ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ: ನಿನ್ನೆ ನಡೆದ ಸಭೆಯಲ್ಲಿ ರಾಜೀನಾಮೆ ನೀಡಲು ನಿರ್ಣಯಿಸಲಾಗಿದೆಯೇ ಹೊರತು ನಾವು ರಾಜೀನಾಮೆ ನೀಡಿಲ್ಲ: ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿಕೆ

Suddi Udaya

ಬೆಳ್ತಂಗಡಿ: ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ, ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಿಗನುಸಾರ ನಾವು ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದು, ಸಂಘದ ಅಭಿವೃದ್ಧಿಯನ್ನು ಸಹಿಸದ ಕೆಲವು ನಿರ್ದೇಕರು ಸಂಘಟಕ್ಕೆ ಕೆಟ್ಟ ಹೆಸರನ್ನು ತರಲು ಅವ್ಯವಹಾರ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದು, ಅವ್ಯವಹಾರ ಎಂದು ಆರೋಪ ಮಾಡುವವರು ದಾಖಲೆಗಳನ್ನು ನೀಡಲಿ. ನಿನ್ನೆ ನಡೆದ ಸಭೆಯಲ್ಲಿ ರಾಜೀನಾಮೆ ನೀಡಲು ನಿರ್ಣಯಿಸಲಾಗಿದೆಯೇ ಹೊರತು ನಾವು ರಾಜೀನಾಮೆ ನೀಡಿಲ್ಲ, ಅವ್ಯವಹಾರ ಆರೋಪ ಮಾಡುವವರು ಇದನ್ನು ದಾಖಲೆ ಸಹಿತ ಸಾಭೀತು ಮಾಡಲಿ, ಸಾಬೀತು ಆದರೆ ನಾವು ರಾಜೀನಾಮೆ ನೀಡುತ್ತೇವೆ ಎಂದು ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿದ್ದಾರೆ.

ಅವರು ನ.30ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಲೆಬೆಟ್ಟು ಹಾಲು ಉತ್ಪಾದಕರ ಸಂಘದಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಕಳೆದ 7 ವರ್ಷಗಳಿಂದ ನಡೆಯುತ್ತಾ ಬಂದಿದೆ. ಸಂಘವು 9 ಲಕ್ಷ ನಿವ್ವಳ ಲಾಭದಲ್ಲಿದ್ದು, 16 ಲಕ್ಷ ಡಿಪೋಸಿಟ್ ಇದೆ. ಈ ಸಂಘ ಉತ್ತಮ ಸಂಘ ಎಂದು ಅಧಿಕಾರಿಗಳಿಂದ ಶ್ಲಾಘನೆ ದೊರೆತಿದೆ. ಒಂದು ವೇಳೆ ಅವ್ಯವಹಾರ ನಡೆದಿದ್ದೇ ಆದರೆ ಸಂಘವು ಇಷ್ಟೊಂದು ಲಾಭ ಗಳಿಸಲು ಹೇಗೆ ಸಾಧ್ಯ ?. ಅವ್ಯವಹಾರಗಳೇನಾದರು ನಡೆದಿದ್ದರೆ ಲೆಕ್ಕಪರಿಶೋಧನಾ ವೇಳೆಯಲ್ಲಿ ಕಂಡು ಬರುತ್ತಿತ್ತು. ಆದರೆ ಯಾವುದೇ ಅವಧಿಯಲ್ಲೂ ಅವ್ಯವಹಾರವಾಗಿರುವ ಬಗ್ಗೆ ಲೆಕ್ಕಪರಿಶೀಧನೆಯಲ್ಲಿ ದಾಖಲಾಗಿಲ್ಲ. ಉದ್ದೇಶಪೂರ್ವಕವಾಗಿ ನಮ್ಮ ವಿರುದ್ದ ಸಂಚುರೂಪಿಸಲಾಗುತ್ತಿದೆ ಎಂದು ಪ್ರಮೋದ್ ಕುಮಾರ್ ಆರೋಪಿಸಿದರು.

ಈ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಳು ಸುಳ್ಳು ಸುದ್ದಿಗಳನ್ನು ನೀಡುತ್ತಾ ಜನರಿಗೆ ಮತ್ತು ಸಂಘದ ಸದಸ್ಯರಿಗೆ ತಪ್ಪು ಸಂದೇಶಗಳನ್ನು ಪುಷ್ಪರಾಜ್ ಜೈನ್, ಉದಯ ಜೈನ್ ಮತ್ತು ಲಕ್ಷ್ಮಿಯವರು ನೀಡುತ್ತಿದ್ದಾರೆ ಮತ್ತು ವಿನಾ ಕಾರಣ ಸಂಘದ ಹೆಸರನ್ನು ಹಾಳು ಮಾಡಲು ಪಿತೂರಿ ನಡೆಸುತ್ತಿದ್ದಾರೆ. ಅವ್ಯವಹಾರ ನಡೆದಿದೆ ಎಂದಾದರೆ ಸೂಕ್ತ ದಾಖಲೆಗಳನ್ನು ನೀಡಲಿ. ಸಂಘದ ಸದಸ್ಯ ನಾರಾಯಣ ಭಟ್ ಮಾಧ್ಯಮದ ಮುಂದೆ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುತ್ತಾರೆ. ಬಾಯಿಗೆ ಬಂದ ಹಾಗೆ ೨ ಲಕ್ಷ, ೩ ಲಕ್ಷ, ೭ ಲಕ್ಷ ಎಂದು ಇದಕ್ಕೆ ಸೂಕ್ತ ದಾಖಲೆ ನೀಡಿ ಸಾಬೀತು ಪಡಿಸಲಿ. ತಪ್ಪಿದಲ್ಲಿ ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ನೀಡಲು ಹಿಂಜರಿಯುವುದಿಲ್ಲ ಎಂದು ಪ್ರಮೋದ್ ಕುಮಾರ್ ತಿಳಿಸಿದರು.

ಸಂಘದ ಕಾರ್ಯದರ್ಶಿಯವರಾದ ಜಯಶ್ರೀ ಇವರ ಕುರಿತು ಮಾನ್ಯ ನ್ಯಾಯಾಲಯವು ಕೂಲಂಕುಷವಾಗಿ ತನಿಖೆ ಮಾಡಿದ ನಂತರ ಕೋರ್ಟ್ ಆದೇಶದಂತೆ ಕಾರ್ಯದರ್ಶಿಯವರನ್ನು ಮರು ನೇಮಕ ಮಾಡಲಾಗಿದೆ. ನಿನ್ನೆ ವಿಸ್ತರಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಂಘದ ಆಡಳಿತ ಮಂಡಳಿ ಸದಸ್ಯರ ಸಭೆಗೆ ಸಂಘದ ಸದಸ್ಯರು ಹಾಗೂ ಸದಸ್ಯರಲ್ಲದ ಸಾರ್ವಜನಿಕರನ್ನು ಸೇರಿಸಿ ಗಲಾಟೆ ಮಾಡಿಸಿರುತ್ತಾರೆ. ಸಂಘಕ್ಕೆ ಬೀಗ ಹಾಕಲು ಯತ್ನಿಸಿರುವುದು, ಹಾಲು ತೆಗೆಯಲು ಬಿಡದಿರುವುದು ಇದು ಸಂಘದ ಅಭಿವೃದ್ಧಿ ದೃಷ್ಟಿಯಿಂದ ಅಕ್ಷಮ್ಯ ಅಪರಾಧ ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸಂಘದ ನಿರ್ದೇಶಕರಾದ ಪುಷ್ಪರಾಜ್ ಜೈನ್‌ರವರು ನಾನು ಸಾರ್ವಜನಿಕರ ಎದುರು ಅವರಿಗೆ ಬೆದರಿಕೆ ಹಾಕಿರುತ್ತೇನೆ ಎಂದು ಆರೋಪಿಸಿದ್ದು, ನಾನು ತೆರಳುವಾಗ ಸದ್ರಿ ಸ್ಥಳದಲ್ಲಿ ಪೊಲೀಸ್ ಹಾಗೂ ವಿಸ್ತರಣಾಧಿಕಾರಿ, ಸಂಘದ ೯ ಜನ ನಿರ್ದೇಶಕರಿದ್ದು, ನಾನು ಯಾವುದೇ ಬೆದರಿಕೆ ಹಾಕಿಲ್ಲವೆಂಬುದಕ್ಕೆ ಇವರುಗಳೇ ಸಾಕ್ಷಿ ಎಂದು ಸ್ವಷ್ಟಪಡಿಸಿದರು.

ಅಧ್ಯಕ್ಷರಾದ ನಾನು ಸಂಘಕ್ಕೆ ಹಾಲು ಹಾಕುತ್ತಿಲ್ಲ ಎಂದು ಹೇಳಿ ದೂರು ನೀಡಿರುತ್ತಾರೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಂತೆ ಐದು ವರ್ಷಗಳ ಪೈಕಿ ಹಿಂದಿನ ಸಹಕಾರಿ ವರ್ಷದಲ್ಲಿ ಸಂಘಕ್ಕೆ ೧೮೦ ದಿನ ಹಾಲು ಸರಬರಾಜು ಮಾಡಬೇಕೆಂದು ಉಪನಿಯಮದಲ್ಲಿ ಇರುತ್ತದೆ. ಇವರು ಮಾಡುವ ಆರೋಪಗಳು ಸತ್ಯಕ್ಕೆ ದೂರವಾಗಿರುತ್ತದೆ.

ನಿನ್ನೆ ನಡೆದ ಸಭೆಯಲ್ಲಿ ಒತ್ತಾಯಪೂರ್ವಕವಾಗಿ ಸಾಮೂಹಿಕ ರಾಜೀನಾಮೆಗೆ ನಿರ್ಣಯಿಸಲಾಗಿದೆ. ಆದರೆ ನಾವು ಸಭೆಗೆ ಹಾಜರಾತಿಗೆ ಮಾತ್ರ ಸಹಿ ಮಾಡಿದ್ದೇವೆ. ನಿರ್ಣಯಕ್ಕೆ ಸಹಿ ಮಾಡಿಲ್ಲ, ನಾವು ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ, ಈಗ ಅವ್ಯವಹಾರ ಆಗಿದೆ ಎಂದು ಆರೋಪ ಮಾಡುತ್ತಿರುವವರು ತಮ್ಮ ಆರೋಪವನ್ನು ಸಾಬೀತು ಮಾಡಲಿ, ಅವರ ಆರೋಪ ಸಾಭೀತು ಆದರೆ ನಾವು ರಾಜೀನಾಮೆ ನೀಡುತ್ತೇವೆ ಎಂದು ಅಧ್ಯಕ್ಷರು ತಿಳಿಸಿದರು. ನಿರ್ದೇಶಕ ದಾಮೋದರ ಗೌಡ ಅವರು ಮಾತನಾಡಿ, ನಾವು ಯಾರೂ ರಾಜೀನಾಮೆ ನೀಡಿಲ್ಲ, ಸಭೆಯಲ್ಲಿ ನಿರ್ಣಯ ಆಗಿದೆ ಅಷ್ಟೇ, ನಾರಾಯಣ ಭಟ್ ಅವರು ರೂ.7ಲಕ್ಷ ಅವ್ಯವಹಾರ ಆಗಿದೆ ಎಂದು ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ಅದನ್ನು ಸಾಭೀತು ಪಡಿಸಲಿ ಎಂದು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಗಂಗಯ್ಯ ಗೌಡ, ನಿರ್ದೇಶಕರುಗಳಾದ ಸಂಜೀವ ಮಲೆಕುಡಿಯ, ಶೇಷಪ್ಪ, ಜಯಂತ ಗೌಡ, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Leave a Comment

error: Content is protected !!