ಲಾಯಿಲ: ಕಾಶಿಬೆಟ್ಟು ಬಳಿ ಇಂಡಸ್ಟ್ರೀಯಲ್ ಎಸ್ಟೇಟ್ ಉದ್ದಿಮೆದಾರರಿಂದ ಪ್ರತಿಭಟನೆಯ ನಾಮಫಲಕ: ಶೀಘ್ರವೇ ಸಮಸ್ಯೆ ಪರಿಹರಿಸದಿದ್ದಲ್ಲಿ ಬಹಿರಂಗ ಪ್ರತಿಭಟನೆ

Suddi Udaya

ಬೆಳ್ತಂಗಡಿ: ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿಯಲ್ಲಿರುವ ಇಂಡಸ್ಟ್ರಿಯಲ್ ಎಸ್ಟೇಟ್ ನ ಉದ್ದಿಮೆದಾರರಿಂದ ಪ್ರತಿಭಟನೆಯ ನಾಮಫಲಕ ಹಾಕಿದ ಘಟನೆ ನಡೆದಿದೆ.

ಕಳೆದ ಕೆಲವು ಸಮಯಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಕಾಶಿಬೆಟ್ಟು ಬಳಿ ಇಂಡಸ್ಟ್ರೀಯಲ್ ಗೆ ಹೋಗುವ ರಸ್ತೆ ಅಗೆದು ಹಾಕಿದ ಪರಿಣಾಮ ಕಾರ್ಯನಿರ್ವಹಿಸುವ ಉದ್ಯಮಗಳಿಗೆ ಬೇಕಾದ ವಸ್ತುಗಳನ್ನು ಹಾಗೂ ಸಿದ್ದಗೊಂಡ ವಸ್ತುಗಳನ್ನು ಸಾಗಿಸಲು ಸಮಸ್ಯೆಗಳು ಆಗುತಿದ್ದು, ಅದಲ್ಲದೇ ಚರಂಡಿ ಮುಚ್ಚಿರುವುದರಿಂದ ಮಳೆ ನೀರಿನಿಂದ ಕೆಲಸ ಮಾಡದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಈಗಾಗಲೇ ಜನಪ್ರತಿನಿದಿಗಳಿಗೆ, ಸ್ಥಳೀಯ ಲಾಯಿಲ ಗ್ರಾಮ ಪಂಚಾಯತ್ ಗೆ ಸಮಸ್ಯೆಯ ಬಗ್ಗೆ ದೂರು ನೀಡಿದರೂ ಯಾರೂ ಕೂಡ ಸ್ಪಂದಿಸದೇ ಉದ್ಯಮ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ಬೇಸತ್ತ ಉದ್ದಿಮೆದಾರರು ಇಂಡಸ್ಟ್ರಿಯಲ್ ಎಸ್ಟೇಟ್ ಬಳಿ ಬಹಿರಂಗ ನೋಟೀಸ್ ಎಂಬ ಎಚ್ಚರಿಕೆಯ ನಾಮಫಲಕವನ್ನು ಹಾಕಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಅಧಿಕಾರಿಗಳೇ, ಜನಪ್ರತಿನಿದಿಗಳೇ, ಇಂಜಿನಿಯರ್ ಗಳೇ ನಮ್ಮ ಕೂಗು ಕೇಳುತ್ತಿಲ್ಲವೇ..?, ಇನ್ನು ಎಷ್ಟು ತಿರುಗಬೇಕು ಯಾರಲ್ಲಿ ಹೇಳಬೇಕು ಗೊತ್ತಿಲ್ಲ ನಮ್ಮ ಕುಟುಂಬಕ್ಕೆ ಅನ್ನ ಕೊಡುವ ದಾರಿಯನ್ನೇ ಮುಚ್ಚಿದ್ದೀರಿ. ನಮ್ಮ ತಾಳ್ಮೆ ಪರೀಕ್ಷೀಸುತಿದ್ದೀರಾ ? ಶೀಘ್ರವೇ ಪರಿಹರಿಸದಿದ್ದಲ್ಲಿ ಬಹಿರಂಗ ಪ್ರತಿಭಟನೆ ಮಾಡುವೆವು ಎಂಬ ಫಲಕ ಹಾಕಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

Leave a Comment

error: Content is protected !!