ಉಜಿರೆಯಲ್ಲಿ ರೈತ ಉತ್ಪಾದಕರ ಕಂಪನಿ ಉದ್ಘಾಟನೆ ಹಾಗೂ ಷೇರು ಪ್ರಮಾಣ ಪತ್ರ  ವಿತರಣೆ

Suddi Udaya

ಉಜಿರೆ: ಭಾರತ ಸರಕಾರ ಕೃಷಿ ಸಹಕಾರ ಹಾಗು ರೈತರ ಕಲ್ಯಾಣ ಮಂತ್ರಾಲಯದ ಮೂಲಕ ರೈತ ಉತ್ಪಾದಕ ಸಂಸ್ಥೆಗಳು ರೈತರನ್ನು ಸಂಘಟಿಸಿ ಅವರ ಸಾಮರ್ಥ್ಯ ಬಲಗೊಳಿಸಿ , ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದಿಸಿ  ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆತು ,ಹೆಚ್ಚು ಲಾಭ ಗಳಿಸುವ  ದೂರದೃಷ್ಟಿ ಯೋಜನೆ  ಹೊಂದಿ ಪ್ರಾರಂಭಗೊಂಡ  ರೈತ ಉತ್ಪಾದಕರ ಕಂಪೆನಿಯ ಷೇರುದಾರರಾಗಿ  ಅಧಿಕ ಆದಾಯ ಪಡೆಯಲು  ಅವಕಾಶವಿದೆ.  ಕಾಲಕ್ಕೆ ತಕ್ಕಂತೆ  ಬದಲಾವಣೆಗೊಂಡು ಕೃಷಿಯಲ್ಲಿ ಹೊಸ ಆವಿಷ್ಕಾರ,ತಂತ್ರಜ್ಞಾನದ ಹೊಂದಾಣಿಕೆಯಲ್ಲಿ  ತಮ್ಮ ಬೆಳೆಗಳಿಗೆ ನೇರ  ಮಾರುಕಟ್ಟೆಯಿಂದ ಆದಾಯ ದ್ವಿಗುಣ ಗಳಿಸಲು  ಎಲ್ಲರಿಗೂ  ಉತ್ತಮ ಅವಕಾಶವಿದೆ  ಎಂದು  ಸಂಪನ್ಮೂಲ ವ್ಯಕ್ತಿ,ಬೆಂಗಳೂರಿನ  ಇಕೋವ ಸಂಸ್ಥೆಯ  ರಾಜ್ಯ ಯೋಜನಾ ಸಂಯೋಜಕ ತಿಪ್ಪೇಸ್ವಾಮಿ ನುಡಿದರು.             

ಅವರು ಮಾ 25 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ  ಭಾರತ ಸರಕಾರದ ಅಂಗಸಂಸ್ಥೆಯಾದ ಎಸ್ ಎಫ್ ಎ ಸಿ ಯಿಂದ ಅನುಮೋದನೆಗೊಂಡ ಉಜಿರೆ  ರೈತ ಉತ್ಪಾದಕರ ಕಂಪೆನಿ(ನಿ)ಯ ಉದ್ಘಾಟನಾ ಸಮಾರಂಭ ಮತ್ತು ಷೇರು ಪ್ರಮಾಣ ಪತ್ರ  ವಿತರಣಾ  ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಮಾತನಾಡಿದರು.  ರೈತರು  ಬೆಳೆಯುವ  ಕಾಳುಮೆಣಸು, ರಬ್ಬರ್, ಅಡಿಕೆ, ತೆಂಗು , ಗೇರು, ಮಾವು ಇತ್ಯಾದಿ ಬೆಳೆಗಳಿಗೆ  ಸೂಕ್ತ ಮಾಹಿತಿ ಪಡೆದು  ಬೆಳೆಗಳಿಗೆ  ನೇರ ಮಾರುಕಟ್ಟೆ ಮೂಲಕ ಉತ್ತಮ ಬೆಲೆ ದೊರೆತು ,ಹೆಚ್ಚಿನ ಆದಾಯ ಪಡೆಯಬಹುದು.ನಾಸಿಕ್ ಜಿಲ್ಲೆಯ ಸಿನ್ಹಾರ್ ನಲ್ಲಿ ರೈತರೊಬ್ಬರು  ಪಶು ಪಾಲನೆ,ಕುರಿ ಸಾಕಾಣಿಕೆಯಿಂದ  ಹೆಚ್ಚಿನ ಆದಾಯ ಪಡೆದಿದ್ದಾರೆ.  ರಾಣೆಬೆನ್ನೂರು, ಬಾಳೆಹೊನ್ನೂರುಗಳಲ್ಲಿ  ಮೆಣಸು ಬೆಳೆಗಾರರು ,ಸಿರಸಿಯ ಬನವಾಸಿಯಲ್ಲಿ ಇಬ್ಬರು ರೈತರು ಕಲ್ಲಂಗಡಿ ಬೆಳೆಯಿಂದ ಹೆಚ್ಚು ಲಾಭ ಪಡೆದಿದ್ದಾರೆ. ಬೆಂಗಳೂರಿನ ಕೃಷಿಕರೊಬ್ಬರು ಜೀನಿ ಬೆಳೆಯಿಂದ  ಅಭಿವೃದ್ಧಿ ಹೊಂದಿ  12೦೦ ಕೆಲಸಗಾರರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.  ಪ್ರಧಾನಿ ಮೋದಿಯವರು ಇಂತಹ 1೦,೦೦೦  ರೈತ ಉತ್ಪಾದಕರ ಸಂಘ ಸ್ಥಾಪನೆಗೆ ಮುಂದಾಗಿದ್ದಾರೆ. ರೈತರಿಗೆ  ಮುಕ್ತ ಅವಕಾಶವಿದ್ದು  ಯಂತ್ರೋಪಕರಣ ಖರೀದಿ, ಮೌ ಲ್ಯ ವರ್ಧನೆಗೆ ಬಡ್ಡಿರಹಿತ ಸಾಲ ಸೌಲಭ್ಯವಿದ್ದು  ಕೇಂದ್ರ,ರಾಜ್ಯ ಸರಕಾರಗಳು  ಸಹಾಯಧನ ನೀಡುತ್ತಿದ್ದು,ರೈತರ ಲಾಭ ಕ್ಕೆ ಯಾವುದೇ  ಆದಾಯ ತೆರಿಗೆ ಇರುವುದಿಲ್ಲ . ರೈತರು ಸಂಘಟಿತರಾಗಿ  ಷೇರು ಖರೀದಿಸಿ ಹೆಚ್ಚು ಲಾಭ ಪಡೆಯಬೇಕೆಂದು  ನುಡಿದರು.                 

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಕೃಷಿಕ ರೈತರ ಶ್ರೇಯೋಭಿವೃದ್ಧಿಗಾಗಿ  ಆರಂಭಗೊಂಡ ಉತ್ಪಾದಕರ ಕಂಪನಿ  ಷೇರುದಾರರ  ಸಂಘಟ ನೆಯಿಂದ   ಉತ್ತರೋತ್ತರ ಅಭಿವೃದ್ಧಿ ಹೊಂದಿ  ಅವರ ಮುಂದಿನ ಬದುಕು ಸುಖ ಸಮೃದ್ಧಿಯಾಗಲಿ ಎಂದು ಶುಭ ಹಾರೈಸಿದರು.  ಅಧ್ಯಕ್ಷತೆ ವಹಿಸಿದ  ಉಜಿರೆ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಜಿ. ಗಣೇಶ್ ಭಟ್  ಈಗಾಗಲೇ 35೦ ಮಂದಿ ಷೇರುದಾರರು ನೋಂದಾಯಿಸಿಕೊಂಡಿದ್ದು  1೦೦೦ ಮಂದಿ ನೋಂದಾಯಿಸುವ ಗುರಿ ಹೊಂದಲಾಗಿದೆ.  ಒಳ್ಳೆಯ ಮನಸ್ಸಿನಿಂದ  ಕನಸನ್ನು ನನಸಾಗಿಸಲು  ಕಂಪನಿಯನ್ನು  ಭದ್ರಪಡಿಸಲು ಎಲ್ಲರು ಕೈಜೋಡಿಸಿ ,ಯೋಜನೆಯನ್ನು ಇತರರಿಗೆ ತಲುಪಿಸಿ ಸಂಸ್ಥೆಯ ಬಲವರ್ಧನೆಗೆ  ತೊಡಗಿಸಿಕೊಳ್ಳಬೇಕು.  ಸಂಸ್ಥೆ ಶಾಶ್ವತವಾಗಿ ಬೆಳೆದು ಉಳಿಯಲು  ನೀರೆರೆದು ಪೋಷಿಸಬೇಕು.  ಅದರ ಅಮೃತ ಫಲವನ್ನು ನಾವೆಲ್ಲರೂ ಜತೆಯಾಗಿ ಪಡೆಯೋಣ ಎಂದು ಎಲ್ಲರ ಸಹಕಾರ,ಮಾರ್ಗದರ್ಶನ ಕೋರಿದರು. ಕಂಪೆನಿಗೆ ಷೇರುದಾರರಾಗಲು ಉಜಿರೆ ಪರಿಸರದ  ಯಾವುದೇ ರೈತರು   ಅರ್ಜಿ ಫಾರಂ ಜತೆಗೆ  ರೂ 11೦೦ (ನೋಂದಣಿ  ಶುಲ್ಕ  ಸೇರಿ ) ಪಾವತಿಸಿ ಪಾಲುದಾರರಾಗಬಹುದು  ಎಂದರು.   ರೈತರಿಗೆ ಜೂನ್ ತಿಂಗಳಲ್ಲಿ ಪ್ರವಾಸ ಏರ್ಪಡಿಸಬೇಕೆಂದು ತಿಮ್ಮಪ್ಪ ಗೌಡ ಬೆಳಾಲು ಅಭಿಪ್ರಾಯ ವ್ಯಕ್ತಪಡಿಸಿದರು.                                       

ವೇದಿಕೆಯಲ್ಲಿ  ಇಕೋವಾ ಸಂಸ್ಥೆಯ ಸಂಯೋಜಕ ಡಿಕೆಸಿ, ಸಹಸಂಯೋಜಕ ಧರ್ಮೇಂದ್ರ  ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಸ್ವಾಗತಿಸಿ, ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ನಿರ್ದೇಶಕ ಚಂದ್ರಶೇಖರ್ ನಿರೂಪಿಸಿ, ನಿರ್ದೇಶಕ ಸೀತಾರಾಮ ಶೆಟ್ಟಿ ಕೇಂಬರ್ಜೆ ವಂದಿಸಿದರು.  ನಿರ್ದೇಶಕರಾದ  ಜಯಂತ ಗೌಡ, ಚಂದ್ರಶೇಖರ ಗೌಡ,ಸಂಜೀವ ನಾಯ್ಕ್, ಪುಷ್ಪ ಜಿ. ಡಿ, ಶಿವಾನಂದ ಮಯ್ಯ ಮತ್ತು ಉಜಿರೆ ಪರಿಸರದ ರೈತರು  ಉಪಸ್ಥಿತರಿದ್ದರು.       

Leave a Comment

error: Content is protected !!