ಉಜಿರೆ: ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಪುತ್ತಿಗೆ ಮಠದ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳರವರ ಭೇಟಿ

Suddi Udaya

ಉಜಿರೆ: ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದ  ಭಗವದ್ಗೀತೆಯ ಶ್ರೇಷ್ಠ ಸಂದೇಶ  ನಮ್ಮ ಜೀವನದಲ್ಲೂ  ತಿಳಿದು, ಅಳವಡಿಸಿಕೊಂಡರೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಶ್ರೀ ಕೃಷ್ಣ ಜಗತ್ತಿಗೆ ನೀಡಿದ ಸಂದೇಶ  ನಮ್ಮ ಮನಸ್ಸಿಗೆ  ಸಂತೋಷ  ಹಾಗೂ ಜೀವನಕ್ಕೆ ಮಾರ್ಗದರ್ಶನ ನೀಡಬಲ್ಲುದು. ಈ ನಿಟ್ಟಿನಲ್ಲಿ ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯವನ್ನು ವಿಶ್ವ ಗೀತಾ ಪರ್ಯಾಯವಾಗಿ ಕೋಟಿ ಗೀತಾ ಯಜ್ಞದ ಮೂಲಕ  ಶ್ರೀ ಕೃಷ್ಣನಿಗೆ ಸಮರ್ಪಿಸುವ  ಮಹತ್ತರ ಯೋಜನೆ ರೂಪಿಸಿದ್ದೇವೆ . ಜೀವನದ ಅಂತಿಮ ಗುರಿಯಾದ ಮೋಕ್ಷ ಸಾಧನೆಗೆ  ಭಗವದ್ಗೀತೆ  ದಾರಿ ತೋರಿಸಿ ಮಾರ್ಗದರ್ಶನ ನೀಡುವುದು ಎಂದು ಉಡುಪಿ ಪುತ್ತಿಗೆ ಮಠದ ,ಭಾವಿ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ  ಶ್ರೀಗಳವರು ನುಡಿದರು.                                               

ಅವರು ಜ. 4 ರಂದು  ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ,ಶ್ರೀ ಜನಾರ್ದನ ಸ್ವಾಮಿ ಹಾಗು ಪರಿವಾರ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ, ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.

ಕಿರಿಯ ಪಟ್ಟದ ಶ್ರೀ   ಸುಶ್ರೀನ್ದ್ರ ತೀರ್ಥ ಶ್ರೀಗಳವರು  ಉಪಸ್ಥಿತರಿದ್ದರು.   ಶ್ರೀಗಳವರ ಪಟ್ಟದ ದೇವರ ಮಹಾಪೂಜೆ ನಡೆಯಿತು.                                                                                     

ಹಿರಿಯ ಹಾಗು ಕಿರಿಯ  ಶ್ರೀಗಳವರನ್ನು ಉಜಿರೆಯ ನಾಗರಿಕರು ಮಹಾದ್ವಾರದ ಬಳಿಯಿಂದ ಪೂರ್ಣಕುಂಭ,ಸಕಲ ವೈಭವಗಳೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಕ್ಷೇತ್ರದ ವತಿಯಿಂದ  ಸ್ವಾಗತಿಸಿ, ಗೌರವಿಸಿ, ಪ್ರಸ್ತಾವಿಸಿದರು.  ಶ್ರೀಗಳವರು ನೆರೆದ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ಹಾಗೂ ಕೋಟಿ ಗೀತಾ ಲೇಖನ  ಯಜ್ನ ದೀಕ್ಷೆ ನೀಡಿ  ಪರ್ಯಾಯೋತ್ಸವ ಆಮಂತ್ರಣ ನೀಡಿದರು.

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ, ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಧರ್ಮಸ್ಥಳ ವಲಯಾಧ್ಯಕ್ಷ ಡಾ!ಶ್ರೀಪತಿ ಆರ್ಮುಡತ್ತಾಯ, ಪರಾರಿ ವೆಂಕಟ್ರಮಣ ಹೆಬ್ಬಾರ್, ಜಯರಾಮ ಪಡ್ಡಿಲ್ಲಾಯ,ಅನಂತಕೃಷ್ಣ ಪಡುವೆಟ್ನಾಯ, ಶ್ರೀರಂಗ ನೂರಿತ್ತಾಯ, ಡಾ!ಶ್ರೀಧರ ಭಟ್, ಹರ್ಷಕುಮಾರ್, ಜನಾರ್ದನ ತೋಳ್ಪಡಿತ್ತಾಯ, ಧ ನಂಜಯ ರಾವ್, ಸರೋಜಾ ಕೆದಿಲಾಯ, ಗಾಯತ್ರಿ ಶ್ರೀಧರ್, ಪಿ.ಜಿ.ಲಲಿತ,ಶೋಭಾ ಕುದ್ರೆನ್ತಯ,ಸ್ವರ್ಣ ಶ್ರೀರಂಗ ನೂರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!