ಉಜಿರೆ ಎಸ್.ಡಿ.ಎಂ ನಲ್ಲಿ ಜೀವನ ಕೌಶಲ್ಯ ಹಾಗೂ ವೃತ್ತಿಪರ ಕೌಶಲ್ಯ ಮಾಹಿತಿ ಕಾರ್ಯಾಗಾರ

Suddi Udaya

ಉಜಿರೆ: ಪಾಠ ಪಠ್ಯಕ್ರಮ ಇದು ಪರೀಕ್ಷೆಗೆ ಮಾತ್ರ ಸೀಮಿತವಾಗಿದ್ದು ಮನುಷ್ಯ ಉದ್ಯೋಗಕ್ಕೆ ಹೋಗುವಾಗ ಬೇಕಾಗಿರುವುದು ಜೀವನ ಕೌಶಲ್ಯ ಅಲ್ಲಿ ವ್ಯಕ್ತಿಯ ನಡವಳಿಕೆ, ವ್ಯಕ್ತಿಯ ವ್ಯಕ್ತಿತ್ವ, ಶಿಸ್ತು ಮತ್ತು ಸಂಸ್ಕಾರ ಅನ್ವಯ ಆಗುತ್ತದೆ. ಮನುಷ್ಯ ಏನಾದರೂ ಸಾಧನೆ ಮಾಡಬೇಕಾಗಿದ್ದಲ್ಲಿ ತಾಳ್ಮೆ ಅತಿ ಅಗತ್ಯ ಎಂದು ಸೋಮಶೇಖರ್ ಶೆಟ್ಟಿ ಇವರು ಶ್ರೀ ಎಸ್ ಡಿ ಎಂ ಮಹಿಳಾ ಐಟಿಐ, ಎಸ್ ಡಿ ಎಂ ಶಿಕ್ಷಕರ ತರಬೇತಿ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ಜೀವನ ಕೌಶಲ್ಯ ಹಾಗೂ ವೃತ್ತಿಪರ ಕೌಶಲ್ಯ ಎಂಬ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಡುವ ಮಾತು ಇನ್ನೊಬ್ಬರಿಗೆ ಬೆಳಕಾಗಿರಬೇಕು ಹೊರತು ಬೆಂಕಿ ಆಗಿರಬಾರದು ಬದಲಾವಣೆಗೆ ನಾವು ಬದಲಾಗದಿದ್ದರೆ ಬದಲಾವಣೆ ನಮ್ಮನ್ನು ಬದಲಿಸುತ್ತದೆ ಎಂದು ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀಕಾಂತ್ ಬಿರಾವ್ ಜೀವನ ಕೌಶಲ್ಯವು ವ್ಯಕ್ತಿಯ ವ್ಯಕ್ತಿತ್ವವನ್ನು ವೃದ್ಧಿಸಿ ಅವನ ಮೌಲ್ಯವನ್ನು ಹೆಚ್ಚು ಮಾಡುತ್ತದೆ ಎಂದು ನುಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್ ಡಿ ಎಂ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಸ್ವಾಮಿ ಕೆ.ಎ ಕಾರ್ಯಕ್ರಮಕ್ಕೆ ಶುಭ ಕೋರಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ ಡಿ ಎಂ ಐಟಿಐ ಪ್ರಾಂಶುಪಾಲ ವಿ ಪ್ರಕಾಶ್ ಕಾಮತ್ ಉತ್ತಮ ದುಡಿಮೆಗಾಗಿ ಉತ್ತಮ ವಿದ್ಯಾಭ್ಯಾಸ ಮತ್ತು ಮಾಡುವ ಉದ್ಯೋಗಕ್ಕೆ ತಕ್ಕಂತೆ ಗೌರವ ಆದರಗಳನ್ನು ಬೆಳೆಸಿಕೊಳ್ಳುವುದು ಸಮಯಪಾಲನೆ ಶಿಸ್ತು ಒಳ್ಳೆಯ ಗುಣ, ಒಳ್ಳೆಯ ಮಾತು ಮತ್ತು ಉತ್ತಮ ನಡವಳಿಕೆಗಳನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕುಮಾರಿ ಶಾಲಿನಿ ಡಿ. ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಸ್ವಾಗತಿಸಿ ನೆಹರೂ ಯುವ ಕೇಂದ್ರ ಸಂಘಟಕರಾದ ಸಾಂತಪ್ಪ ಧನ್ಯವಾದ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶ್ರೀಕಾಂತ್ ಬಿರಾವು, ಶ್ರೀ ಸಾಂತಪ್ಪ ಹಾಗೂ ಕು. ದಿವ್ಯ ಎ ಇವರು ವೃತ್ತಿಪರ ಹಾಗೂ ಜೀವನ ಕೌಶಲ್ಯದ ಕುರಿತು ತಲಾ ಒಂದು ಗಂಟೆಗಳ ಕಾಲ ವಿವಿಧ ಆಟಗಳೊಂದಿಗೆ ಅನೇಕ ವಿಚಾರಗಳ ಜೊತೆಗೆ ಮಾಹಿತಿಯನ್ನು ನೀಡಿದರು. ಶ್ರೀಮತಿ ವಿಜಯಶ್ರೀ ಇವರು ಬ್ಯುಟೀಷಿನ್ ತರಬೇತಿಯ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಮಂಗಳೂರು ವತಿಯಿಂದ ವೃತ್ತಿ ಮಾರ್ಗದರ್ಶನ ಮತ್ತು ಸಂಚಾರಿ ನೋಂದಣಿ ಪ್ರಕ್ರಿಯೆ ನಡೆಸಲಾಯಿತು ಉದ್ಯೋಗ ಮತ್ತು ವಿನಿಮಯ ಇಲಾಖೆ ಮಂಗಳೂರು ಇಲ್ಲಿನ ಅಧಿಕಾರಿ ಶ್ರೀಮತಿ ಮಂಜುಶಾ ಪಿ ಇವರು ವೃತ್ತಿ ಮಾರ್ಗದರ್ಶನದ ಮಾಹಿತಿಯನ್ನು ನೀಡಿದರು.

Leave a Comment

error: Content is protected !!