ವೇಣೂರು: ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಜನಮಂಗಲ ಕಾರ್ಯಕ್ರಮದ ಅಂಗವಾಗಿ ಉಚಿತ ಬೃಹತ್ ವೈದ್ಯಕೀಯ ಶಿಬಿರ ಡಿ. 17 ರಂದು ವೇಣೂರಿನ ಭರತೇಶ ಸಮುದಾಯ ಸಭಾಭವನದಲ್ಲಿ ಜರಗಲಿದೆ ಎಂದು ಮಸ್ತಕಾಭಿಷೇಕ ಸಮಿತಿಯ ಪ್ರದಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಹೇಳಿದ್ದಾರೆ.
ಅವರು ವೇಣೂರು ಯಾತ್ರಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಬೆಳಿಗ್ಗೆ 9ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮ ಪ್ರಸಾದ್ ಅಜಿಲ ವಹಿಸಲಿದ್ದಾರೆ. ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ ಪ್ರವೀಣ್ ಕುಮಾರ್ ಇಂದ್ರ ವೇಣೂರು ಗ್ರಾಪಂ ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಪ್ಯಾಕ್ಸ್ ಅಧ್ಯಕ್ಷ ಸುಂದರ ಹೆಗಡೆ ಬಿ.ಇ. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ,ರಕ್ತದಾನ ಶಿಬಿರ ಮೂಳೆ ಸಾಂಧ್ರತೆಯ ಪರೀಕ್ಷೆ, ಹೃದ್ರೋಗ ತಪಾಸಣೆ, ಆಯುರ್ವೇದ ಚಿಕಿತ್ಸೆ, ಸ್ಥನ ರೋಗ ತಪಾಸಣೆ, ಸ್ಕ್ರೀನಿಂಗ್, ರಕ್ತಪರೀಕ್ಷೆ ಇತ್ಯಾದಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಸ್ತಕಾಭಿಷೇಕದ ಸ್ವಾಗತ ಸಮಿತಿ ಸಂಚಾಲಕ ಶಿವಪ್ರಸಾದ್ ಅಜಿಲ, ಕೋಶಾಧಿಕಾರಿ ನೀಲೇಶ್ ಕಂಬಳಿ, ಜೊತೆ ಕಾರ್ಯದರ್ಶಿ ಡಾ| ಜಗದೀಶ್, ಸಂಚಾಲಕ ಡಾ| ಶಾಂತಿಪ್ರಸಾದ್ ಉಪಸ್ಥಿತರಿದ್ದರು.













