ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯಕಾರಿಣಿ ಸಭೆ: ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್,ಮಣ್ಣುಗಣಿಗಾರಿಕೆ ನಿಷೇಧ, ರಸ್ತೆ ಕಾಮಗಾರಿಗಳಿಗೆ ಚುರುಕು ಸೇರಿದಂತೆ ಹಲವು ನಿರ್ಣಯ ಅಂಗೀಕಾರ

Suddi Udaya

ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯಕಾರಿಣಿ ಸಭೆಯು ಪಕ್ಷದ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರ ಅಧ್ಯಕ್ಷತೆಯಲ್ಲಿ ಬಿಸಿರೋಡ್ ನ ಪಕ್ಷದ ಕಛೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಈ ಕೆಳಗಿನಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು

ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಮತ್ತು ಸುಸಜ್ಜಿತ ಸರ್ಕಾರಿ ಆಸ್ಫತ್ರೆ ಮಂಜೂರುಗೊಳಿಸುವುದು
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆ ಗಳು ರೋಗಿಗಳಿಂದ ಚಿಕಿತ್ಸೆಗೆ ಬೇಕಾಬಿಟ್ಟಿಯಾಗಿ ಹಣ ಪಡೆಯುತ್ತಿದೆ, ಚಿಕ್ಕ ಪುಟ್ಟ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದರು ಆಸ್ಪತ್ರೆಯಿಂದ ಹೊರ ಬರಬೇಕಾದರೆ ಲಕ್ಷಾಂತರ ರೂಪಾಯಿ ಲೆಕ್ಕದಲ್ಲಿ ಬಿಲ್ಲು ಪಾವತಿಸಬೇಕಾದ ಪರಿಸ್ಥಿತಿ, ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ತಾನು ನಡೆದದ್ದೇ ದಾರಿ, ತಾನು ಹೇಳಿದ್ದೆ ಸರಿ ಎಂಬ ರೀತಿಯಲ್ಲಿ ದುರಹಂಕಾರದಿಂದ ವರ್ತಿಸುತ್ತಿದೆ, ತುರ್ತು ನಿಗಾ ಘಟಕ, ವೆಂಟಿಲೇಟರುಗಳಲ್ಲಿ ದಾಖಲಾಗುವ ರೋಗಿಗಳು ಕೊನೆಗೆ ಮನೆಮಠ ಮಾರಿ ಬೀದಿ ಪಾಲಾಗಬೇಕಾದ ಅವಸ್ಥೆ, ದಿನನಿತ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಒಂದಲ್ಲ ಒಂದು ಪರಿಸ್ಥಿತಿ ಕಾಣಸಿಗುತ್ತದೆ ಇಂತಹ ಘಟನೆಗಳು ನಡೆದಾಗ ಸರಕಾರ ಅಥವಾ ಜಿಲ್ಲಾಡಳಿತ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.ಆದ್ದರಿಂದ ಸರಕಾರ ಕೂಡಲೇ ಖಾಸಗಿ ಆಸ್ಪತ್ರೆಗಳ ಮೇಲಿನ ನಿಯಂತ್ರಣ ಕಾಯ್ದೆ ಯನ್ನು ಯಾವುದೇ ಲಾಬಿಗೆ ಮಣಿಯದೆ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಮತ್ತು ಸುಸಜ್ವಿತ ಸರಕಾರಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಡ ತರಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಪ್ರಭಾವಿಗಳಿಂದ ನಡೆಯುತ್ತಿರುವ ಮಣ್ಣು ಗಣಿಗಾರಿಕೆಯನ್ನು ನಿಷೇದಿಸಬೇಕು
ಇತ್ತೀಚೀನ ವರ್ಷಗಳಲ್ಲಿ ಮಳೆಗಾಲದಲ್ಲಿ ಭೂಕುಸಿತ ನಿರಂತರವಾಗಿ ಸಂಭವಿಸುತ್ತಿದೆ ಇದಕ್ಕೆ ಪ್ರಮುಖ ಕಾರಣ ಮಣ್ಣು ಗಣಿಗಾರಿಕೆ ಮತ್ತು ಅವೈಜ್ಞಾನಿಕ ನಿರ್ಮಾಣ ಕಾಮಗಾರಿಗಳಾಗಿದೆ, ಗುಡ್ಡ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವ ಮಣ್ಣು ಗಣಿಗಾರಿಕೆ ಭವಿಷ್ಯದಲ್ಲಿ ನಾಡಿಗೆ ಮಾರಕವಾಗುವ ಸಾಧ್ಯತೆ ಇದೆ, ಅದೇ ರೀತಿ ಪ್ರಭಾವಿ ಬಿಲ್ಡರ್‌ಗಳು ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡಗಳಿಂದ ಪ್ರಕೃತಿಯು ಸಮತೋಲನ ಕಳೆದುಕೊಂಡು ಪ್ರಕೃತಿ ವಿಕೋಪಗಳು ಸಂಭವಿಸುತ್ತಿದೆ, ಗಣಿಗಾರಿಕೆ ಮತ್ತು ನಿರ್ಮಾಣ ಕಾಮಗಾರಿ ಇದೆ ರೀತಿ ಮುಂದುವರೆದರೆ ಕೇರಳದಂತಹ ಪರಿಸ್ಥಿತಿ ನಮ್ಮ ಕರಾವಳಿ ಜಿಲ್ಲೆಗೂ ಸಂಭವಿಸುವ ಸಾಧ್ಯತೆ ಇದೆ, ಆದ್ದರಿಂದ ಸರಕಾರಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮಂದಗತಿಯ ಕಾಮಗಾರಿಯನ್ನು ಚುರುಕುಗೊಳಿಸುವುದು
ಜಿಲ್ಲೆಯ ಹಲವು ಕಡೆ ನಡೆಯುತ್ತಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ಮಂದಗತಿಯಲ್ಲಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು,ಸಾರ್ವಜನಿಕರು ಪ್ರಯಾಣಿಕರು,ವಾಹನ ಸವಾರರು ಪ್ರತಿನಿತ್ಯ ಕಷ್ಟ ಅನುಭವಿಸುತ್ತಿದ್ದು,ಪುತ್ತೂರು-ಉಪ್ಪಿನಂಗಡಿ,ನಂತೂರು ಕೆ.ಪಿ.ಟಿ ಸೇರಿದಂತೆ ಹಲವು ಕಡೆಗಳಲ್ಲಿ ಇತ್ತೀಚಿಗೆ ಡಾಮರೀಕರಣ ಮಾಡಿದ್ದರು ಒಂದೇ ಮಳೆಗೆ ಹೊಂಡ ಗುಂಡಿಗಳು ಬಿದ್ದಿವೆ,ಇದಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ,ಇದಕ್ಕೆ ಟೆಂಡರ್ ಪಡೆದ ಇಂಜಿನಿಯರ್‌ಗಳನ್ನು ಹೊಣೆ ಮಾಡಿ ಪ್ರಕರಣ ದಾಖಲಿಸಿ ಮುಂದಕ್ಕೆ ಈ ರೀತಿ ಅವೈಜ್ಞಾನಿಕ ಕಾಮಗಾರಿಗಳು ನಡೆಯದಂತೆ ಎಚ್ಚರಿಕೆ ನೀಡಬೇಕು,ಅಗತ್ಯಬಿದ್ದರೆ ಅಂತಹ ಇಂಜಿನಿಯರ್ ಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು,ಹಾಗೂ ಈಗ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ಚುರುಕುಗೊಳಿಸಬೇಕು.ಹಾಗೂ ನಿಂತಿಕಲ್,ಬೆಳ್ಳಾರೆ,ಸುಳ್ಯ ರಸ್ತೆ ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆ, ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹೊಂಡ ಗುಂಡಿಗಳು ಬಿದ್ದು ವಾಹನ ಸವಾರರು ಸಂಚರಿಸಲು ಅಯೋಗ್ಯವಾಗಿರುವುದಲ್ಲದೆ ಅಪಘಾತಗಳು ಹೆಚ್ಚುತ್ತಿರುವುದರಿಂದ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕು,ಅಥವಾ ಕನಿಷ್ಠ ಪ್ಯಾಚ್ ವರ್ಕ್ ಮಾಡಿ ಸಂಚರಿಸಲು ಅನುವು ಮಾಡುವಂತೆ ಸರ್ಕಾರದ ಗಮನಕ್ಕೆ ತರಬೇಕು ಎಂಬುದು ಸೇರಿದಂತೆ ಇನ್ನಿತರ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಆರಂಭದಲ್ಲಿ ವಯನಾಡ್ ದುರಂತದಲ್ಲಿ ಮೃತಪಟ್ಟವರಿಗೆ ಮೌನ ಪ್ರಾರ್ಥನೆಯ ಮೂಲಕ ಸಂತಾಪ ವ್ಯಕ್ತಪಡಿಸಲಾಯಿತು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ತೀರ್ಮಾನಿಸಲಾಯಿತು, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಯುತ್ತಿರುವ ಆಂತರಿಕ ಚುನಾವಣೆಯಲ್ಲಿ ಹೊಸ ಉತ್ಸಾಹಿ ನಾಯಕತ್ವವನ್ನು ಆಯ್ಕೆ ಮಾಡಿ ಪಕ್ಷವನ್ನು ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಸಕ್ರಿಯ ಗೊಳಿಸಲು ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲು ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶ್ರಫ್ ಆಡ್ಡೂರು, ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿಗಳಾದ ಅಕ್ಬರ್ ಬೆಳ್ತಂಗಡಿ, ಸುಹೈಲ್ ಖಾನ್, ಶಾಕಿರ್ ಅಳಕೆ ಮಜಲು, ಜಿಲ್ಲಾ ಸಮಿತಿ ಸದಸ್ಯರು, ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು.

Leave a Comment

error: Content is protected !!