30.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಜು.31 ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಸೇವಾ ನಿವೃತ್ತಿ: ನಿವೃತ್ತಿಯಂದು ಶಿಷ್ಯರಿಂದ ಅಕ್ಷರದ ಗುರು ಕಾಣಿಕೆ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಜು.31 ರಂದು ನಿವೃತ್ತಿಗೊಳ್ಳಲಿದ್ದಾರೆ. 2001 ರಂದು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯರಾಗಿ ಆಗಮಿಸಿದ ಶ್ರೀಯುತರು 23 ವರ್ಷಗಳ ಶಿಕ್ಷಕ ವೃತ್ತಿಯ ಸಾರ್ಥಕ ಸೇವೆಯ ಕೊನೆಯ ದಿನ. ಅಂದರೆ ಜು.31 ರಂದು ಶಾಲೆಯಲ್ಲಿ ತಾವೇ ರಚಿಸಿರುವ ಎರಡು ಕೃತಿಗಳು ಲೋಕಾರ್ಪಣೆಗೊಳ್ಳಲಿದ್ದು ಈ ಕೃತಿಗಳನ್ನು ಹಳೆ ವಿದ್ಯಾರ್ಥಿಗಳ ಕೊಡುಗೆಯಾಗಿ ಅವರ ಪ್ರಾಯೋಜಕತ್ವದಲ್ಲಿ ಪ್ರಕಟವಾಗಿ ಆ ದಿನ ಸಮರ್ಪಣೆಯಾಗಲಿದೆ.

ಸುಳ್ಯ ತಾಲೂಕಿನ ಚೊಕ್ಕಾಡಿಯಿಂದ ಆಗಮಿಸಿದ ಶ್ರೀಯುತರು ಸಾಹಿತ್ಯ, ಶಿಕ್ಷಣ, ಯಕ್ಷಗಾನ, ಗಮಕ ಹೀಗೆ ವೈವಿಧ್ಯಮಯ ಆಸಕ್ತಿಯೊಂದಿಗೆ, ಕಲಾವಿದರಾಗಿ ತೊಡಗಿಕೊಂಡವರು. ಶಾಲೆಯಲ್ಲಿ ಹಲವಾರು ಶೈಕ್ಷಣಿಕ ಚಟುವಟಿಕೆಗಳಿಂದ ಊರಿನವರ, ಮಕ್ಕಳ ಮನಗೆದ್ದವರು. ಉತ್ತಮ ಶಿಕ್ಷಕ ಪ್ರಶಸ್ತಿಯ ಪುರಸ್ಕೃತರು. ಶಾಲೆಯತ್ತ ಸಮುದಾಯವನ್ನು ಆಕರ್ಷಿಸಿದವರು.

ಬರವಣಿಗೆಯ ಮೂಲಕ ಶೈಕ್ಷಣಿಕ ವಿಚಾರಗಳನ್ನು ಜನಕ್ಕೆ ತಲಪಿಸುತ್ತಾ ಶಿಕ್ಷಕ ವೃತ್ತಿಗೆ ಹೊಸ ಆಯಾಮ ನೀಡಿದ ಇವರು ಈಗಾಗಲೆ ಏಳು ಕೃತಿಗಳನ್ನು ಪ್ರಕಟಿಸಿರುತ್ತಾರೆ. ವಿಶೇಷವಾಗಿ ಹತ್ತುಹಲವು ಸಂಘಟನೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಂಡು ನಿರಂತರ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿದವರು, ನೇತೃತ್ವ ವಹಿಸಿದವರು. ಇಂತಹ ಅಪೂರ್ವ ಶಿಕ್ಷಕರಾದ ಇವರ ನಿವೃತ್ತಿಯ ದಿನದಂದು ಇವರೇ ಬರೆದಿರುವ ಎರಡು ಶೈಕ್ಷಣಿಕ ಕೃತಿಗಳಾದ “ಶಿಕ್ಷಣ ನೋಟ” ಮತ್ತು “ಶಿಖರ” ದ ಸಂಪೂರ್ಣ ವೆಚ್ಚವನ್ನು ಶಿಷ್ಯರು ಭರಿಸಿ ಕಾಣಿಕೆಯಾಗಿ ನೀಡಲಿದ್ದಾರೆ.

ಇದೊಂದು ಮಾದರಿ ಶಿಕ್ಷಕರ ಮಾದರಿ ಕೊಡುಗೆಯೂ ಆಗಲಿದೆ. ಓರ್ವ ಶಿಕ್ಷಕ ಸೇವೆಯ ಪ್ರತೀಕವಾಗಿ ಅನ್ನ ನೀಡಿದ ಶಾಲೆಗೆ, ಸೇವೆಗೆ ಅವಕಾಶ ಒದಗಿಸಿದ ಊರಿಗೆ ಇದಕ್ಕಿಂತ ದೊಡ್ಡ, ಮೌಲಿಕ ಕೊಡುಗೆಯನ್ನು ನೀಡಲು ಸಾಧ್ಯವಿಲ್ಲ. ಇಂತಹ ಅಕ್ಷರದ ಸೇವೆಯನ್ನು ಮಾಡಿದ ಗುರುವಿಗೆ ಅಕ್ಷರದ ಮೂಲಕವೇ ನೀಡುತ್ತಿರುವ ಕಾಣಿಕೆಗಿಂತ ದೊಡ್ಡ ಕಾಣಿಕೆ ಬೇರೆ ಇಲ್ಲ.

ಶ್ರೀಯುತರ ನಿವೃತ್ತಿಯಂದು ನಡೆಯುವ ಸಮಾರಂಭದಲ್ಲಿ ಸಂಸ್ಥೆಯ ಸಂಚಾಲಕರು, ಕಾರ್ಯದರ್ಶಿಗಳೂ ಆದ ಡಾ. ಎಸ್ ಸತೀಶ್ಚಂದ್ರ ರವರು ಕೃತಿ ಬಿಡುಗಡೆಗೊಳಿಸಲಿದ್ದು, ಶಿಕ್ಷಕ, ಸಾಹಿತಿಗಳಾದ ಅರವಿಂದ ಚೊಕ್ಕಾಡಿಯವರು ಕೃತಿ ಪರಿಚಯ ಮಾಡಲಿದ್ದಾರೆ. ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಬೆಳಾಲು ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ, ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ, ಬಿ ಇ ಒ ರವರಾದ ಶ್ರೀಮತಿ ತಾರಾಕೇಸರಿಯವರು ಆಗಮಿಸಲಿದ್ದಾರೆ.

ಗೌರವ ಉಪಸ್ಥಿತರಾಗಿ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಯದುಪತಿ ಗೌಡ, ಶಿಕ್ಷಕ ಸಂಘಟನೆಗಳ ಅಧ್ಯಕ್ಷರಾದ ವೆಂಕಟೇಶ್ ತುಳಪುಳೆ, ರಾಧಾಕೃಷ್ಣ ಕೊಯ್ಯೂರುರವರು ಜೊತೆಗಿರುತ್ತಾರೆ.

Related posts

ಶಿಲಾ೯ಲು : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Suddi Udaya

ಸುಬ್ರಹ್ಮಣ್ಯದಲ್ಲಿದ್ದ ನಿರ್ಗತಿಕ ಬೆಂಗಳೂರಿನ ಜನ ಸ್ನೇಹಿ ಕೇಂದ್ರಕ್ಕೆ

Suddi Udaya

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾಗಿ ಸೌಮ್ಯ ಲಾಯಿಲ

Suddi Udaya

ರಮ್ಜಾನ್ ಹಬ್ಬದ ಪ್ರಯುಕ್ತ ವೇಣೂರು ಆರಕ್ಷಕ ಠಾಣೆಯಲ್ಲಿ ಶಾಂತಿ ಸಭೆ

Suddi Udaya

86 ಸೀಮ್ ಕಾರ್ಡ್ ಸಹಿತ ಬೆಳ್ತಂಗಡಿ ಯ ಇಬ್ಬರನ್ನು ಬಂಧಿಸಿದ ಮಂಗಳೂರು ಪೊಲೀಸರು: ವಿದೇಶ ದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪ

Suddi Udaya

ಮೇಲಂತಬೆಟ್ಟು: ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya
error: Content is protected !!