ಕೆಎಸ್ಆರ್ ಟಿಸಿ ಮಜ್ದೂರು ಸಂಘದ ವಾರ್ಷಿಕ ಸಭೆ

Suddi Udaya

ಬೆಳ್ತಂಗಡಿ :ಕೆಎಸ್ಆರ್ ಟಿಸಿ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕ ಬಂಧುಗಳಿಗೆ ಅವರ ಉದ್ಯೋಗ ಅಭದ್ರತೆ, ಸರಕಾರದಿಂದ ಸಿಗುವ ಸೌಲಭ್ಯಗಳಲ್ಲಿ ತಾರತಮ್ಯ, ಇನ್ನಿತರ ಸಮಸ್ಯೆಗಳ ಕುರಿತು ಸರಕಾರದ ಕಣ್ಣು ತೆರಿಸಿ ನಮ್ಮ ಕಾರ್ಮಿಕರ ಹಿತದ್ರಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್ಆರ್ ಟಿಸಿ ನಿಗಮ ಮತ್ತು ಸರಕಾರದ ವತಿಯಿಂದ ಎಲ್ಲಾ ನೆರವು, ಸೌಲಭ್ಯ, ದೊರಕಿಸಲು ಪ್ರಯತ್ನಿಸುವುದಾಗಿ ಮಾಜಿ ಶಾಸಕರಾದ ಸಂಜೀವ ಮಠಂದೂರು ಹೇಳಿದರು.

ಅವರು ಜು.25 ರಂದು ಪುತ್ತೂರಿನ ಸೈನಿಕರ ಸಭಾಂಗಣದಲ್ಲಿ ಸಂಘದ 2023-24ನೇ ಸಾಲಿನ ಮಹಾಸಭೆಯನ್ನು ಉದ್ಘಾಟಿಸಿ ಮಾತಾಡಿದರು.

ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಮಾತನಾಡಿ ಕೆಎಸ್ಆರ್ ಟಿಸಿ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕ ವರ್ಗದವರ ನೋವುಗಳ ಅರಿವು ಸಂಘಕ್ಕೆ ಸದಾ ಇದೆ. ಇದರಲ್ಲಿ ದುಡಿಯುವ ಬಂಧುಗಳಿಗೆ ನಿಗಮದ ಕಡೆಯಿಂದ ಆಗುವ ಉದ್ಯೋಗದ ಅಭದ್ರತೆ, ಸರಕಾರದಿಂದ ಸಿಗುವ ಸೌಲಭ್ಯಗಳಲ್ಲಿ ತಾರತಮ್ಯ, ಮಿತಿ ಮೀರಿದ ಕೆಲಸದ ನಿರ್ವಹಣೆ, ಓವರ್ ಟೈಮ್ ಕೆಲಸಕ್ಕೆ ಸಿಗುವ ಹೆಚ್ಚುವರಿ ಸಂಬಳದಲ್ಲಿ ಹೆಚ್ಚಲಾಗದೆ ಇರುವುದು, ಸದರಿ ಸಂಬಳದ ಏರಿಕೆಯಾಗದೆ ಇರುವುದು, ದಿನದ ಅಂತಿಮ ಬಸ್ ನಿಲುಗಡೆಯ ಸ್ಥಳದಲ್ಲಿ ನೌಕರರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯದ ಕೊರತೆ ಇರುವುದು, ಆಕಸ್ಮಿಕ ತೊಂದರೆಗಳು ಆದಾಗ ಅದಕ್ಕೆ ಬೇಕಾದ ಸೌಲಭ್ಯಗಳ ಕೊರತೆ ಇರುವುದು, ಹೊಸ ನೇಮಕಾತಿಯಲ್ಲಿ ವಿಳಂಬ ನೀತಿ ಮಾಡುತ್ತಿರುವುದು ಮುಂತಾದ ವಿಚಾರಗಳಲ್ಲಿ ನಿಗಮವು ಅನುಸರಿಸುತ್ತಿರುವ ಧೋರಣೆಯನ್ನು ಸಂಘವು ಗಂಭೀರವಾಗಿ ಪರಿಗಣಿಸಿದೆ. ನಮ್ಮ ಈ ಬೇಡಿಕೆಗಳನ್ನು ಪಡೆದುಕೊಳ್ಳಲು ನಾವು ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದರು.

ಸಭೆಯಲ್ಲಿ ಬಜರಂಗದಳ ಪ್ರಮುಖರಾದ ಮುರಳಿ ಕೃಷ್ಣ ಹಂಸತಡ್ಕ ರವರು ಕಾರ್ಮಿಕ ಬಂಧುಗಳ ಜೊತೆ ನಮ್ಮ ಸಂಘಟನೆ ಸದಾ ಇರುತ್ತದ ಎಂದು ಹೇಳಿ ಶುಭ ಹಾರೈಸಿದರು.

ಬಿಎಂಎಸ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಬೆಳ್ತಂಗಡಿ, ಪುತ್ತೂರು ರಿಕ್ಷಾ ಯೂನಿಯನ್ ಇದರ ಅಧ್ಯಕ್ಷರಾದ ರಾಜೇಶ್ ಮರೀಲ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾಧ್ಯಕ್ಷರು ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಕೆಎಸ್ಆರ್ ಟಿಸಿ ಪುತ್ತೂರು ವಿಭಾಗದ ಮಾಜ್ದೂರು ಸಂಘದ ನೂತನ ಅಧ್ಯಕ್ಷರಾದ ವಕೀಲರಾದ ಗಿರೀಶ್ ಮಳ್ಳಿ ವಹಿಸಿ ಎಲ್ಲರ ಸಹಕಾರವನ್ನು ಕೋರಿದರು. ಪ್ರಧಾನ ಕಾರ್ಯದರ್ಶಿಯಾದ ರಾಮಕೃಷ್ಣ ಭಟ್ ರವರು ವಾರ್ಷಿಕ ವರದಿಯಾಚಿಸಿ, ನೂತನ ಪ್ರಧಾನ ಕಾರ್ಯದರ್ಶಿಯಾದ ಸಂಜೀವ ಗೌಡ ರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಸಂಘದ ಹಿರಿಯ ಮುಖಂಡ ವೆಂಕಟ್ರಮಣ ಭಟ್ ಸ್ವಾಗತಿಸಿ, ಹಿರಿಯರಾದ ಬಾಲಕೃಷ್ಣ ಡಿ ಪ್ರಸ್ತಾವನೆಗೈದರು , ರಮೇಶ್ ಶೆಟ್ಟಿ ಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಮಹಾಬಲ ರವರು ವಂದಿಸಿದರು.

Leave a Comment

error: Content is protected !!