ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಯುವ ಮತದಾರರೊಂದಿಗೆ ಸಂವಾದ

Suddi Udaya

ಉಜಿರೆ : ಭಾರತ ಚುನಾವಣಾ ಆಯೋಗ , ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ.24 ರಂದು ಎಸ್.ಡಿ.ಎಂ (MSW) ಪಿಜಿ ಕಾಲೇಜಿನಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಯುವ ಮತದಾರರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾ ಸಂಪನ್ಮೂಲ ವ್ಯಕ್ತಿ(DLMT) ಯೋಗೇಶ ಹೆಚ್.ಆರ್, ಯುವ ಮತದಾರರಿಗೆ ಪ್ರತೀ ಬಾರಿ ಚುನಾವಣೆಯಲ್ಲಿ ಮರೆಯದೇ ಮತದಾನ ಮಾಡಿ ಪ್ರಜಾಪ್ರಭುತ್ವದ ಯಜಮಾನರಾಗಿ ಎಂದು ಕರೆಕೊಟ್ಟರು. ಭವಿಷ್ಯದ ಮತದಾರರು ಹಾಗೂ ಯುವ ಮತದಾರರು VHA App ಡೌನ್ಲೋಡ್ ಮಾಡಿಕೊಂಡು ಅಥವಾ ceokarnataka.gov.in ವೆಬ್ಸೈಟ್ನಲ್ಲಿ ಲಾಗಿನ್ ಆಗಿ
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರಿರುವುದನ್ನು ಖಚಿತಪಡಿಸಿಕೊಂಡು ಯಾವುದೇ ಆಮಿಷಗಳಿಗೆ ಬಲಿಯಾಗದೆ ಈ ಬಾರಿಯ ಮತದಾನದಲ್ಲಿ ತಪ್ಪದೇ ಭಾಗವಹಿಸುವ ಮೂಲಕ ಚುನಾವಣಾ ಪರ್ವ ಭಾರತದ ಗರ್ವ ಎಂಬ ಘೋಷ ವಾಕ್ಯವನ್ನು ಸಾಬೀತು ಪಡಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿ ತೇಜಾಕ್ಷಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್.ಡಿ.ಎಮ್ ಕಾಲೇಜಿನ ಡೀನ್ ಆದ ಡಾ.ವಿಶ್ವನಾಥ್ , ಹೆಚ್.ಒಡಿ ಡಾ.ರವಿಶಂಕರ್, ಸ್ವೀಪ್ ಸಮಿತಿ ಸದಸ್ಯರಾದ ಡೊಂಬಯ್ಯ ಇಡ್ಕಿದು, ನೆಹರು ಕೇಂದ್ರ ಮಂಗಳೂರು ಇದರ ತಾ.ಸಂಯೋಜಕರಾದ , ಶಾಂತಪ್ಪ ಕರಪತ್ರ ಬಿಡುಗಡೆ ಮಾಡಿದರು. ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ (TLMT) ಶುಭಾ ಕೆ, ಹಾಗೂ ದಿವ್ಯಾ ಕುಮಾರಿ ಯುವ ಮತದಾರರ ಅಭಿಪ್ರಾಯ ಆಲಿಸಿ, ತಪ್ಪದೇ ಮತದಾನದಲ್ಲಿ ಭಾಗವಹಿಸುವ ಜೊತೆಗೆ ಇತರರನ್ನು ಮತದಾನದಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ರಾಯಭಾರಿಗಳಾಗಿ ಕೆಲಸ ಮಾಡುವಂತೆ ತಿಳಿಸಿದರು.

Leave a Comment

error: Content is protected !!