾವರದಲ್ಲಿ ಮಹಿಳೆಗೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಚಾರ್ಮಾಡಿಯಲ್ಲಿ ಫಾರೆಸ್ಟ್ಗೇಟ್, ಪೊಲೀಸ್ ಗೇಟ್ ಇದ್ದರೂ, ಮಧ್ಯರಾತ್ರಿಯಲ್ಲಿ ಮೂಡಿಗೆರೆಗೆ ಮರಳು ಹೋಗುತ್ತಿದೆ. ಗೇಟಿನಲ್ಲಿ ಫಾರೆಸ್ಟುಗಳು, ಪೊಲೀಸರು ಏನು ಮಾಡುತ್ತಿದ್ದಾರೆ ಇವರ ಬಗ್ಗೆ ಡಿಎಫ್ಒ ಹಾಗೂ ಎಸ್.ಪಿ ಹಾಗೂ ಮುಖ್ಯಮಂತ್ರಿಗಳಿಗೆ ತನಿಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಕಳೆದ ಪತ್ರಿಕಾಗೋಷ್ಠಿಯಲ್ಲಿ ನಾನು ಪ್ರಮಾಣ ಮಾಡಲು ಸಿದ್ಧ ಎಂದು ಶಾಸಕರ ಹರೀಶ್ ಪೂಂಜರಿಗೆ ಸವಾಲು ಹಾಕಿದ್ದೆ. ಅವರು ಪಲಾಯನ ಮಾಡಿದ್ದಾರೆ. ಅವತ್ತು ತಲವಾರು ಪ್ರಕರಣ ನಡೆಯಿತು. ಅದು ಏನಾಯಿತು ಎಂಬುದು ಗೊತ್ತಾಗಿಲ್ಲ, ಇದನ್ನು ಸಿಬಿಐಯಿಂದ ತನಿಖೆ ಮಾಡಿಸಲು ಬರೆಯುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಹೋಗಿತ್ತೀರಾ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಂಗೇರರು ನನಗೂ ಕಂಬಳಕ್ಕೆ ಯಾವುದೇ ಸಂಬಂಧ ಇಲ್ಲ, ನನಗೆ ಆಮಂತ್ರಣ ಪತ್ರ ಕೂಡಾ ಬಂದಿಲ್ಲ, ಬಂದರೂ ಹೋಗುವುದಿಲ್ಲ, ದುಡ್ಡು ಜಾಸ್ತಿಯಾದವರು ಬೆಂಗಳೂರಿನಲ್ಲಿ ಕಂಬಳ ಮಾಡುತ್ತಾರೆ. ಕಂಬಳ ಬೆಂಗಳೂರಿನಲ್ಲಿ ಮಾಡಬೇಕೆಂದಿಲ್ಲ, ನೋಡುವವರು ಜಿಲ್ಲೆಗೆ ಬಂದು ನೋಡುತ್ತಾರೆ. ದುಡ್ಡನ್ನುಕೊಂಡೋಗಿ ಹೊಳಗೆ ಬಿಸಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್ ಕೊಕ್ಕಡ, ಜಿ.ಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಜಯವಿಕ್ರಮ್ ಕಲ್ಲಾಪು ಉಪಸ್ಥಿತರಿದ್ದರು.











