ಕರೆಮಾಡಿದ ತಕ್ಷಣ ರೈತರ ಮನೆಬಾಗಿಲಿಗೆ ಬರಲಿದೆ ಪಶು ಸಂಜೀವಿನಿ

Suddi Udaya

ಬೆಳ್ತಂಗಡಿ: ಕೇಂದ್ರ ಸರಕಾರದ ಪ್ರಾಯೋಜಕತ್ವ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದ ಪಶು ಸಂಜೀವಿನಿ ಯೋಜನೆ ಬೆಳ್ತಂಗಡಿಯಲ್ಲೂ ಕೊನೆಗೂ ಆರಂಭವಾಗಿದೆ.
ಹಲವು ಸಮಯದ ಹಿಂದೆ ಅನುಷ್ಠಾನಗೊಂಡಿರುವ ಯೋಜನೆ ನಾನಾ ಕಾರಣಗಳಿಂದ ತಾಲೂಕಿನಲ್ಲಿ ಆರಂಭವಾಗಿರಲಿಲ್ಲ ಇದಕ್ಕೆ ಬೇಕಾದ ಅಗತ್ಯವಾಹನ ಆಗಮಿಸಿ ತಿಂಗಳುಗಳು ಸಂದಿದ್ದರು ವೈದ್ಯರಿಲ್ಲದ ಕಾರಣ ಯೋಜನೆ ಜನರನ್ನು ತಲುಪಿರಲಿಲ್ಲ.


ಹೈನುಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಈ ಯೋಜನೆಯಲ್ಲಿ ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಕಂಡು ಬಂದರೆ ತಜ್ಞ ವೈದ್ಯರು ಮನೆಗಳಿಗೆ ಭೇಟಿ ನೀಡಿ ಔಷಧೋಪಚಾರ ಮಾಡುತ್ತಾರೆ. ವಾಹನದಲ್ಲಿ ಅಗತ್ಯ ಔಷಧಿಗಳ ಸಂಗ್ರಹ, ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟ ಉಪಕರಣಗಳು ಇವೆ. ಕರೆ ಮಾಡುವಾಗ ಜಿಲ್ಲೆ, ತಾಲೂಕು, ಗ್ರಾಮ, ಪಿನ್‌ಕೋಡ್, ರೈತನ ಹೆಸರು, ಜಾನುವಾರು ಕಾಯಿಲೆ ವಿವರ ನೀಡಬೇಕು. ಹೀಗೆ ಬಂದ ಕರೆಗಳ ಆಧಾರದಲ್ಲಿ ಆದ್ಯತೆ ಮೇರೆಗೆ ತಂಡ ಭೇಟಿ ನೀಡುತ್ತದೆ. ಕರೆ ಮಾಡಿದ ಕೆಲವೇ ಹೊತ್ತಲ್ಲಿ ಮನೆ ಬಾಗಿಲಿಗೆ ಪಶು ವೈದ್ಯರು ಆಗಮಿಸಿ ಚಿಕಿತ್ಸೆ ನೀಡುತ್ತಾರೆ.


ಬೆಳ್ತಂಗಡಿ ತಾಲೂಕಿನಲ್ಲಿ ಈ ಸೇವೆ ಕಳೆದ ತಿಂಗಳು ಆರಂಭವಾಗಿದ್ದು ಮುಖ್ಯ ವೈದ್ಯರಾಗಿ ಡಾ| ಗಿರೀಶ್ ಫಡಕೆ ಸೇವೆ
ಸಲ್ಲಿಸುತ್ತಿದ್ದಾರೆ. ಇವರ ತಂಡ ಈಗಾಗಲೇ ಹಲವಾರು ಮನೆಗಳಿಗೆ ಕರೆಗಳ ಆಧಾರದಲ್ಲಿ ಭೇಟಿ ನೀಡಿದೆ. 81 ಗ್ರಾಮಗಳಿಗೂ ಸೇವೆ ಸಲ್ಲಿಸುವ ಈ ಯೋಜನೆ 1962 ಸಂಖ್ಯೆಗೆ ಬರುವ ಫೋನ್ ಕರೆಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ತಾಲೂಕಿನಲ್ಲಿ ಹಲವು ಪ್ರಾಥಮಿಕ ಪಶು ಕೇಂದ್ರಗಳಿದ್ದು ಇಲ್ಲಿ ವೈದ್ಯರ ಸಹಿತ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದು ಹೈನುಗಾರರು ಸರಿಯಾದ ಸೇವೆ ಸಿಗದೆ ವಂಚಿತರಾಗುತ್ತಿದ್ದಾರೆ. ಈ ಯೋಜನೆ ತಾಲೂಕಿನ ಹೈನುಗಾರರಿಗೆ ವಿಶೇಷ ಪ್ರಯೋಜನ ನೀಡಲಿದ್ದು ಇದರ ಉಪಯೋಗ ಪಡೆಯಬಹುದಾಗಿದೆ.

1962 ಸಂಖ್ಯೆಗೆ ಕರೆ ಮಾಡಿ
1962 ಸಂಖ್ಯೆಗೆ ಕರೆ ಮಾಡಿ ಜಾನುವಾರುಗಳ ಸಮಸ್ಯೆ ನೋಂದಾಯಿಸಿದರೆ ತಕ್ಷಣ ವೈದ್ಯರ ತಂಡ ಮನೆಗೆ ಆಗಮಿಸಿ ಸಣ್ಣ ಮಟ್ಟದ ಶಸ್ತ್ರ ಚಿಕಿತ್ಸೆ ಸಹಿತ ಇತರ ಪರೀಕ್ಷೆಗಳನ್ನು ನಡೆಸುವ ಸೇವೆ ಇದಾಗಿದೆ.ಇದು ಸಂಪೂರ್ಣ ಉಚಿತವಾಗಿದ್ದು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಟೆಂಪೋದಲ್ಲಿ ಮನೆಗೆ ಆಗಮಿಸುವ ಈ ತಂಡದಲ್ಲಿ ಓರ್ವ ಪಶು ವೈದ್ಯರು, ಸಹಾಯಕ ಮತ್ತು ವಾಹನ ಚಾಲಕ ಇರುತ್ತಾರೆ. ಜಾನುವಾರಗಳ ಜತೆ ಅಗತ್ಯವಿದ್ದಲ್ಲಿ ಸಾಕುಪ್ರಾಣಿಗಳ ಚಿಕಿತ್ಸೆಗೂ ಈ ಸೇವೆಯನ್ನು ಬಳಸಬಹುದಾಗಿದೆ.

Leave a Comment

error: Content is protected !!