ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ‘ಮಗುವಿಗೊಂದು ಮರ’ ಕಲ್ಪನೆಯಂತೆ 200 ಗಿಡಗಳ ನಾಟಿ ಕಾರ್ಯಕ್ರಮ

Suddi Udaya

ಪಟ್ರಮೆ: ಭೂಮಂಡಲದಲ್ಲಿ ಕಾಡುಗಳು ನಾಶವಾಗುತ್ತಿದೆ, ಪ್ರಕೃತಿ ವಿಕೋಪಗಳು ಹೆಚ್ಚುತ್ತಿದೆ, ಕಾಲಕ್ಕೆ ಸರಿಯಾಗಿ ಪರಿಸರಕ್ಕೆ ಪೂರಕವಾದ ವ್ಯವಸ್ಥೆಗಳು ಇತ್ತೀಚೆಗೆ ಮಾಯವಾಗುತ್ತಿದೆ ಆ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವದಂತಹ ಕಾರ್ಯಗಳು ಅವಶ್ಯಕ. ಆ ಮೂಲಕ ಜನರಲ್ಲಿ ಅರಿವು ಮೂಡಿಸಿ ಪ್ರಕೃತಿಯ ಬಗ್ಗೆ ಒಲವು ಮೂಡಿಸುವ ಕಾರ್ಯ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ ಎಂದು ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದ ಉಪವಲಯ ಅರಣ್ಯ ಅಧಿಕಾರಿ ಅಶೋಕ್ ಹೇಳಿದರು.

ಅವರು ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಸಾಮಾಜಿಕ ಅರಣ್ಯ ವಲಯ ಬೆಳ್ತಂಗಡಿಯ ಸಹಯೋಗದೊಂದಿಗೆ ಜು.8 ರಂದು ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದೇಶಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಕ್ಕಳ ಮೂಲಕ ಪ್ರಕೃತಿಯನ್ನು ಉಳಿಸುವ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಮಕ್ಕಳು ಮನಸು ಮಾಡಿದರೆ ಶಾಲೆಗಳಲ್ಲಿ ಸುತ್ತಮುತ್ತಲಿನ ಪರಿಸರಗಳಲ್ಲಿ ಮತ್ತು ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ಕೆ ಮನಸ್ಸು ಮಾಡುತ್ತಾರೆ. ಆ ಮೂಲಕ ಸಮಾಜದಲ್ಲಿ ಪರಿಸರ ಪೂರಕ ವಾತಾವರಣ ಸೃಷ್ಟಿಯಾದಂತಾಗುತ್ತದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಸಮಿತಿ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಮಾತನಾಡಿ, ಅನಾದಿಕಾಲದಿಂದಲೂ ನಮ್ಮ ಹಿರಿಯರು ಪರಿಸರದ ಜೊತೆ ಜೊತೆಗೆ ಜೀವಿಸುತ್ತಿದ್ದರು. ಕಾರ್ಯಕ್ರಮಗಳನ್ನು ನಡೆಸುವಾಗಲು ಪರಿಸರವನ್ನು ಪೂಜಿಸಿ ನಂತರ ಮುಂದುವರೆಯುತ್ತಿದ್ದರು. ತಾಯಿ ಸ್ವರೂಪಿಯಾದ ನಮ್ಮ ಪ್ರಕೃತಿ ನಮ್ಮನ್ನು ಕೂಡ ಪೊರೆಯುತ್ತಿದ್ದಳು. ಆದರೆ ಈಗ ನಮ್ಮ ಸ್ವಾರ್ಥಕ್ಕಾಗಿ ಪರಿಸರವನ್ನ ನಾಶಗೊಳಿಸಲು ಹೊರಟಿದ್ದೇವೆ, ಪರಿಣಾಮ ನಮ್ಮ ನಾಶವನ್ನು ನಾವೇ ಕಂಡುಕೊಂಡಂತಾಗಿದೆ. ನೆಮ್ಮದಿಯ ಬದುಕಿಗಾಗಿ ಇಂದು ಪರಿಸರವನ್ನು ನಾವು ರಕ್ಷಿಸುವ ದೊಡ್ಡ ಜವಾಬ್ದಾರಿಯನ್ನು ಹೊರಬೇಕಿದೆ. ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಶ್ರೀರಾಮ ಶಾಲೆಯಲ್ಲಿ ಪರಿಸರದೊಂದಿಗೆ ನಮ್ಮ ಬದುಕು ಎನ್ನುವ ಪಾಠವನ್ನು ಹೇಳಿಕೊಡುವ ಕಾರ್ಯ ನಡೆಯುತ್ತಿದೆ ಎಂದರು.

ಈ ಸಂದರ್ಭ ಅರಣ್ಯ ಅಧಿಕಾರಿಗಳು ಇಲಾಖೆಯಿಂದ ಗಿಡ ನೀಡಲು ಸಿಗುವಂತಹ ಪ್ರೋತ್ಸಾಹ ಧನಗಳ ಬಗ್ಗೆ, ಅದನ್ನು ಪಡೆದುಕೊಳ್ಳುವ ರೀತಿಗಳ ಬಗ್ಗೆ, ಮಕ್ಕಳಿಗೆ ಮಾಹಿತಿ ನೀಡಿದರು.ಶ್ರೀ ಕ್ಷೇತ್ರ ಸೌತಡ್ಕದ ನೈಮಿಷ ಹೌಸ್ ಆಫ್ ಪ್ರೈಸಸ್ ಮಾಲಕ ಬಾಲಕೃಷ್ಣ ನೈಮಿಷ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಕೊಕ್ಕಡ ಮತ್ತು ನಿಡ್ಲೆ ವಲಯದ ಅರಣ್ಯ ಗಸ್ತು ಪಾಲಕ ಸುನಿಲ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕರು ಸಹಕರಿಸಿದರು. ಶಾಲಾ ಆವರಣದಲ್ಲಿ ಮಾವು, ಹಲಸು, ರೆಂಜೆ, ಪುನರ್ಪುಳಿ, ಹೊಳೆ ದಾಸವಾಳ, ಸಂಪಿಗೆ ಜಾತಿಯ ಗಿಡಗಳನ್ನು ಅರಣ್ಯ ಇಲಾಖೆಯ ವತಿಯಿಂದ ನೆಡಲಾಯಿತು. ಮಗುವಿಗೊಂದು ಮರ ಕಲ್ಪನೆಯಂತೆ ಶಾಲೆಯಲ್ಲಿ 200 ಸಸಿಗಳನ್ನು ನೆಡಲಾಯಿತು. ಇದರ ಪೋಷಣೆಯ ಕಾರ್ಯಕ್ಕೆ ವಿದ್ಯಾರ್ಥಿಗಳ ತಂಡವನ್ನು ರಚಿಸಿ, ಪ್ರತಿ ತಿಂಗಳು ಅರಣ್ಯ ಇಲಾಖೆಯಿಂದ ಅಧಿಕಾರಿಗಳು ಶಾಲೆಗೆ ಭೇಟಿ ನೀಡುವ ಸಂದರ್ಭ ವರದಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Leave a Comment

error: Content is protected !!