ಉಜಿರೆ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನದ ಸಂಭ್ರಮ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನದ ಸಂಭ್ರಮ ಇಂದು ಮನೆ ಮಾಡಿತ್ತು. ಶಾಲೆಯು ತೆಂಗಿನ ಗರಿಯಿಂದ ಮಾಡಿದ ವಿವಿಧ ಆಕೃತಿಯಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಶಾಲೆಯ ಒಳಭಾಗಕ್ಕೆ ಹೋದಾಗ ಮೂಲೆ ಮೂಲೆಯಲ್ಲೂ ತುಳುನಾಡುಗೆ ಸಂಬಂಧಪಟ್ಟಂತ ವಿವಿಧ ಭಕ್ಷ ಭೋಜ್ಯ, ಆಟಿಯಲ್ಲಿ ಆಡುವಂತಹ ವಿಶೇಷ ಆಟಗಳು ರಾರಾಜಿಸುತ್ತಿದ್ದವು.

ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ ಇದರ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಮಹಾವೀರ ಜೈನ್ ಅಜಿಲ ಈ ಕಾರ್ಯಕ್ರಮವನ್ನು ಚೆನ್ನೆಮಣೆ ಆಡುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿ ತುಳುನಾಡಿನ ಕಲೆ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಆಹಾರ ಆರೋಗ್ಯ ಆಟಿ ದಿನಗಳಲ್ಲಿ ಹೇಗೆ ಕಾಯ್ದುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತುಳುವಿನಲ್ಲಿ ತಿಳಿಯಪಡಿಸಿದರು.

ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯಂತ ಮುತುವರ್ಜಿಯಿಂದ ಭಾಗವಹಿಸುವ ಸ್ವತಃ ಕಲಾವಿದರು ಹಾಗೂ ಕಲಾ ಪ್ರೋತ್ಸಾಹಕರು ಆಗಿರುವ ಭುಜಬಲಿ ಜೈನ್ ಕಾರ್ಯಕ್ರಮವನ್ನು ವೀಕ್ಷಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳು ವಿಶೇಷ ಕಾಳಜಿ ವಹಿಸಿ ತುಳು ನಾಡಿಗೆ ತುಳುವ ಭಾಷೆಗೆ ಸಂಬಂಧಪಟ್ಟಂತಹ ಹಾಡು ಗಾದೆ ಸಂಧಿ ಪಾಡ್ದನ, ನೃತ್ಯ, ಬಿತ್ತಿ ಪತ್ರಿಕೆ, ಔಷಧೀಯ ಸಸ್ಯಗಳ ಪ್ರದರ್ಶನ ಇತ್ಯಾದಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಆಟಿ ತಿಂಗಳಿನ ತಿನಿಸುಗಳ ಪ್ರದರ್ಶನವನ್ನು ಹಾಗೂ ದೇಸಿ ಆಟಗಳನ್ನು ಸಹ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಜ್ಞಾನವಿಕಾಸ ಯೂಟ್ಯೂಬ್ ಚಾನೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಪೂಜಾ ಪಕಳ ಹಾಗೂ ಸಂದೀಪ್ ಭಾಗವಹಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ನಂತರ ವಿದ್ಯಾರ್ಥಿಗಳು ಕೆಸರಿನಲ್ಲಿ ವಿವಿಧ ನೃತ್ಯ ಪ್ರದರ್ಶಿಸಿದರು. ಅತಿಥಿಗಳು ಮಿಂಚಿಯನ್ನು ಶಾಲಾ ಪರಿಸರ ಸಂಘಕ್ಕೆ ಹಸ್ತಾಂತರಿಸಿದರು. ಒಟ್ಟಾರೆಯಾಗಿ ಶಾಲೆಯು ತುಳುನಾಡಿನ ವರ್ಣನೆಯನ್ನು ಬಿಂಬಿಸುತ್ತಿತ್ತು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾಗಿರುವ ಕುಮಾರಿ ಧನ್ಯ,ಕ್ಷಮಾ, ಶ್ರೇಯಾ ರೈ ಹಾಗೂ ಹಿತ ನಿರ್ವಹಿಸಿದರು. ವಿದ್ಯಾರ್ಥಿಗಳು ತಮ್ಮ ನಾಟಕ ಹಾಗೂ ನೃತ್ಯದ ಮುಖಾಂತರ ಬಂದಂಥ ಅತಿಥಿಗಳನ್ನು ವಿಭಿನ್ನವಾಗಿ ಸ್ವಾಗತಿಸಿದರು. ಶಾಲಾ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ ಇವರ ನೇತೃತ್ವದಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಶಿಕ್ಷಕೇತರ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment

error: Content is protected !!