ರಾಜ್ಯದಲ್ಲಿ ಅನಧಿಕೃತ ಲೋಡ್‌ ಶೆಡ್ಡಿಂಗ್‌ನಿಂದಾಗಿ ಅಸಮರ್ಪಕ ವಿದ್ಯುತ್‌ ವಿತರಣೆ: ಸಾರ್ವಜನಿಕರು, ಉದ್ಯಮಿಗಳು ಹಾಗೂ ರೈತರಿಗೆ ಸಂಕಷ್ಟ: ಪ್ರತಾಪಸಿಂಹ ನಾಯಕ್‌

Suddi Udaya

ಬೆಳ್ತಂಗಡಿ: ರಾಜ್ಯದಲ್ಲಿ ಅನಧಿಕೃತ ಲೋಡ್‌ ಶೆಡ್ಡಿಂಗ್‌ನಿಂದಾಗಿ ಅಸಮರ್ಪಕ ವಿದ್ಯುತ್‌ ವಿತರಣೆಯಾಗುತ್ತಿದ್ದು ಸಾರ್ವಜನಿಕರು ಉದ್ಯಮಿಗಳು ಹಾಗೂ ರೈತರು ಸಂಕಷ್ಟಕ್ಕೀಡಾಗುತ್ತಿರುವ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಬೆಳಗಾವಿ ವಿಧಾನಸಭೆಯಲ್ಲಿ ಸರಕಾರದ ಗಮನ ಸೆಳೆದಿದ್ದಾರೆ. ವಿದ್ಯುತ್‌ ಕೊರತೆಯನ್ನು ನಿವಾರಿಸಲು ಸರಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಹಾಗೂ ಹೆಚ್ಚುವರಿ ವಿದ್ಯುತ್‌ ಉತ್ಪಾದನೆ ಯಾ ಖರೀದಿಯ ವಿಚಾರವಾಗಿ ಸರಕಾರದ ತೆಗೆದುಕೊಂಡ ಕ್ರಮಗಳ ಕುರಿತೂ ಅವರು ವಿದ್ಯುತ್‌ ಸಚಿವರಲ್ಲಿ ಪ್ರಶ್ನೆ ಮಾಡಿದ್ದಾರೆ.


ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯುತ್‌ ಲಭ್ಯತೆ, ಉತ್ಪಾದನೆ ಕುಂಠಿತವಾದಾಗ ಅಥವಾ ವಿದ್ಯುತ್‌ ಜಾಲದಲ್ಲಿ ಅಡಚಣೆ ಉಂಟಾದಾಗ ಮಾತ್ರ ತಾತ್ಕಾಲಿಕವಾಗಿ ವಿದ್ಯುತ್‌ ಜಾಲದ ಸುರಕ್ಷತಾ ದೃಷ್ಟಿಯಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಕೃಷಿ ಪಂಪ್‌ಸೆಟ್‌ ಫೀಡರುಗಳಿಗೆ ದಿನವಹಿ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ರಾಜ್ಯದ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯ ನಗರ ಕೈಗಾರಿಕೆ, ಕುಡಿಯುವ ನೀರಿನ ಯೋಜನೆಯ ಸ್ಥಾವರಗಳಿಗೆ ಮತ್ತು ನಿರಂತರ ಜ್ಯೋತಿ ಯೋಜನೆ ಫೀಡರ್‌ಗಳಿಗೆ ದಿನವಹಿ ೨೪ ಗಂಟೆಗಳ ಕಾಲ ೩ ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ ಎಂದು ಇಂಧನ ಸಚಿವರು ಮಾಹಿತಿ ನೀಡಿದ್ದಾರೆ.


ರಾಜ್ಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾಸಿಕವಾಗಿ ರಾಜ್ಯ ಬೇಡಿಕೆಯು ಶೇ.32 ರಷ್ಟು ಏರಿಕೆಯಾಗಿದೆ. ಬೇಡಿಕೆಯ ಹೆಚ್ಚಳದಿಂದ ರಾಜ್ಯದಲ್ಲಿ ಆ.2023 ರಿಂದ ಅಕ್ಪೋಬರ್‌ ತಿಂಗಳ ಕೆಲವು ದಿನಗಳಲ್ಲಿ ಕೊರತೆಯಾಗಿತ್ತು. ಆದರೆ ಸರಕಾರವು ಸಕಾಲದಲ್ಲಿ ಅಗತ್ಯ ಕ್ರಮ ಕೈಗೊಂಡಿರುವುದರಿಂದ ಪರಿಸ್ಥಿತಿ ಸಾಮಾನ್ಯಕ್ಕೆ ಬಂದಿದೆ. ಬೇಡಿಕೆ ತಗ್ಗಿದ್ದು ಸದ್ಯಕ್ಕೆ ವಿದ್ಯುತ್‌ ಕೊರತೆ ಇಲ್ಲ ಎಂದು ನಾಯಕ್‌ ಅವರ ಲಿಖಿತ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಬರಗಾಲ ಘೋಷಣೆಯಾಗಿರುವುದರಿಂದ ಅದರಿಂದುಂಟಾಗುವ ಅಭಾವದ ಪರಿಸ್ಥಿತಿಯನ್ನು ನಿರ್ವಹಿಸಲು ದಿನವಹಿ ಆಧಾರದಲ್ಲಿ ವಿವಿಧ ವಿದ್ಯುತ್‌ ವಿನಿಮಯ ಕೇಂದ್ರಗಳಿಂದ ಖರೀದಿ ಮಾಡಲಾಗುತ್ತದೆ. ಸರಕಾರವು ಅ. ೧೬ ರಿಂದ ವಿದ್ಯುತ್‌ ಉತ್ಪಾದಕರ ಮೇಲೆ ಸೆಕ್ಷನ್-11 ನ್ನು ಜಾರಿಗೊಳಿಸಿದೆ. ಉತ್ತರ ಪ್ರದೇಶ, ಪಂಜಾಬ್‌ ರಾಜ್ಯಗಳಿಂದ ೨೦೨೩ ರಿಂದ ಮೇ 2024 ರವೆಗೆ ವಿದ್ಯುತ್‌ ಪಡೆಯಲು ಬ್ಯಾಂಕಿಂಗ್‌ ವ್ಯವಸ್ಥೆ ಮಾಡಿಕೊಂಡಿದೆ. ಕೇಂದ್ರ ವಿದ್ಯುತ್‌ ಮಂತ್ರಾಲಯವು 2023 ನ. 24 ರಿಂದ 2024 ಜೂ.30 ರವರೆಗೆ 302 ಮೆ.ವ್ಯಾ. ವಿದ್ಯುತ್‌ ನೀಡಲು ಒಪ್ಪಂದ ಆಗಿರುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.

Leave a Comment

error: Content is protected !!