ಉಜಿರೆ ಪಂಚಗವ್ಯ ಚಿಕಿತ್ಸಾ ಶಿಬಿರ

Suddi Udaya

ಉಜಿರೆ : “ಇಂದಿನ ಆಧುನಿಕ ಯುಗದಲ್ಲಿ ಗೋವಿನ ಸಂತತಿ ಕ್ಷೀಣಿಸುತ್ತಿರುವುದು, ಗೋ ಉತ್ಪನ್ನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ತತ್ವ ಮೂಡಿಸುತ್ತಿರುವುದು ವಿಷಾದನೀಯ. ಆರೋಗ್ಯ,ಸ್ವಾಸ್ಥ್ಯವನ್ನು ಕಾಪಾಡಲು ಪಂಚಗವ್ಯ ಸಹಕಾರಿ. ಗೋಸಂತತಿ ಹೆಚ್ಚಬೇಕಿದ್ದು, ನಮ್ಮ ಜವಾಬ್ದಾರಿ ನಿರ್ವಹಿಸುವ ಮೂಲಕ ಉತ್ತಮ ವಿಚಾರಗಳನ್ನು ಸಮಾಜಕ್ಕೆ ನೀಡುವಂತಾಗಬೇಕು” ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.


ಅವರು ಜೂ.11 ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಪಂಚಗವ್ಯ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗವ್ಯಸಿದ್ಧ ವೈದ್ಯ ಶಶಿಶೇಖರ ದರ್ಭೆ ಮಾತನಾಡಿ “ಗೋವು ಪ್ರಕೃತಿಯಲ್ಲಿರುವ ಗಿಡಮೂಲಿಕೆ ಸೇವಿಸಿ ಗೋಮೂತ್ರ, ಗೋಮಯದ ಮೂಲಕ ಆಯುರ್ವೇದ ಔಷಧಿಗೆ ಅಗತ್ಯ ವಸ್ತು ನೀಡುತ್ತದೆ. ಆಯುರ್ವೇದ ಪರಿಣಾಮಕಾರಿಯಾಗಿದ್ದು ಇದನ್ನು ಅರ್ಥೈಸುವಲ್ಲಿ ಕೆಲವರು ವಿಫಲರಾಗಿದ್ದಾರೆ. ಶರೀರದ ಪಾಲನೆಗೆ ಪಂಚಗವ್ಯ ಅತಿ ಅವಶ್ಯಕ ಇದು ಶರೀರದಲ್ಲಿನ ಕೊರತೆ ಇರುವ ಅಂಗಾಂಗಗಳಿಗೆ ಪೂರಕ ಪರಿಣಾಮ ನೀಡುತ್ತದೆ” ಎಂದರು.


ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರಿನ ಎಚ್.ಆರ್. ಸತೀಶ್ಚಂದ್ರ, ಗೋಸೇವಾ ಗತಿ ವಿಧಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಯೋಜಕ ಪ್ರವೀಣ್ ಸರಳಾಯ, ಎಸ್ ಕೆ ಡಿ ಆರ್ ಡಿಪಿಯ ಮಹಾಬಲ ಕುಲಾಲ್, ಗವ್ಯ ಚಿಕಿತ್ಸಕ ಡಾ.ಡಿ.ಪಿ. ರಮೇಶ್, ಆಯುರ್ವೇದ ವೈದ್ಯ ಸುಪ್ರೀತ್ ಲೋಬೋ, ಎಸಿಸಿಇ ಬೆಳ್ತಂಗಡಿ ಸುರೇಶ ಬಂಗೇರ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸ್ವಾಮಿ ಶ್ರೀವಿವೇಕಾನಂದ ಸೇವಾಶ್ರಮ ಟ್ರಸ್ಟ್ ನ ಡಾ. ಎಂ.ಎಂ. ದಯಾಕರ, ಮುಂಡಾಜೆ ಪ್ಯಾಕ್ಸ್ ಸಿಇಒ ಚಂದ್ರಕಾಂತ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಉದಯ ಶಂಕರ ಕಾರ್ಯಕ್ರಮ ನಿರೂಪಿಸಿದರು. ವೇದಮೂರ್ತಿ ಮುರಳಿ ಕೃಷ್ಣ ಕೆ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು.


ಒಟ್ಟು 86 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು. ವೈದ್ಯಕೀಯ ತಪಾಸಣೆ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಔಷಧಿ ನೀಡಲಾಯಿತು.
ಕಾರ್ಯಕ್ರಮವು ಸುರಕ್ಷಾ ಗೋ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ವೆಲ್ಫೇರ್ ಟ್ರಸ್ಟ್ ಉಡುಪಿ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಧರ್ಮಸ್ಥಳ, ರೋಟರಿ ಕ್ಲಬ್ ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ , ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ ಉಜಿರೆ, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಎಸಿಸಿಇ ಬೆಳ್ತಂಗಡಿ ಸೆಂಟರ್ ಹಾಗೂ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜ ಆಶ್ರಯದಲ್ಲಿ ಜರಗಿತು.

Leave a Comment

error: Content is protected !!