ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಸ್ಕಾರ್ಫ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಸತತ ಮಳೆಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಣೆಯಾಗಿದ್ದರೂ, ವಿದ್ಯಾರ್ಥಿಗಳು ಆ ಸಮಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಸ್ಕಾರ್ಫ್ ಧರಿಸಿ ಅಂತರರಾಷ್ಟ್ರೀಯ ಸ್ಕಾರ್ಫ್ ದಿನವನ್ನು ಸಂಭ್ರಮದಿಂದ ಆಚರಿಸಿದರು. ಜೊತೆಗೆ, ತಮ್ಮ ಸುತ್ತಮುತ್ತಲಿನ ಹೊಸ ವ್ಯಕ್ತಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯನ್ನು ಪರಿಚಯಿಸಿ, ಅದರ ಉದ್ದೇಶ, ಮಹತ್ವ, ಆದರ್ಶಗಳು, ನಿಯಮಗಳು ಹಾಗೂ ಕರ್ತವ್ಯಗಳ ಕುರಿತು ಅರಿವು ಮೂಡಿಸಿದರು.
ಈ ಮೂಲಕ “ಯಾವುದೇ ಪರಿಸ್ಥಿತಿಯಲ್ಲಿಯೂ ಸೇವೆಗೆ ಸದಾ ಸಿದ್ಧ” ಎಂಬ ಸ್ಕೌಟ್–ಗೈಡ್ಸ್ ಧ್ಯೇಯವನ್ನು ವಿದ್ಯಾರ್ಥಿಗಳು ಕಾರ್ಯರೂಪದಲ್ಲಿ ಪ್ರದರ್ಶಿಸಿ ಮಾದರಿಯಾದರು.
ಕಾರ್ಯಕ್ರಮಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯೋಜಕ ಶಿಕ್ಷಕಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಪ್ರಮೀಳಾ ಪೂಜಾರಿ ಅವರು ಮಾರ್ಗದರ್ಶನ ನೀಡಿದರು. ಶಿಕ್ಷಕಿಯರಾದ ನೀತಾ ಕೆ ಎಸ್, ಜಯಲಕ್ಷ್ಮಿ, ಪ್ರಮೀಳಾ ಎನ್, ಜಯರಾಮ್, ಮಂಜುನಾಥ್, ಗೀತ ಪಿ, ರಮ್ಯಾ ಬಿ ಎಸ್, ಸೌಮ್ಯ ಪಿ, ಕಾರುಣ್ಯ, ಸಮತ, ಪುಷ್ಪಲತಾ, ಮೋಹಿನಿ, ಅಮಿತಾ ಸಹಕರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಎಂ. ಆರ್. ಅವರು ವಿದ್ಯಾರ್ಥಿಗಳ ಈ ಸೇವಾ ಮನೋಭಾವವನ್ನು ಶ್ಲಾಘಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಇದೇ ಉತ್ಸಾಹವನ್ನು ಮುಂದುವರಿಸುವಂತೆ ಶುಭ ಹಾರೈಸಿದರು.













