ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ದಿ| ಉದಯಕುಮಾರ್ ಸ್ಮರಣಾರ್ಥ “ಸೂರ್ಯೋದಯ” ಕೃತಿ ಬಿಡುಗಡೆ

Suddi Udaya

ಉಜಿರೆ: ಶ್ರಾವಕರ ಷಟ್ಕರ್ಮಗಳಾದ ದೇವರಪೂಜೆ, ಆರಾಧನೆ, ಗುರುಗಳಸೇವೆ, ಸ್ವಾಧ್ಯಾಯ ಮೊದಲಾದವುಗಳನ್ನು ಪರಿಶುದ್ಧ ಮನಸ್ಸಿನಿಂದ ನಿತ್ಯವೂ ಮಾಡಿದಾಗ, ಆತ್ಮನಿಗಂಟಿದ ಸಕಲ ಪಾಪಕರ್ಮಗಳ ಕೊಳೆ ಕಳೆದು ಆತ್ಮನೇ ಪರಮಾತ್ಮನಾಗುತ್ತಾನೆ. ಜನರೆಲ್ಲ ಜಿನರಾಗಬೇಕು. ಮೋಕ್ಷ ಪ್ರಾಪ್ತಿಯೇ ಬದುಕಿನ ಪರಮ ಗುರಿಯಾಗಬೇಕು ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.


ಅವರು ಜೂ.7ರಂದು ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಪುಂಜಾಲಕಟ್ಟೆ ಕಟ್ಟೆಮನೆ ಗುತ್ತು ದಿವಂಗತ ಉದಯಕುಮಾರ್ ಅವರ ಸ್ಮರಣಾರ್ಥ ಶಾಸ್ತ್ರದಾನಕ್ಕಾಗಿ ಪ್ರಕಟಿಸಿದ “ಸೂರ್ಯೋದಯ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಕ್ರೋಧಾದಿ ಮಾನಕಷಾಯಗಳನ್ನು ತೊರೆದು ನಮ್ಮೊಳಗಿರುವ ವೀತರಾಗ ಸ್ವರೂಪಿ ಆತ್ಮನನ್ನು ಗುರುತಿಸಿಕೊಂಡು ಮೋಕ್ಷಪ್ರಾಪ್ತಿಗೆ ನಿರಂತರ ಪ್ರಯತ್ನಿಸಬೇಕು.
ಮೋಹನೀಯ ಕರ್ಮ ಎಲ್ಲಾ ಕರ್ಮಗಳ ರಾಜ. ದ್ರವ್ಯ, ಕ್ಷೇತ್ರ, ಕಾಲ, ಭವ ಮತ್ತು ಭಾವವನ್ನು ಹೊಂದಿಕೊAಡು ಚಾಕಚಕ್ಯತೆಯಿಂದ ಬದುಕಿನ ಎಲ್ಲಾ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿ ಕರ್ಮ ಬಂಧವನ್ನು ತಡೆದು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಕಟ್ಟೆಮನೆ ಉದಯಕುಮಾರರ ಸೇವಾ ಮನೋಭಾವ, ಆದರ್ಶ ನಾಯಕತ್ವ, ಶ್ರಾವಕ ಧರ್ಮದ ಪರಿಪಾಲನೆಯನ್ನು ಸ್ವಾಮೀಜಿ ಶ್ಲಾಘಿಸಿದರು.


ಶಿಕ್ಷಕ ಧರಣೇಂದ್ರ ಕುಮಾರ್ ಸಭಾಕಾರ್ಯಕ್ರಮ ನಿರ್ವಹಣೆ ಮಾಡಿದರು.
ಭಗವಾನ್ ಶಾಂತಿನಾಥ ಸ್ವಾಮಿಗೆ 504 ಕಲಶ ಅಭಿಷೇಕ, ಮೂರೂ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವರಹ ಪೂಜೆ ನಡೆಯಿತು.
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್, ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಮಾಜಿ ಸಚಿವರುಗಳಾದ ಬಿ. ರಮಾನಾಥ ರೈ ಮತ್ತು ಅಭಯಚಂದ್ರ ಜೈನ್, ಕೆ. ಪ್ರಸನ್ನ ಕುಮಾರ್ ಬೆಳ್ತಂಗಡಿ, ಎಸ್.ಡಿ. ಸಂಪತ್‌ಸಾಮ್ರಾಜ್ಯ ಶಿರ್ತಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಪ್ರಬಂಧಕರುಗಳಾದ ಎಂ. ಜಿನರಾಜ ಶೆಟ್ಟಿ ಮತ್ತು ಮೋಹನ ಪಡಿವಾಳ್, ಕೆ.ಪಿ. ಜಗದೀಶ ಅಧಿಕಾರಿ ಮೂಡಬಿದ್ರೆ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!