ಧರ್ಮಸ್ಥಳ: ಭಾರತೀಯ ಪರಂಪರೆಯ ಮೌಲ್ಯ ಆಧ್ಯಾತ್ಮಿಕ ಜೀವನದ ಮೇಲೆ ನಿಂತಿದೆ. ಹಣ, ಅಂತಸ್ತು, ಸಂಪತ್ತು ಇದರಿಂದ ಕ್ಷಣಿಕ ಸುಖ ಸಿಗಬಹುದು. ಆದರೆ ಮಾನವೀಯ ಮೌಲ್ಯಗಳ ವರ್ದನೆಯಾಗುವುದಿಲ್ಲ. ಆಧ್ಯಾತ್ಮಿಕ, ಧಾರ್ಮಿಕ ಪರಿವರ್ತನೆಯ ಉದ್ದೇಶವೇ ಚಾತುರ್ಮಾಸ್ಯ ವೃತ ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಅವರು ಜು.16 ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾತುರ್ಮಾಸ್ಯ ವ್ರತಾಚಾರಣೆ ಕ್ಷೇತ್ರದ ಶಾಖಾ ಮಠ ಭಟ್ಕಳದ ಕರಿಕಲ್ ನಲ್ಲಿ ಜು. 21 ರಿಂದ ಆ. 30ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.
ಕಳೆದ 4ವರ್ಷದಲ್ಲಿ ಕ್ಷೇತ್ರದ ಮಠದಲ್ಲಿ ಚಾತುರ್ಮಾಸ್ಯ ವೃತಾಚರಣೆ ಕೈಗೊಂಡಿದ್ದು, ಈ ಬಾರಿ ೮೦೦ ವರ್ಷಗಳ ಇತಿಹಾಸವಿರುವ ಸಮುದ್ರ ಕಿನಾರೆಯ ಭಟ್ಕಳ ಕರಿಕಲ್ ಶಾಖಾ ಮಠದಲ್ಲಿ ನಾಮಧಾರಿ ಸಮಾಜ ಹಾಗೂ ಇತರ ಸಮಾಜದ ಶಿಷ್ಯವರ್ಗದ ಮೂಲಕ ಚಾತುರ್ಮಾಸ್ಯ ವೃತಾಚರಣೆ ಕೈಗೊಳ್ಳಲಿದ್ದೇನೆ ಎಂದರು.
ನಿವೃತ್ತ ಎಸ್.ಪಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಪೀತಾಂಬರ ಹೇರಾಜೆ ಮಾಹಿತಿ ನೀಡಿ, ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ್ ಎಸ್. ವೈದ್ಯ ಉದ್ಘಾಟನೆ ಮಾಡಲಿದ್ದು, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದರುಗಳಾದ ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್ಸಿ ಹರಿಪ್ರಸಾದ್, ಶಾಸಕರುಗಳಾದ ವಿ. ಸುನಿಲ್ ಕುಮಾರ್ ಕಾರ್ಕಳ, ಬೇಲೂರು ಗೋಪಾಲಕೃಷ್ಣ, ಭೀಮಣ್ಣ ಸಿರ್ಸಿ, ಹರೀಶ್ ಪೂಂಜ ಬೆಳ್ತಂಗಡಿ, ದಿನೇಶ್ ಶೆಟ್ಟಿ ಕುಮಟಾ, ಶಿವರಾಮ್ ಹೆಬ್ಬಾರ್ ಯಲ್ಲಾಪುರ, ಸತೀಶ್ ಸೈಲ್ ಕಾರವಾರ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಶಿವಾನಂದ ನಾಯ್ಕ,, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಭಟ್ಕಳದ ಮಾಜಿ ಶಾಸಕರುಗಳಾದ ಸುನಿಲ್ ನಾಯ್ಕ, ಜೆ. ಡಿ. ನಾಯ್ಕ ಮೊದಲಾದವವರು ಭಾಗವಹಿಸಲಿದ್ದಾರೆ ಎಂದರು.
ಶ್ರೀರಾಮ ಸೇವಾ ಸಮಿತಿ ಸಂಚಾಲಕ ಜಯಂತ್ ಕೋಟ್ಯಾನ್ ಮಾತನಾಡಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆ ಈ ಬಾರಿ ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ನಡೆಯಲಿದ್ದು ಶಾಸಕ ಹರೀಶ್ ಪೂಂಜರವರ ಮುಂದಾಳತ್ವದಲ್ಲಿ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಿಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಜೇಶ್ ಪೂಜಾರಿ ಮೂಡುಕೋಡಿ, ಪುರುಷೋತ್ತಮ ಡಿ, ದಯಾನಂದ ಬೆಳಾಲು, ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು:
ಜುಲೈ ೨೧ ರಿಂದ ಆಗಷ್ಟ್ ೩೦ ರವರೆಗೆ ಪ್ರತಿದಿನ ಸಂಜೆ ಗಂಟೆ ೬ ರಿಂದ ೧೦ ರವರೆಗೆ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ದೇವಿ ಮಹಾತ್ಮೆ ಯಕ್ಷಗಾನ, ಸಂಪೂರ್ಣ ರಾಮಾಯಣ ಯಕ್ಷಗಾನ, ಶ್ರೀಮದ್ಭಾಗವತ ಸಪ್ತಾಹ, ಅಭಿಮನ್ಯು ಕಾಳಗ, ಶಿವಧೂತ ಗುಳಿಗ, ರಾಮಾಂಜನೇಯ, ಮಾನಿಷಾದ ಯಕ್ಷಗಾನ, ಮಾಗಧ ವಧೆ ಯಕ್ಷಗಾನ, ವಜ್ರದುಂಬಿ ಯಕ್ಷಗಾನ, ಭಕ್ತಿಗಾನ ಯಕ್ಷನೃತ್ಯ, ಅಮರ ಶಿಲ್ಪಿ ವೀರ ಶಂಭುಕಲ್ಕುಡ ಗೀತಾನಾಟಕ, ಹರಿಭಕ್ತ ಚಂದ್ರಹಾಸ ಯಕ್ಷಗಾನ, ದಕ್ಷಯಜ್ಞ ಯಕ್ಷಗಾನ, ತಾಯಿಯ ಹಾಲು ವಿಷವಾಯ್ತು, ಧರ್ಮಾಂಗದ ದಿಗ್ವಿಜಯ ಯಕ್ಷಗಾನ, ವೀರಮಣಿ ಕಾಳಗ ಯಕ್ಷಗಾನ, ನಳದಮಯಂತಿ ಯಕ್ಷಗಾನ, ಜಾಂಬವತಿ ಕಲ್ಯಾಣ-ಚೂಡಾಮಣಿ ಯಕ್ಷಗಾನ, ಕರ್ಣಪರ್ವ ಯಕ್ಷಗಾನ, ಭೀಷ್ಮಪರ್ವ ಯಕ್ಷಗಾನ, ಸುಧನ್ವ ಮೋಕ್ಷ ಯಕ್ಷಗಾನ, ಪಾಪಣ್ಣ ವಿಜಯ ಗುಣಸುಂದರಿ ಯಕ್ಷಗಾನ, ಸುಗಮ ಸಂಗೀತ ಹಾಗೂ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಲಿದೆ.
ಜು.೨೧ ಗುರುಪೂರ್ಣಿಮೆಯಂದು ಬೆಳಿಗ್ಗೆ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ವೈದಿಕ ವಿಧಿ ವಿಧಾನ, ಬಳಿಕ ಶ್ರೀ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಶ್ರೀಗಳ ಪುರಪ್ರವೇಶದ ವೈಭವದ ಮೆರವಣಿಗೆ, ಕರಿಕಲ್ ಮಠದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಶ್ರೀಗಳ ಗುರುಪೂರ್ಣಿಮೆಯ ವ್ಯಾಸಪೀಠ ಪೀಠಾರೋಹಣ, ಗುರು ಪಾದುಕ ಪೂಜೆ, ಶ್ರೀಗಳ ಆಶೀರ್ವಚನ ನಡೆಯಲಿದೆ. ಚಾತುರ್ಮಾಸ್ಯ ಪರ್ವ ಕಾಲದಲ್ಲಿ ಪ್ರತಿದಿನ ಭಜನೆ, ಪಾದುಕ ಪೂಜೆ, ಸಂಜೆ ೬-೦೦ರಿಂದ ೧೦-೦೦ರ ತನಕ ಭಕ್ತಿಪ್ರಧಾನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿಯಂದು ಶ್ರೀಗಳು ಮೌನ ವೃತದಲ್ಲಿರುವುದರಿಂದ ಆ ದಿನಗಳಲ್ಲಿ ಸೂರ್ಯಾಸ್ತದ ಬಳಿಕ ಗುರುಗಳು ದರ್ಶನಕ್ಕೆ ಇರುತ್ತಾರೆ. ಸೆ.೩ರಂದು ಶ್ರೀ ಗುರುದೇವ ಮಠದಲ್ಲಿ ಶ್ರೀಗಳ ಪಟ್ಟಾಭಿಷೇಕ ವರ್ದಂತಿ ನಡೆಯಲಿದೆ.