ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Suddi Udaya

ಬೆಳ್ತಂಗಡಿ: ಇಲ್ಲಿನ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಸತ್ ಚುನಾವಣೆಯು ಜೂ.12 ರಂದು ನಡೆಯಿತು.

ಚುನಾವಣೆ ಅಧಿಸೂಚನೆಯ ಮೂಲಕ ಪ್ರಕ್ರಿಯೆ ಆರಂಭವಾಗಿ, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ ಹಾಗೂ ಚುನಾವಣಾ ಪ್ರಚಾರ ನಡೆದು, ಚುನಾವಣೆಯ ದಿನ ವಿದ್ಯಾರ್ಥಿಗಳು ಶಿಸ್ತುಬದ್ಧರಾಗಿ, ಸರತಿ ಸಾಲಿನಲ್ಲಿ ಬಂದು, ತಮ್ಮ ಗುರುತು ತಿಳಿಸಿ ಮತ ಚಲಾಯಿಸಿದರು.

ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಇವಿಎಂ ಮಾದರಿಯ ಆ್ಯಪ್ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿದರು. 
 
ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಆಯುಷ್ ಕೆ, ಉಪನಾಯಕನಾಗಿ 9ನೇ ತರಗತಿಯ ಜಯದೀಪ್, ಶಿಕ್ಷಣ ಮಂತ್ರಿಯಾಗಿ 8ನೇ ತರಗತಿಯ ಸುಪ್ರೀತ್, ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಸಮ್ಯಕ್, ಆರೋಗ್ಯ ಮತ್ತು ಶಿಸ್ತು ಮಂತ್ರಿಯಾಗಿ 10ನೇ ತರಗತಿಯ ಸ್ವಿತಾ ಜೈನ್, ಸಾಂಸ್ಕೃತಿಕ ಮಂತ್ರಿಯಾಗಿ 8ನೇ ತರಗತಿಯ ಭೂಮಿಕಾ, ಮಾನವ ಸಂಪನ್ಮೂಲ ಮಂತ್ರಿಯಾಗಿ 9ನೇ ತರಗತಿಯ ಸುವೀನ್ ಆಯ್ಕೆಯಾದರು.

ಚುನಾಯಿತ ವಿದ್ಯಾರ್ಥಿ ಸಂಸತ್ ಸದಸ್ಯರನ್ನು ಎಸ್ ಡಿ ಎಂ ಎಜುಕೇಷನಲ್ ಸೊಸೈಟಿಯ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೀವಂದರ್ ಕುಮಾರ್ ಜೈನ್ ಇವರು ಅಭಿನಂದಿಸಿದರು ಮತ್ತು ಶಾಲೆಯ ಕಾರ್ಯಚಟುವಟಿಕೆ, ಎಸ್ ಎಸ್ ಎಲ್ ಸಿ ಫಲಿತಾಂಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್. ಅವರ ಮಾರ್ಗದರ್ಶನದಲ್ಲಿ, ಶಿಕ್ಷಕಿಯರಾದ ಕಸ್ತೂರಿ,  ಕವನ ಚುನಾವಣಾ ಮುಖ್ಯಸ್ಥರಾಗಿ, ಶಿಕ್ಷಕಿಯರಾದ ಚೇತನಾ, ಮೆನಿತಾ, ಪ್ರೀತಿ, ನಯನ, ಶಿಕ್ಷಕ ಶ್ರೇಯಾಂಸ್ ಜೈನ್ ಚುನಾವಣಾ ಅಧಿಕಾರಿಗಳಾಗಿ, ಶಿಕ್ಷಕರಾದ ಸದಾನಂದ, ಮಂಜುನಾಥ್, ಪ್ರವೀಣ್ ಹಾಗೂ ಮುರಳಿ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದರು.

ಎಲ್ಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದು ಚುನಾವಣಾ ಕಾರ್ಯದಲ್ಲಿ ಸಹಕರಿಸಿದರು.

Leave a Comment

error: Content is protected !!