ಬೆಂಗಳೂರು: ಕೊಡಗು ಮತ್ತು ದ.ಕ. ಗೌಡ ಸಮಾಜದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ “ಕಲಾ ಐಸಿರಿ”

Suddi Udaya

ಬೆಂಗಳೂರು : ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಬೆಂಗಳೂರು ಇದರ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಕಲಾ ಐಸಿರಿ 2023 ನವೆಂಬರ್ 26ನೇ ಭಾನುವಾರದಂದು “ನಮ್ಮನೆ” ಸಾಂಸ್ಕೃತಿಕ ಕಲಾ ಕೇಂದ್ರ, ಲಗ್ಗೆರೆ, ಬೆಂಗಳೂರು ಇಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಎಲ್ಲಾ ಸಮಾಜ ಬಾಂಧವರನ್ನು ಹಾಗೂ ಸ್ಪರ್ಧಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ಕುದುಕುಳಿ ಮಿಲನ ಭರತ್ ಅವರು ಮಾತನಾಡಿ ನಮ್ಮ ಗೌಡ ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯಲ್ಲಿ ಮಾತೃಭಾಷೆಯಾದ ತುಳು ಹಾಗೂ ಅರೆಭಾಷೆಯ ಬಳಕೆಯ ಮಹತ್ವ ಹಾಗೂ ಅಗತ್ಯತೆ ಯನ್ನು ವಿವರಿಸಿದರು. ನಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ತರ ವಾದ ಪಾತ್ರ ವಹಿಸುತ್ತದೆ ಎಂದರು.


ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಕುಶಾಲಪ್ಪ, ಯುವ ಘಟಕದ ಅಧ್ಯಕ್ಷೆ ಶ್ರೀಮತಿ ನೇಹಾ ಪೋರೆಯನ ಹಾಗೂ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಗೋಪಾಲಕೃಷ್ಣ ಪಿತ್ತೀಲು ಉಪಸ್ಥಿರಿದ್ದರು.

ಸಂಪ್ರದಾಯದಂತೆ ಬೆಳಿಗ್ಗೆ 08:30ಕ್ಕೆ ಸರಿಯಾಗಿ ಮಹಿಳಾ ಘಟಕದವರು ಕಾವೇರಿ ಸಂಕ್ರಮಣ ಪ್ರಯುಕ್ತ ಕಾವೇರಿ ಮಾತೆಯ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಿ ನೆರೆದವರೆಲ್ಲರಿಗೂ ತೀರ್ಥ ಪ್ರಸಾದ ಹಂಚಲಾಯಿತು. ಭವ್ಯ ವೇದಿಕೆಯಲ್ಲಿ ಸಂಜೆ 8ರ ವರೆಗೆ ನಡೆದ ವೈವಿಧ್ಯಮಯ ಕಾರ್ಯಕ್ರಮಗಳಾದ ಚಿತ್ರ ಬಿಡಿಸುವುದು, ರಂಗೋಲಿ, ಭರತ ನಾಟ್ಯ, ನೃತ್ಯ, ಹಾಡು, ಕಿರುನಾಟಕ, ರಸ ಪ್ರಶ್ನೆ, ಫ್ಯಾಷನ್ ಶೋ, ಸೋಬಾನೆ ಇತ್ಯಾದಿ ಸ್ಪರ್ಧೆಗಳಲ್ಲಿ ಮಂಗಳೂರು, ಮೈಸೂರು , ಕೊಡಗು ಹಾಗೂ ಬೆಂಗಳೂರಿನ ಮೂಲೆ ಮೂಲೆ ಗಳಿಂದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು.

ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಯ ಬಗ್ಗೆ ರಸಪ್ರಶ್ನೆ, ಆಶುಭಾಷಣ ಹಾಗೂ ಸಣ್ಣ ಮಕ್ಕಳಿಗೆ ಮುಖ ವರ್ಣಿಕೆ (face painting) ಗಳು ವಿಶೇಷ ಆಕರ್ಷಣೆಯಾಗಿ ನೆರೆದಿದ್ದ ನೂರಾರು ಸಮಾಜ ಬಾಂಧವರ ಮೆಚ್ಚುಗೆಗೆ ಪಾತ್ರ ವಾಯಿತು. ನೆರೆದಿದ್ದ ಹತ್ತು ಕುಟುಂಬ ಹದಿನೆಂಟು ಗೋತ್ರದ ಎಲ್ಲಾ ಗೌಡ ಬಂಧುಗಳಿಗೂ ರುಚಿರುಚಿಯಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಮಹಿಳಾ ಘಟಕ, ಯುವ ಘಟಕ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಬಹಳ ಹುರುಪಿನಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Comment

error: Content is protected !!