ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ : ಪಾದಯಾತ್ರಿಗಳಿಗೆ ಸನ್ಮಾನ

Suddi Udaya

ಧರ್ಮಸ್ಥಳ: ಶಿವರಾತ್ರಿ ಎಂಬುದು ತಾಳ್ಮೆ. ಸಂಯಮ, ಜಾಗರಣೆ, ಉಪವಾಸ, ವ್ರತ – ನಿಯಮಗಳ ಪಾಲನೆಯೊಂದಿಗೆ ಪಂಚೆಂದ್ರಿಯಗಳ ನಿಯಂತ್ರಣ ಮಾಡಿ ಎಲ್ಲರಿಗೂ ಮಾನಸಿಕ ಪರಿವರ್ತನೆಯ ಶುಭರಾತ್ರಿಯಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.

ಅವರು ಮಾ.7ರಂದು ಧರ್ಮಸ್ಥಳದಲ್ಲಿ ಕಳೆದ 45 ವರ್ಷಗಳಿಂದ ಶಿವರಾತ್ರಿ ಸಂದರ್ಭ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರತಿವರ್ಷ ಪಾದಯಾತ್ರೆಯನ್ನು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಆಯೋಜಿಸುತ್ತಿರುವ ಹನುಮಂತಪ್ಪ ಸ್ವಾಮೀಜಿ ಮತ್ತು ಅವರ ಶಿಷ್ಯರನ್ನು ಗೌರವಿಸಿ ಅಭಿನಂದಿಸಿದರು.ಮುಂದೆ ನಿರ್ಧಿಷ್ಠ ಗುರಿ ಮತ್ತು ಹಿಂದೆ ಆದರ್ಶ ಗುರು ಇದ್ದಾಗ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಪಾದಯಾತ್ರೆಯಲ್ಲಿ ಶ್ರದ್ಧಾ – ಭಕ್ತಿಯಿಂದ ಭಗವಂತನ ನಾಮಸ್ಮರಣೆಯೊಂದಿಗೆ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ತ್ಯಾಗ ಮನೋಭಾವ ಮತ್ತು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಯುವಜನರು ಹೆಚ್ಚಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಚಲನಚಿತ್ರ ನಿರ್ದೇಶಕ ಶಶಿಕುಮಾರ್, ನಾಗರಾಜ ರೆಡ್ಡಿ, ಕಮಲಾ. ಮೋಹನ ಗೌಡ, ಚಂದ್ರಪ್ಪ, ಹನುಂತರಾಯಪ್ಪ, ನರಸಿಂಹಪ್ಪ ಮತ್ತು ಮರಿಯಪ್ಪ ಅವರನ್ನು ಸನ್ಮಾನಿಸಲಾಯಿತು.ಪಾದಯಾತ್ರಿಗಳ ಕ್ಷೇತ್ರದರ್ಶನ ಸುಗಮವಾಗಲು ಸಹಕರಿಸಿದ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರನ್ನು ಪಾದಯಾತ್ರಿಗಳ ಪರವಾಗಿ ಗೌರವಿಸಲಾಯಿತು.

Leave a Comment

error: Content is protected !!