ಮಾಜಿ ಶಾಸಕ ದಿ. ಕೆ. ವಸಂತ ಬಂಗೇರ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ ಶಾಸಕ ಹರೀಶ್‌ ಪೂಂಜ

Suddi Udaya

ಬೆಳ್ತಂಗಡಿ : ಹಿರಿಯ ರಾಜಕಾರಣಿ, ಮಾಜಿ ಶಾಸಕ ದಿವಂಗತ ಕೆ. ವಸಂತ ಬಂಗೇರ ರವರಿಗೆ ಶಾಸಕ ಹರೀಶ್‌ ಪೂಂಜ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ, ಈ ಮನೆಯ ಮುಖ್ಯ ಸಚೇತರಾಗಿ ಕೆಲಸವನ್ನು ನಿರ್ವಹಿಸಿದ ಕೆ. ವಸಂತ ಬಂಗೇರರವರು ದ.ಕ. ಜಿಲ್ಲೆಯಲ್ಲಿ ಹಿಂದುಳಿದ ಸಮಾಜಕ್ಕೆ ಮತ್ತು ಇಡೀ ಜಿಲ್ಲೆಗೆ ಆದರ್ಶವಾದಂತಹ ನಾಯಕತ್ವವನ್ನು ನೀಡಿರುವಂತಹ ಹಿರಿಯ ರಾಜಕಾರಣಿ.

1983ರಲ್ಲಿ ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಬೆಳ್ತಂಗಡಿ ವಿಧಾನಸಭೆಯನ್ನು ಪ್ರವೇಶವನ್ನು ಮಾಡಿ. ಆ ಸಂದರ್ಭದಲ್ಲಿ ಬಿಜೆಪಿ ಯ 18 ಜನ ಶಾಸಕರುಗಳ ಪೈಕಿ ಅವರು ಒಬ್ಬರಾಗಿದ್ದರು. ಎರಡನೇ ಅವಧಿಗೆ ಎರಡೇ ಜನ ಬಿಜೆಪಿ ಯ ಶಾಸಕರು ಈ ಸದನದಲ್ಲಿ ಇದ್ದರು. ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ರವರು ಮತ್ತು ವಸಂತ ಬಂಗೇರರು ಬಿಜೆಪಿ ಯನ್ನು ಪ್ರತಿನಿಧಿಸಿದ್ರು. ಒಂದು ಕ್ಷೇತ್ರದಲ್ಲಿ ಮೂರು ಪಕ್ಷದಿಂದಲೂ ಶಾಸಕರಾದ ಕೀರ್ತಿ ವಸಂತ ಬಂಗೇರರಿಗೆ ಸಲ್ಲುತ್ತದೆ. ಬಿಜೆಪಿ ಯ ಶಾಸಕರಾಗಿ, ಜನತಾ ದಳದಲ್ಲಿ ಶಾಸಕರಾಗಿ, ಕಾಂಗ್ರೆಸ್ ನಲ್ಲಿ ಎರಡು ಬಾರಿ ಶಾಸಕರಾಗಿ, ಸುಮಾರು 5 ಬಾರಿ ಶಾಸಕರಾಗಿ ಈ ಮನೆಯನ್ನು ಪ್ರವೇಶ ಮಾಡಿರುವಂತಹ ವಸಂತ ಬಂಗೇರರು, ದ.ಕ. ಜಿಲ್ಲೆ ಮತ್ತು ಮಲೆನಾಡಿನಲ್ಲಿ 80 ದಶಕದಲ್ಲಿ ಮಂಗನ ಕಾಯಿಲೆ ಬಂದಂತಹ ಸಂದರ್ಭದಲ್ಲಿ ಅದರಲ್ಲಿ ವಿರುದ್ದ ಹೋರಾಟವನ್ನು ವಿಧಾನಸಭೆಯ ಒಳಗೆ ಮತ್ತು ವಿಧಾನಸಭೆಯ ಹೊರಗಡೆ ಮಾಡಿ ಮಂಗನ ಕಾಯಿಲೆಯ ನಿರ್ಮೂಲನೆಯ ದೃಷ್ಟಿಯಿಂದ ಸರ್ಕಾರ ಅದಕ್ಕೆ ಪ್ರತ್ಯೇಕ ಆಸ್ಪತ್ರೆಯನ್ನು ಬೆಳ್ತಂಗಡಿಯಲ್ಲಿ ಪ್ರಾರಂಭ ಮಾಡಬೇಕು ಎಂಬ ಪಟ್ಟನ್ನು ಹಿಡಿದು, ಉಜಿರೆಯಲ್ಲಿ ವಿಶೇಷವಾದಂತಹ ಶಾಶ್ವತವಾಗಿರತಕ್ಕಂತಹ ಮಂಗನ ಕಾಯಿಲೆಯ ಚಿಕಿತ್ಸೆಗೆ ಬೇಕಾದ ಆಸ್ಪತ್ರೆಯನ್ನು ನಿರ್ಮಿಸುವಲ್ಲಿ ಸಫಲತೆಯನ್ನು ಪಡೆದುಕೊಂಡವರು.

ತುಳುವಿನ ಬಗ್ಗೆ ಅತೀವ ವಾದಂತಹ ಪ್ರೀತಿ ಮತ್ತು ಅದರ ಬಗ್ಗೆ ಪ್ರೋತ್ಸಾಹವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ ಸಂದರ್ಭದಲ್ಲಿ, ತುಳುವಿನಲ್ಲಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದಂತಹ ಕೀರ್ತಿ ವಸಂತ ಬಂಗೇರರಿಗೆ ಸಲ್ಲುತ್ತದೆ. ನೇರ ನಿಷ್ಟುರವಾದ ನಡತೆಯ ಮೂಲಕ, ಅಧಿಕಾರಿಗಳು ಇರಬಹುದು ಅಥವಾ ಸ್ವ ಪಕ್ಷೀಯ ರಾಜಕಾರಣದ ಪ್ರಮುಖರಿಗೂ ತನ್ನ ನೇರ ನುಡಿಯ ಮೂಲಕ ಸಮಾಜದ ಸಮಸ್ಯೆಗೆ ಸ್ಪಂದನೆಯನ್ನು ಕೊಡುವಂತಹ ವ್ಯಕ್ತಿತ್ವವನ್ನು ವಸಂತ ಬಂಗೇರರು ಅಳವಡಿಸಿಕೊಂಡಿದ್ದರು.

ವಸಂತ ಬಂಗೇರರು ಕೇವಲ ರಾಜಕಾರಣ ಮಾತ್ರವಲ್ಲ, ಚಲನಚಿತ್ರದ ವ್ಯವಸ್ಥೆಯಲ್ಲೂ, ಸಂಗಮ ಸಾಕ್ಷಿ ಎಂಬ ತುಳು ಚಲನಚಿತ್ರಕ್ಕೆ ನಿರ್ಮಾಪಕರಾಗಿಯೂ ನಮ್ಮ ಜಿಲ್ಲೆಯ ತುಳುವಿಗೆ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಮಾಡಿದ್ದಾರೆ.

ಬಡ ಮಕ್ಕಳಿಗೆ ಶೈಕ್ಷಣಿಕವಾದಂತಹ ಶಕ್ತಿ ತುಂಬಬೇಕು ಎನ್ನುವ ಕಾರಣಕ್ಕೆ, ಗುರುದೇವ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಶಕ್ತಿಯನ್ನು ತುಂಬಿದ್ದಾರೆ.
ಬೆಳ್ತಂಗಡಿಯಲ್ಲಿರುವಂತಹ ಯುವಕರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಬೇಕು ಎನ್ನುವ ಕಾರಣಕ್ಕೆ ಗುರುದೇವ ವಿವಿದ್ದೋದೇಶ ಸಹಕಾರಿ ಸಂಘ ಪ್ರಾರಂಭ ಮಾಡಿ, ನೂರಾರು ಯುವಕರಿಗೆ ಉದ್ಯೋಗವನ್ನು ಸೃಷ್ಟಿ ಮಾಡಿ, ಆರ್ಥಿಕವಾಗಿರತಕ್ಕಂತಹ ಶಕ್ತಿಗೆ ಒಂದು ಸಂಸ್ಥೆಯನ್ನು ಕಟ್ಟಿರುವಂತವರು ಬಂಗೇರರು.

ಇಡೀ ಜಿಲ್ಲೆಗೆ ಒಳ್ಳೆಯ ರೀತಿಯಲ್ಲಿ ನಾಯಕತ್ವವನ್ನು ಕೊಟ್ಟಿರುವಂತವರು ವಸಂತ ಬಂಗೇರರು. ಅವರು ನಮ್ಮನ್ನು ಅಗಲಿರುವಂತಹದ್ದು ತಾಲೂಕು, ಜಿಲ್ಲೆಯ ಜನರಿಗೆ ಅತೀವ ದುಃಖ ಆಗಿದೆ. ಅವರ ಕುಟುಂಬದವರಿಗೆ ದುಃಖ ವನ್ನು ಭರಿಸುವಂತಹ ಶಕ್ತಿ ಪರಮಾತ್ಮ ಕರುಣಿಸಲಿ ಎಂದು ಸಂತಾಪ ಸೂಚಿಸಿದರು.

Leave a Comment

error: Content is protected !!