ಬೆಳ್ತಂಗಡಿ ತಾಲೂಕು ಜಿಪಿಟಿ ಶಿಕ್ಷಕರ ಸಂಘದ ವತಿಯಿಂದ ‘ಸ್ನೇಹ ಸಂಗಮ’ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಇಲ್ಲಿನ ಸರ್ಕಾರಿ ನೌಕರರ ಭವನದ ಏಕತಾ ಸೌಧದ ಸಭಾಂಗಣದಲ್ಲಿ ಫೆ.03 ರಂದು ತಾಲೂಕಿಗೆ ಹೊಸದಾಗಿ ನೇಮಕಾತಿಯಾಗಿ ಬಂದಿರುವ ನೂರಕ್ಕೂ ಹೆಚ್ಚು ಪದವೀಧರ ಪ್ರಾಥಮಿಕ ಶಿಕ್ಷಕರನ್ನು (6-8) ಬೆಳ್ತಂಗಡಿ ತಾಲೂಕು ಜಿಪಿಟಿ ಶಿಕ್ಷಕರ ಸಂಘದ ವತಿಯಿಂದ ಸ್ವಾಗತಿಸುವ ಹಾಗೂ ಹಿರಿಯ ಜಿಪಿಟಿ ಶಿಕ್ಷಕ ಮಿತ್ರರೆಲ್ಲರನ್ನೂ ಒಗ್ಗೂಡಿಸುವ ‘ಸ್ನೇಹ ಸಂಗಮ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ನೆರವೇರಿಸಿದರು. ನಂತರ ಮಾತನಾಡಿದ ಅವರು “ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಎಲ್ಲರೂ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಪ್ರಯತ್ನಿಸಬೇಕು” ಎಂದು ಕರೆ ಕೊಡುವುದರೊಂದಿಗೆ ತಾಲೂಕಿಗೆ ಹೊಸದಾಗಿ ನೇಮಕವಾಗಿರುವ ಎಲ್ಲಾ ಶಿಕ್ಷಕರಿಗೂ ಶುಭ ಹಾರೈಸಿದರು ಮತ್ತು ಸಮಾಜ ವಿಜ್ಞಾನ ನಿಯೋಜಿತ ಶಿಕ್ಷಕರ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಶ್ರಮಿಸುವುದಾಗಿ ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ್ದ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, “ನಿಮ್ಮ ಸಮಸ್ಯೆಗಳಿಗೆ ನಾನು ಸದಾ ಗಟ್ಟಿ ಧ್ವನಿಯಾಗಿ ನಿಂತು , ಅವುಗಳನ್ನು ತುರ್ತಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿ; ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹಾಗೂ ಶಿಕ್ಷಕರ ಅವಸ್ಥೆಗಳ(ಪರಿಸ್ಥಿತಿಗಳ)ಬಗ್ಗೆ ಮರುಕ ವ್ಯಕ್ತಪಡಿಸಿ ಮೌಲ್ಯಯುತ, ಗುಣಾತ್ಮಕ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾತನಾಡಿದರು. ನಂತರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿಯವರು ಮಾತನಾಡಿ ನೂತನ ಜಿಪಿಟಿ ಶಿಕ್ಷಕರಿಗೆ ಸೇವಾ ಪುಸ್ತಕ ಹಾಗೂ ಎಚ್.ಎಂ.ಆರ್.ಎಸ್ ತಂತ್ರಾಂಶದ ಮಾಹಿತಿ ತೆರೆಯಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.


ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮೋಹನ್ ಕುಮಾರ್, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಗಂಗಾರಾಣಿ, ಪ್ರಾ.ಶಾ.ಶಿಕ್ಷಕರ ಸಂಘದ ತಾ.ಅಧ್ಯಕ್ಷರಾದ ಕಿಶೋರ್ ಕುಮಾರ್, ಪ್ರಾ.ಶಾ.ಮುಖ್ಯ ಶಿಕ್ಷಕರ ಸಂಘದ ತಾ.ಅಧ್ಯಕ್ಷರಾದ ಎಡ್ವರ್ಡ್ ಡಿಸೋಜ, ದ.ಕ ಪ್ರೌ.ಶಾ.ಸ.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಹಮದ್ ರಿಯಾಜ್, ಪ್ರೌ.ಶಾ.ಸ.ಶಿಕ್ಷಕರ ಸಂಘದ ತಾ.ಅಧ್ಯಕ್ಷರಾದ ರಾಧಾಕೃಷ್ಣ ಕೆಯ್ಯೂರು, ಟಿಜಿಟಿ ಶಿಕ್ಷಕರ ಸಂಘದ ತಾ.ಪ್ರ.ಕಾರ್ಯದರ್ಶಿಗಳಾದ ವಿಕಾಸ ಕುಮಾರ್ ಉಪಸ್ಥಿತರಿದ್ದು ನೂತನ ಜಿಪಿಟಿ ಶಿಕ್ಷಕರಿಗೆ ಸ್ವಾಗತಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ತಾಲೂಕು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ ) ಸಂಘದ ಅಧ್ಯಕ್ಷ ಯೋಗೇಶ ಹೆಚ್.ಆರ್ ನೂತನ ಜಿಪಿಟಿ ಶಿಕ್ಷಕರಿಗೆ ಸ್ವಾಗತ ಕೋರಿ, ಅವರ ಸಮಸ್ಯೆಗಳಿಗೆ ಸಂಘ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಂಡಿಂಜೆ ಶಾಲೆಯ ಜಿಪಿಟಿ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಮಟ್ಟದ ರಾಷ್ಟ್ರೀಯ ಕಬಡ್ಡಿ ಆಟಗಾರರು ಆದ ಕವನ್ ಕುಮಾರ್ ಇವರನ್ನು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಿವೃತ್ತ ಪ್ರ.ದ.ಸಹಾಯಕರಾದ ನಾರಾಯಣ್ ನಾಯ್ಕ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಜಿಪಿಟಿ ಸಂಘದ ಉಪಾಧ್ಯಕ್ಷ ಶುಭವಿಕಾಸ್ ಪ್ರಾರ್ಥಿಸಿ , ಖಜಾಂಚಿ ಅಭಿಷೇಕ್ ಆರ್.ಎನ್ ಸ್ವಾಗತಿಸಿ, ವಕ್ತಾರರಾದ ಸತೀಶ್ ಆಚಾರ್ ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಖಜಾಂಚಿ ಹಾಗೂ ತಾ.ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಬಿ ಆರ್ ಪ್ರಾಸ್ತಾವಿಕ ನುಡಿದರು. ಸಂಘದ ನಿರ್ದೇಶಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ರವಿಕುಮಾರ್ ಜೆ ವಂದಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ರಮೇಶ್ ಬಂಕೊಳ್ಳಿ , ನಿರ್ದೇಶಕರಾದ ಮಧು ಕೆ.ಎಸ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾದ ಶಾರದಾ ಅಗತ್ಯ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Comment

error: Content is protected !!