ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ತುಷ್ಟಿಕರಣವೇ ಮುಖ್ಯ; ಮಂಡ್ಯದ ಕೆರೆಗೋಡುವಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದು ಖಂಡನೀಯ: ಪ್ರತಾಪ್ ಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಕಾಂಗ್ರೇಸ್‌ಗೆ ಅಲ್ಪಸಂಖ್ಯಾತರ ತುಷ್ಟಿಕರಣವೇ ಮುಖ್ಯ ಎಂಬುದನ್ನು ಅದು ಅಗ್ಗಾಗ್ಗೆ ಸಾಬೀತುಮಾಡುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಆದಂತಹ ಘಟನೆಯೇ ಇದಕ್ಕೊಂದು ತಾಜಾ ಉದಾಹರಣೆ. ಹಿಂದೂ ವಿರೋಧಿ ಕೃತ್ಯಗಳನ್ನು ಬೆಂಬಲಿಸುವರಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಮಂಡ್ಯದ ಕೆರೆಗೋಡುವಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದು ಖಂಡನೀಯ. ಅಲ್ಲಿ ಅಧಿಕಾರಿಗಳಿಂದ ಅನುಮತಿ ಪಡೆದು 108 ಅಡಿ ಎತ್ತರದ ಧ್ವಜ ಹಾಕಿದ್ದಾರೆ. ಅಲ್ಪಸಂಖ್ಯಾತರಿಗೆ ಹೆದರಿ ಸರಕಾರ ಧ್ವಜ ಕೆಳಗಿಳಿಸಿದೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕರಸೇವಕರೊಬ್ಬರನ್ನು ಹಳೇ ಪ್ರಕರಣದ ನೆಪದಲ್ಲಿ ಬಂಧಿಸಿರುವುದು, ವಾರದ ಹಿಂದೆ ಚಿಕ್ಕಮಗಳೂರಿನ ಕನ್ನಡ ಅರ್ಚಕ ಹಿರೆಮಗಳೂರು ಕಣ್ಣನ್ ಅವರಿಗೆ ಅರ್ಚಕ ಸಂಭಾವನೆಯನ್ನು ವಾಪಸು ಮಾಡುವಂತೆ ಸರಕಾರ ಆದೇಶ ಮಾಡಿರುವುದು ಅವರ ಹಿಂದೂ ವಿರೋಧಿತನಕ್ಕೆ ಸಾಕ್ಷಿಗಳಾಗಿವೆ. ಒಂದೆಡೆ ಕಾಂಗ್ರೇಸ್‌ನವರು ನಾವೂ ಹಿಂದೂಗಳೇ ಎಂದು ಹೇಳುತ್ತಾ ಹಿಂದೂ ವಿರೋಧಿ ಕೃತ್ಯಗಳನ್ನು ಮಾಡುವುದು ಮತ್ತು ಅಂತಹವರನ್ನು ಬೆಂಬಲಿಸುತ್ತಿದೆ. ಅನುಮತಿ ಪಡೆದು ಹಾಕಿದಂತಹ ಹನುಮ ಧ್ವಜವನ್ನು ಜನಾಭಿಪ್ರಾಯಕ್ಕೆ ವಿರುದ್ಧವಾಗಿ, ಬಲಾತ್ಕಾರವಾಗಿ ತೆಗೆದಿರುವುದು ಸರಿಯಲ್ಲ.


ಮಂಗಳೂರಿನಲ್ಲಿ ಸಣ್ಣ ಬ್ಯಾನರ್‌, ಫ್ಲೆಕ್ಸ್‌ ಹಾಕಬೇಕಾದರೂ ಪೋಲಿಸರ ಅನುಮತಿ ಬೇಕು. ಅದನ್ನು ಹಾಕಿದವರು ಕಾನೂನು ಬಾಹಿರ ಕೃತ್ಯ ಮಾಡಿದಂತೆ ಪರಿಗಣಿಸುತ್ತಾರೆ. ಆದರೆ ಒಂದು ಕೋಮಿನ ಎಷ್ಟು ದೊಡ್ಡ ಬ್ಯಾನರ್‌ ಇದ್ದರು ಅದು ಸರಕಾರಕ್ಕೆ ಮಾನ್ಯ. ಅವರು ದೊಡ್ಡ ಧ್ವಜಗಳನ್ನು, ಕತ್ತಿ, ತಲವಾರುಗಳನ್ನು ಹಿಡಿದುಕೊಂಡು ಮೆರವಣಿಗೆ ಹೋರಟರೆ( ಶಿವಮೊಗ್ಗದಲ್ಲಿ ಮಾಡಿದಂತೆ) ಅವರು ಮುಗ್ದರು, ಅಮಾಯಕರು, ದಾರಿತಪ್ಪಿರುವ ನಮ್ಮ ಸಹೋದರರು ಎಂದು ಸಮರ್ಥನೆಕೊಟ್ಟು ಅವರಿಗೆ ವಿನಾಯತಿ ನೀಡುತ್ತದೆ. ಇಂತಹ ಹಿಂದೂ ವಿರೋಧಿ ಸರಕಾರ ನಮಗೆ ಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.


ಭಾರತ ಜೋಡೋ ಅಂತ ಮತ್ತೆ ಹೊರಟಿದ್ದಾರೆ. ಆದರೆ ಇವರ ಐ.ಎನ್.ಡಿ.ಐ.ಎ. ಒಕ್ಕೂಟ ಛಿದ್ರವಾಗಿದೆ. ಅಧಿಕಾರದ ಲಾಲಸೆಗಾಗಿ ಹಾಗೂ ಕುಟುಂಬ ರಾಜಕಾರಣ ಮುಂದುವರಿಯುವುದಕ್ಕೋಸ್ಕರ ಇವರು ಮಾಡುತ್ತಿರುವ ನಾಟಕ ಇದು ಎಂದು ಜನರು ಇದನ್ನು ಅರ್ಥಮಾಡಿಕೊಂಡಿದ್ದಾರೆ. ಅಭಿವೃದ್ಧಿ, ಸ್ಥಿರ ಮತ್ತು ಸುಭದ್ರ ಸರಕಾರವನ್ನು ಕೊಡುವುದಕ್ಕೆ ಬಿಜೆಪಿಯಿಂದ ಮಾತ್ರ ಸಾಧ್ಯ. ಅಧಿಕಾರದ ಲಾಲಸೆಗಾಗಿ, ಸ್ವಾರ್ಥಕ್ಕಾಗಿ ಕುಟುಂಬವಾದಿಗಳು ಒಟ್ಟಾಗಿ ಹೊರಟರೆ ಅದಕ್ಕೆ ಬಲ ಇರುವುದಿಲ್ಲ. ದೇಶದ ದೃಷ್ಟಿಯಲ್ಲಿ ಒಂದಾದರೆ ಅದಕ್ಕೊಂದು ಅರ್ಥ, ಶಕ್ತಿ ಇರುತ್ತಿತ್ತು. ಇವರ ಸ್ವಾರ್ಥ ರಾಜಕಾರಣ ಕಳೆದ ಐವತ್ತು ವರ್ಷಗಳಲ್ಲಿ ದೇಶವನ್ನು ಅವನತಿಯತ್ತ ಕೊಂಡೊಯ್ದಿರುವುದನ್ನು ಜನರು ಅರ್ಥಮಾಡಿಕೊಂಡಿರುವುದರಿಂದ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದನ್ನು ಅವರು ನೆನಪಿಸಿದ್ದಾರೆ.


ವೇಣೂರು ಸನಿಹದ ಕುಕ್ಕೇಡಿ ಗ್ರಾಮಪಂಚಾಯತಿನ ಗೋಳಿಯಂಗಡಿಯ ಕಡ್ತ್ಯಾರು ಎಂಬಲ್ಲಿನ ಸುಡುಮದ್ದು ತಯಾರಿ ಘಟಕದಲ್ಲಿ ರವಿವಾರ ಸಂಭವಿಸಿದ ಸ್ಫೋಟ ಭೀಕರವಾದದ್ದು. ಮೂವರು ಪ್ರಾಣತೆತ್ತಿರುವುದು ವಿಷಾದನೀಯ. ಈ ಸ್ಫೋಟದ ಬಗ್ಗೆ ಹಿಂದೆ ತೀವ್ರವಾದ ತನಿಖೆ ನಡೆಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!