ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ , ತಾಲೂಕು ಸಮಿತಿಯ ಆಶ್ರಯದಲ್ಲಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ‘ವಾಲ್ಮೀಕಿ ಜೀವನಾದರ್ಶ’ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ಕರ್ನಾಟಕ, ಬೆಳ್ತಂಗಡಿ ತಾಲೂಕು ಸಮಿತಿಯ ಆಶ್ರಯದಲ್ಲಿ ನ.20 ರಂದು ವಿವೇಕಾನಂದ ಪದವಿ ಪೂರ್ವ ಕಾಲೇಜು ಮುಂಡಾಜೆಯಲ್ಲಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ವಾಲ್ಮೀಕಿ ಜೀವನಾದರ್ಶ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.

ಉಪನ್ಯಾಸವನ್ನು ನಿವೃತ್ತ ಪ್ರಾಂಶುಪಾಲರು, ಗಮಕ ಕಲಾವಿದರು, ಬರಹಗಾರರೂ ಆಗಿರುವ ಶ್ರೀ ವಿಶ್ವೇಶ್ವರ ಭಟ್ ಉಂಡೆಮನೆ ಇವರು ನಡೆಸಿಕೊಟ್ಟರು. “ಎಲ್ಲರಿಗೂ ಬೇಡವಾಗಿದ್ದ ಕ್ರೂರ ಬೇಡ ರತ್ನಾಕರನು ಸರ್ವರಿಂದಲೂ ಪೂಜಿಸಲ್ಪಡುವ ಮಹರ್ಷಿ ವಾಲ್ಮೀಕಿಯಾಗಿ, ಮಹಾಕಾವ್ಯ ರಾಮಾಯಣದ ಕರ್ತೃವಾಗಿ ಆದಿಕವಿ ಎಂದೆನಿಸಿಕೊಂಡು ತನ್ನ ಜೀವನದಿಂದ ಮತ್ತು ರಾಮಾಯಣದಿಂದ ಯಾವ ರೀತಿ ಆದರ್ಶವನ್ನು ಮೆರೆದರು” ಎನ್ನುವುದನ್ನು ಅತ್ಯಂತ ಅದ್ಭುತವಾಗಿ, ಮನೋಜ್ಞವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ  ಇದರ  ಅಧ್ಯಕ್ಷರಾಗಿರುವ ಶ್ರೀ ವಿನಯಚಂದ್ರ ಇವರು ವಹಿಸಿಕೊಂಡು ಮಹನೀಯರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು, ತಮ್ಮ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಕರೆಯಿತ್ತರು. 
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜೋಲಿ ಡಿಸೋಜ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿನಿಯರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಅಭಾಸಾಪ ಬೆಳ್ತಂಗಡಿ ಸಮಿತಿಯ ಅಧ್ಯಕ್ಷರಾದ ಪ್ರೊ.ಗಣಪತಿ ಭಟ್ ಕುಳಮರ್ವರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು.

ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ವಸಂತಿಯವರು ಧನ್ಯವಾದವಿತ್ತರು. ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು. 

ಅಭಾಸಾಪ ವಿಭಾಗ ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ , ಬೆಳ್ತಂಗಡಿ ಸಮಿತಿಯ ಜೊತೆ ಕಾರ್ಯದರ್ಶಿ ನಾರಾಯಣ ಪಡ್ಕೆ ಮಹಿಳಾ ಪ್ರಕಾರದ ಸದಸ್ಯೆ ಶ್ರೀಮತಿ ಭಾರತಿ ಪಡ್ಕೆ , ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

Leave a Comment

error: Content is protected !!