ಶ್ರೀರಾಮ ಪ್ರತಿಷ್ಠೆಯ ಸಂಭ್ರಮದ ಸಮಯ ಕಾಂಗ್ರೆಸ್ ತುಷ್ಟೀಕರಣದ ನೀತಿಗೆ ಅಂಟಿಕೊಂಡಿರುವುದು ವಿಪರ್ಯಾಸ: ಪ್ರತಾಪ್‌ಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ದೇಗುಲ ನಿರ್ಮಾಣವಾಗಿದ್ದು ಜ.22ರಂದು ಶ್ರೀರಾಮ ಪ್ರತಿಷ್ಠೆಯ ಸುವರ್ಣ ಕ್ಷಣಕ್ಕಾಗಿ ಸಂಪೂರ್ಣ ವಿಶ್ವವೇ ಸಡಗರ, ಸಂಭ್ರಮ, ಕಾತರ, ಕುತೂಹಲದಿಂದ ಕಾಯುತ್ತಿದೆ. ಹೀಗಿರುವಾಗ ಕಾಂಗ್ರೇಸ್ ಪಕ್ಷ ಮಾತ್ರ ತುಷ್ಟೀಕರಣದ ತನ್ನ ನೀತಿಗೆ ಬಲವಾಗಿ ಅಂಟಿಕೊಂಡಿರುವುದು ಮಾತ್ರ ವಿಪರ್ಯಾಸ ಎಂದು ವಿಧಾನಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ.


ರಾಮ ಮಂದಿರದ ಬಗ್ಗೆ ಜನರ ಸ್ಪಂದನೆ, ಸಂಭ್ರಮ ಕಾಂಗ್ರೆಸಿಗರ ಮನಸ್ಥಿತಿಯನ್ನು ಅಯೋಮಯಮಾಡಿದೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದವರು, ಮಂದಿರ ಆಗಬಾರದು ಎಂದು ಪ್ರಯತ್ನಪಟ್ಟವರು ಇಂದು ಹೌಹಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮ ಭಕ್ತರ ಮೇಲಿನ ೩೧ ವರ್ಷ ಹಳೆಯದಾದ ಪ್ರಕರಣವನ್ನು ಈಗ ಕೆದಕಿ ಸಂಭ್ರಮಕ್ಕೆ ಅಡ್ಡಿ ಮಾಡುತ್ತಿರುವುದು ಇದಕ್ಕೆ ಸಾಕ್ಷಿ. ಗೃಹ ಸಚಿವರು, ಹಳೆಯ ಕೇಸುಗಳನ್ನು ಕ್ಲೀಯರ್ ಮಾಡುತ್ತಿದ್ದೇವೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಅಂದು ಕೆ.ಜೆ ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ದೊಂಬಿ ನಡೆಸಿ, ಠಾಣೆಗೆ ಬೆಂಕಿಹಚ್ಚಿದ ಆರೋಪಿಗಳನ್ನು ಈಗೇಕೆ ಬಂಧಿಸುತ್ತಿಲ್ಲ? ಚಿಕಮಗಳೂರಿನ ದತ್ತಪೀಠದ ಹೋರಾಟಗಾರರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೇಸ್ ಸರಕಾರ ಬೆದರಿಕೆ ಹಾಕಿದೆ. ಒಟ್ಟಾರೆ ರಾಮ ಮಂದಿರದ ಉದ್ಘಾಟನೆ ಕಾಂಗ್ರೆಸಿಗರನ್ನು ಕಂಗೆಡಿಸಿದೆ ಎನ್ನುವುದು ಸ್ಪಷ್ಟ ಎಂದಿದ್ದಾರೆ.
ಇನ್ನೊಂದೆಡೆ ಬಿ.ಕೆ. ಹರಿಪ್ರಸಾದ್ ಅವರು ಗೋಧ್ರಾದಲ್ಲಿ ಆದಂತೆ ಆಗಬಹುದು ಎಂಬ ಹೇಳಿಕೆ ನೀಡಿದ್ದಾರೆ. ಅವರ ಬಳಿ ಈ ಬಗ್ಗೆ ಮಾಹಿತಿಗಳಿದ್ದಲ್ಲಿ ಸರಕಾರದ ಮುಖ್ಯಸ್ಥರಿಗೆ ತಿಳಿಸಬಹುದಲ್ಲಾ? ಅದು ಬಿಟ್ಟು ಹೆದರಿಸುವುದರ ಹಿಂದಿನ ಷಡ್ಯಂತ್ರವೇನು? ಅದಲ್ಲದೆ ಹಿಂದೂ ರಾಷ್ಟ್ರದ ಕುರಿತು ಸಿದ್ದರಾಮಯ್ಯನವರ ಮಗನ ಮಾತು, ಸಚಿವ ಆಂಜನೇಯ ಅವರ ಹೇಳಿಕೆ, ರಾಮ ಮಂತ್ರಾಕ್ಷತೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಗುರ ಮಾತುಗಳನ್ನು ಜನ ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ರೂ.೧೦,೦೦೦ ಕೋಟಿಗಳನ್ನು ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿರುವುದು ತುಷ್ಟೀಕರಣದ ಪರಾಕಾಷ್ಠೆಯಾಗಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Comment

error: Content is protected !!