37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿ

ಬೆಳ್ತಂಗಡಿಯ ಮೂವರ ಕೊಲೆ ಪ್ರಕರಣ ಚಿನ್ನದ ಆಸೆ ತೋರಿಸಿ ಕರೆಸಿಕೊಂಡ ಆರೋಪಿಗಳು: ಬೀರನಕಲ್ಲು ಬೆಟ್ಟದ ಬಳಿ ಮಚ್ಚು, ಲಾಂಗ್, ಡ್ಯಾಗರ್‌ನಿಂದ ಹಲ್ಲೆ ಮಾಡಿ ಕೊಲೆ ತುಮಕೂರು ಎಸ್ಪಿ ಅಶೋಕ್ ಕೆವಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಬೆಳ್ತಂಗಡಿ : ಚಿನ್ನದ ಆಸೆ ತೋರಿಸಿ, ಮೂರು ಮಂದಿಯನ್ನು ತುಮಕೂರಿಗೆ ಕರೆಸಿಕೊಂಡು ಆರೋಪಿಗಳು ಮಾ. 22 ರಂದು ಬೆಳಗಿನ ಜಾವ 12 ಗಂಟೆ ಸುಮಾರಿಗೆ ಚಿನ್ನ ನೀಡುವುದಾಗಿ ತುಮಕೂರು ಸಮೀಪದ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡು ಮಚ್ಚು, ಲಾಂಗ್ ಮತ್ತು ಡ್ಯಾಗರ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿರುವುದಾಗಿ ಬೆಳಕಿಗೆ ಬಂದಿದೆ.

ತುಮಕೂರು ಎಸ್ಪಿ ಅಶೋಕ್ ಕೆವಿ ಮಾ.25 ರಂದು ತುಮಕೂರು ಎಸ್ಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ತುಮಕೂರಿನ ಶಿರಾ ಗೇಟ್‌ನಲ್ಲಿ ವಾಸವಿರುವ ಪಾತರಾಜು @ ರಾಜು @ ರಾಜಗುರು @ಕುಮಾರ್, ಇನ್ನೊರ್ವ ಆರೋಪಿ ಸತ್ಯಮಂಗಲದ ನಿವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ ಎಂಬಾತನನ್ನು ಬಂಧಿಸಲಾಗಿದೆ. ಇನ್ನು ಆರು ಮಂದಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ : ಮಾ. 22 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ ಕೋರಾ ಪೊಲೀಸ್ ಠಾಣಾವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ 3 ಮಂದಿ ಮನುಷ್ಯರ ದೇಹಗಳು ಸುಟ್ಟ ಸ್ಥಿತಿಯಲ್ಲಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಕೋರಾ ಪೊಲೀಸ್ ಠಾಣೆಯ ಪಿಎಸ್‌ಐರವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಒಂದು ಮಾರುತಿ ಸುಜುಕಿ ಕಾರಿನ ಹಿಂಭಾಗದ ಸೀಟಿನಲ್ಲಿ ಒಂದು ಮತ್ತು ಡಿಕ್ಕಿಯಲ್ಲಿ ಎರಡು ದೇಹಗಳು ಸುಟ್ಟು ಕರಕಲಾಗಿದ್ದು, ಯಾರೋ ದುಷ್ಕರ್ಮಿಗಳು ಮೂವರನ್ನು ಯಾವುದೋ ಕಾರಣಕ್ಕೆ ಕೊಲೆಗೈದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಹಾಕಿ ಪೆಟ್ರೋಲ್ ಅಥವಾ ಬೇರಾವುದೋ ಇಂಧನ ಸುರಿದು ಬೆಂಕಿ ಹಚ್ಚಿ ಸುಟ್ಟಿರೋದು ಕಂಡು ಬಂದಿತ್ತು.

ಈ ಬಗ್ಗೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ, ಐ.ಪಿ.ಎಸ್ ರವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿ ಮರಿಯಪ್ಪ ಮತ್ತು ಬಿ.ಎಸ್‌ಅಬ್ದುಲ್ ಖಾದರ್ ಕೆ.ಎಸ್.ಪಿ.ಎಸ್ ರವರ ಸೂಚನೆ ಮತ್ತು ಮಾರ್ಗದರ್ಶನದಂತೆ ತುಮಕೂರಿನ ಪೊಲೀಸರ ತಂಡ ವಿಚಾರಣೆ ನಡೆಸಿದಾಗ ಕರಾಳ ದಂಧೆಗಾಗಿ ಮೂವರ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು.

ಮೃತರಿಗೆ ಸಂಪರ್ಕ ಹೇಗೆ: ಮೃತರಾದ ಬೆಳ್ತಂಗಡಿಯ ಇಶಾಕ್ ಸಿಮಾಮ್,ಶಾಹುಲ್ ಹಮೀದ್, ಸಿದ್ದಿಕ್ ಇವರಿಗೆ ಪಾತರಾಜನ ಜೊತೆ ಸುಮಾರು 6-7 ತಿಂಗಳಿನಿಂದ ಸಂಪರ್ಕವಿತ್ತು. ಇವರೆಲ್ಲಾ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದು, ಪಾತರಾಜನಿಗೆ ಸುಮಾರು 6 ಲಕ್ಷ ರೂ ಹಣ ನೀಡಿದ್ದರು. ಹಣ ನೀಡಿ 6 ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ ಕೊಡುವಂತೆ ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಪಾತರಾಜನಿಗೆ ಹೇಳಿದ್ದರು. ಇದರಿಂದಾಗಿ ಇವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಸಂಚೂ ರೂಪಿಸಿದ ಪಾತರಾಜು ತನಗೆ ಪರಿಚಯದ ಸತ್ಯಮಂಗಲದ ವಾಸಿ ಗಂಗರಾಜು ಮತ್ತು ಅವನ 6ಜನ ಸಹಚರರಾದ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂಧನ್, ನವೀನ್, ವೆಂಕಟೇಶಪುರದ ಕೃಷ್ಣ, ಹೊಂಬಯ್ಯನಪಾಳ್ಯದ ಗಣೇಶ, ನಾಗಣ್ಣನಪಾಳ್ಯದ ಕಿರಣ್, ಕಾಳಿದಾಸನಗರದ ಸೈಮನ್, ಸೇರಿಸಿಕೊಂಡು ಮೂರು ಜನರನ್ನು ಕೊಲೆ ಮಾಡು ಫ್ಲ್ಯಾನ್ ಮಾಡಿ ಕೊಲೈಗೈದಿದ್ದರು.

ಕೊಲೆಗಾರರಿಗೂ 3 ಕೆ ಜಿ ಚಿನ್ನ : ಕೊಲೆ ಮಾಡುವ ಪ್ಲಾನ್ ವೇಳೆ ಪ್ರಕರಣದ ಮಾಸ್ಟರ್ ಮೈಂಡ್ ಪಾತರಾಜು ಕೊಲೆಗಾರರಿಗೂ 3 ಕೆ.ಜಿ ಚಿನ್ನ ಕೊಡುವುದಾಗಿ ಆಸೆ ತೋರಿಸಿದಂತೆ. ಮಾ. 22 ರಂದು ಬೆಳಗಿನ ಜಾವ 12 ಗಂಟೆ ಸುಮಾರಿಗೆ ಮೃತರನ್ನು ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡು ಅವರುಗಳನ್ನು ಮಚ್ಚು, ಲಾಂಗ್ ಮತ್ತು ಡ್ಯಾಗರ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು ಇನ್ನುಳಿದಂತೆ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂದನ್(24), ಸಂತೇಪೇಟೆಯ ನವೀನ್(24), ವೆಂಕಟೇಶಪುರದ ಕೃಷ್ಣ(22), ಹೊಂಬಯ್ಯನಪಾಳ್ಯದ ಗಣೇಶ್(19), ನಾಗಣ್ಣನಪಾಳ್ಯದ ಕಿರಣ್(23), ಕಾಳಿದಾಸನಗರದ ಸೈಮನ್(18) ಪರಾರಿಯಾಗಿದ್ದು ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Related posts

ಮಿತ್ತಬಾಗಿಲು: ಕೊಲ್ಲಿ ಸೇತುವೆ ಬಳಿ ನಿಂತಿದ್ದ ಸ್ಕೂಟಿಗೆ ಬೈಕ್ ಡಿಕ್ಕಿ

Suddi Udaya

ವೇಣೂರು: ಸರ್ಕಾರಿ ಪ್ರೌಢಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ಬೆಳ್ತಂಗಡಿ: ಮಗುವಿನ ನೆರವಿಗಾಗಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಪೆನ್ನು ಮಾರಾಟ

Suddi Udaya

ನಾಲ್ಕೂರು: ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಕುರೆಲ್ಯ ನಿಧನ

Suddi Udaya

ಶಿಬಾಜೆ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ: ಹೊರೆಕಾಣಿಕೆ ಸಮರ್ಪಣೆ, ನೂತನ ಪಲ್ಲಕ್ಕಿ ಮೆರವಣಿಗೆ,

Suddi Udaya

ಬೆಳ್ತಂಗಡಿ ಪತ್ರಕರ್ತರಿಗೆ ಅಪಘಾತ ವಿಮೆ ಯೋಜನೆ ನೋಂದಣಿ

Suddi Udaya
error: Content is protected !!