ಎಂಡೋ ಪೀಡಿತ ಮಗುವಿನ ಚಿಕಿತ್ಸೆಗೆ ನೇರವಾದ ರಕ್ಷಾಸಮಿತಿ ಸದಸ್ಯ ಕರೀಮ್‌ ಗೇರುಕಟ್ಟೆ

Suddi Udaya

ಬೆಳ್ತಂಗಡಿ: ಕಾಸರಗೋಡು ಕುಂಬ್ಳೆ ನಿವಾಸಿ ಶ್ರೀಮತಿ ಉಷಾ ಉಮೇಶ್ ದಂಪತಿಗಳ ಪುತ್ರಿ ಮೂರು ವರ್ಷ ಪ್ರಾಯದ ಕೀರ್ತನ್‌ರಿಗೆ ಎಂಡೋಸಲ್ಪಾನ್ ಬಾಧಿತ ಅಂಗವಿಕಲತೆ ಹೊಂದಿದ್ದು ಅತೀ ಬಡ ಕುಟುಂಬದವರಾದ ಇವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಾಗಿ ಬಂದಿದ್ದರು. ಆದರೆ ಇವರನ್ನು ವೆನ್ಲಾಕ್ ನಲ್ಲಿ ನಿರ್ಲಕ್ಷಿಸಿ ದಾಖಲಿಸಿಕೊಂಡಿರಲಿಲ್ಲ.


ಸಾಮಾಜಿಕ ಕಾರ್ಯಕರ್ತ ಇರ್ಷಾದ್ ಕಿಲ್ಲೂರು ಹಾಗೂ ನಾರಾಯಣ ಕಿಲ್ಲೂರು ಬೇರೊಬ್ಬ ರೋಗಿಯನ್ನು ವೆನ್ಲಾಕ್ ಗೆ ತನ್ನ ವಾಹನದಲ್ಲಿ ಕರೆದುಕೊಂಡು ಬಂದು ದಾಖಲಿಸಿದ ನಂತರ, ಅಸಹಾಯಕರಾಗಿ ಹೊರಗೆ ಕುಳಿತುಕೊಂಡು ಉಷಾ ಉಮೇಶ್ ಅಳುತ್ತಿದ್ದದ್ದನ್ನು ನೋಡಿ ವಿಚಾರಿಸಿದಾಗ ವಿಷಯ ತಿಳಿದುಕೊಂಡು ಕೂಡಲೇ ಇರ್ಷಾದ್ ಬೆಳ್ತಂಗಡಿಯ ಕಾಂಗ್ರೆಸ್ ವಿದಾನಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಅವರ ಮಾರ್ಗದರ್ಶನದಂತೆ ಜಿಲ್ಲಾಸ್ಪತ್ರೆಯ ರಕ್ಷಾ ಸಮಿತಿಯ ಸದಸ್ಯರಾದ ಗೇರುಕಟ್ಟೆ ಅಬ್ದುಲ್ ಕರೀಮ್ ರವರನ್ನು ಸಂಪರ್ಕಿಸಿದಾಗ, ಕೂಡಲೇ ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳಿಗೆ ಈ ಮಗುವನ್ನು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರು. ತಕ್ಷಣ ಈ ಮಗುವನ್ನು ದಾಖಲಿಸಿಕೊಂಡರೂ ಐಸಿಯು ಬೆಡ್ ಇಲ್ಲ ಎಂಬ ಸಬೂಬು ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತಿಳಿಸಿದರೂ ಪುನಃ ಕರೀಮ್ ಕರ್ತವ್ಯದಲ್ಲಿರುವ ವೈದ್ಯರನ್ನು ಸಂಪರ್ಕಿಸಿದಾಗ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ತುರ್ತು ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ರಕ್ಷಿತ್ ಶಿವರಾಮ್, ಅಬ್ದುಲ್ ಕರೀಮ್, ಇರ್ಷಾದ್ ಕಿಲ್ಲೂರು, ನಾರಾಯಣ ಕಿಲ್ಲೂರು ರವರಿಗೆ ಈ ಮಗುವಿನ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Comment

error: Content is protected !!