ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ನೂರು ಶೇಕಡ ಸಾಧನೆಗೆ ಕಾರಣವಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಮಾರಂಭ ಜರಗಿತು.

ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಾಲು ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡರವರು ವೈಯಕ್ತಿಕ ನೆಲೆಯಲ್ಲಿ ಪ್ರತೀ ವಿದ್ಯಾರ್ಥಿಗಳಿಗೆ ಸ್ಮರಣಿಕೆಯೊಂದಿಗೆ ರೂ. ಒಂದು ಸಾವಿರದ ಪ್ರೋತ್ಸಾಹ ಧನವನ್ನು ನೀಡಿ ಸನ್ಮಾನಿಸಿದರು. ಜೊತೆಗೆ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದಲೂ ಪ್ರತೀ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಿ ಮಾತನಾಡುತ್ತಾ, ಬೆಳಾಲು ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ನೂರು ಶೇಕಡ ಫಲಿತಾಂಶದ ಸಾಧನೆಯನ್ನು ಮಾಡಿ ಊರಿಗೆ ಕೀರ್ತಿ ತಂದಿದ್ದಾರೆ. ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ಉನ್ನತ ಗುರಿಯೊಂದಿಗೆ ಅಧ್ಯಯನದ ಮಾಡುವ ಮೂಲಕ ಉತ್ತಮ ಸ್ಥಾನಮಾನವನ್ನು ಹೊಂದಿರಿ ಎನ್ನುತ್ತಾ ಶುಭಹಾರೈಸಿದರು.


ಅತಿಥಿಗಳಾದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲ ಮತ್ತು ಶಾಲೆಯ ಹಳೆ ವಿದ್ಯಾರ್ಥಿ ಇಂಜಿನಿಯರಿಂಗ್ ಪದವೀಧರೆ ಕು ವಂದನಾ ಪರಂಗಜೆಯವರು ಅನಿಸಿಕೆಗಳೊಂದಿಗೆ ಶುಭಕೋರಿದರು. ವೇದಿಕೆಯಲ್ಲಿ ಪಂಚಾಯತ್ತಿನ ವಾಚನಾಲಯ ಅಧಿಕಾರಿ ಡೀಕಯ್ಯ ಗೌಡ ಅರಣೆಮಾರು ಹಾಗೂ ಶಿಕ್ಷಕ ಸಿಬ್ಬಂದಿಗಳೆಲ್ಲರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪರವಾಗಿ ಕು. ಅಮೂಲ್ಯ ಮತ್ತು ಕು. ಕೀರ್ತನಾ ರವರು ಅಭಿಪ್ರಾಯಗಳನ್ನು ಹಂಚಿಕೊಂಡರು. ಶಿಕ್ಷಕರಾದ ಸುಮನ್ ರವರು ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಸಮೀಕ್ಷಾ ವಂದಿಸಿ, ಇಂದುಮತಿ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!