ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಅಗ್ರಹಿಸಿ ಕೊಕ್ಕಡ ಕೆನರಾ ಬ್ಯಾಂಕ್ ಮ್ಯಾನೇಜರ್ ಮೂಲಕ ಕೇಂದ್ರ ಕಚೇರಿಗೆ ಮನವಿ

Suddi Udaya

ಕೊಕ್ಕಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಹಾಗೂ ಪದ್ಮನಾಭ ಆಚಾರ್ಯರನ್ನು ಚಿನ್ನ ಪರಿಶೋಧಕನಾಗಿ ಮುಂದುವರಿಸುವಂತೆ ಅಗ್ರಹಿಸಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಾ.18ರಂದು ಕೊಕ್ಕಡ ಕೆನರಾ ಬ್ಯಾಂಕ್ ನ ಮ್ಯಾನೇಜರ್ ಅಂಕಿತ್ ಸಿಂಗ್ ಮೂಲಕ ಮಂಗಳೂರು ಮುಖ್ಯ ಕಚೇರಿ ಜನರಲ್ ಮ್ಯಾನೇಜರ್ ಗೆ ಮನವಿ ಸಲ್ಲಿಸಲಾಯಿತು.

ಕೊಕ್ಕಡ ಗ್ರಾಮದ ಕೊಕ್ಕಡ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳೆದ19 ವರ್ಷಗಳಿಂದ ಪದ್ಮನಾಭ ಆಚಾರ್ಯರವರು ಚಿನ್ನ ಪರಿಶೋಧಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ದುರುದ್ದೇಶದಿಂದ ಇವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಟರ್ಮಿನೇಶನ್ ಪತ್ರದಲ್ಲಿ ನಕಲಿ ಚಿನ್ನ [SPURIOUS GOLD] ವನ್ನು ಬ್ಯಾಂಕಿನಲ್ಲಿ ಅಡಮಾನವಿಡಲು ಕಾರಣರಾಗಿದ್ದೀರಿ ಎಂಬ ಕಾರಣವನ್ನು ನೀಡಲಾಗಿದೆ. ಆದರೆ ಬ್ಯಾಂಕಿನ ಗೋಡೆಯಲ್ಲಿ ಅಂಟಿಸಲಾದ ಬರಹಗಳ ಪ್ರಕಾರ ವ್ಯವಸ್ಥಾಪಕರಿದ್ದು ನಿಯಮಗಳ ಪ್ರಕಾರ ಚಿನ್ನ ಪರಿಶೋಧಿಸಬೇಕು ಎಂಬ ಬರಹವನ್ನು ಬರೆಯಲಾಗಿದೆ ಮತ್ತು ಆಚಾರ್ಯರಿಗೆ ಇದುವರೆಗೆ ಚಿನ್ನವನ್ನು ವಿರೂಪಗೊಳಿಸಿ ಅಥವಾ ತುಂಡರಿಸಿ ಪರಿಶೀಲನೆ ನಡೆಸಬಹುದು ಎಂದು ನಿಯಮಗಳ ಮಾರ್ಗಸೂಚಿ ಪಟ್ಟಿಗಳನ್ನು ಕೊಟ್ಟಿರುವುದಿಲ್ಲ. ಸಾರ್ವಜನಿಕರಾದ ನಾವು ಈ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮತ್ತು ಪದ್ಮನಾಭ ಆಚಾರ್ಯರನ್ನು ಸೇವೆಯಲ್ಲಿ ಮಂದುವರಿಸಬೇಕೆಂದು ಬ್ಯಾಂಕಿನ ಕೇಂದ್ರ ಕಛೇರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಬಿ.ಎಮ್ ಭಟ್, ಸುಬ್ರಹಣ್ಯ ಶಬರಾಯ, ಪದ್ಮನಾಭ ಆಚಾರ್ಯ, ಶ್ರೀಧರ ಕೆಂಗುಡೇಲು, ದಯಾನೀಶ್, ತುಕ್ರಪ್ಪ ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.

Leave a Comment

error: Content is protected !!