ಬೆಳ್ತಂಗಡಿ: ಆ.8ರಂದು ನಡೆದ ಶ್ರಮದಾನವು ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬಂತು. ಅಲ್ಲಲ್ಲಿ ಉಂಟಾದ ದೊಡ್ಡ ದೊಡ್ಡ ಗಾತ್ರದ ಗುಂಡಿಗಳನ್ನು ಕಲ್ಲು ಮತ್ತು ಜಲ್ಲಿಗಳನ್ನು ಹಾಕಿ ಮುಚ್ಚಲಾಯಿತು. ತಾತ್ಕಾಲಿಕವಾಗಿ ಸಂಚಾರಕ್ಕೆ ಯೋಗ್ಯವೆನಿಸುವಂತಹ ಕಾಮಗಾರಿ ಮಾಡಿದ್ದು ಇದು ಮುಖ್ಯವಾಗಿ ಶಾಲಾ ಮಕ್ಕಳಿಗೆ ಪ್ರಯೋಜನವಾಗಲೆಂದು ಹಮ್ಮಿಕೊಂಡಿರುವ ಶ್ರಮದಾನವು ಆ ಎಲ್ಲಾ ವಾಹನ ಮಾಲಕರಿಗೆ ಮತ್ತು ಚಾಲಕರಿಗೆ ತಕ್ಕಮಟ್ಟಿಗೆ ನಿಟ್ಟುಸಿರು ಬಿಡುವಂತಾಯಿತು.
ಸುಮಾರು ನೂರಕ್ಕೂ ಮಿಕ್ಕಿ ಯುವಕ ಯುವತಿಯರು ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದು ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಪದಾಧಿಕಾರಿಗಳೊಂದಿಗೆ ಹಾಜರಿದ್ದರು. ಹಿರಿಯ ವರ್ತಕರಾದ ವಿಷ್ಣು ದಾಸ್ ಬಾಳಿಗ ರವರು ಹಾರೆಯೊಂದಿಗೆ ಬಂದು ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಮತ್ತು ರೂಪಾಯಿ ಒಂದು ಸಾವಿರ ವನ್ನು ನೀಡಿ ಒಂದು ಪಿಕ್ ಅಪ್ ಜಲ್ಲಿ ತನ್ನದೆಂದು ತಿಳಿಸಿ ಸಹಕರಿಸಿದರು. ಅದರಂತೆ ಮಡಂತ್ಯಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಪಾತಿಲ ರೂ 500 , ರಾಜಶೇಖರ ಶೆಟ್ಟಿ 500 ವಾಹನ ಮಾಲಕರು ರೂ 100 ರಂತೆ ಇಬ್ಬರು ನೀಡಿ ಸಹಕರಿಸಿದರು.
ಸರಕಾರದಲ್ಲಿ ಹಣದ ಕೊರತೆಯಿರುವುದನ್ನು ಗಮನಿಸಿ ಸಾರ್ವಜನಿಕರಲ್ಲಿ ಒಂದು ರೂಪಾಯಿಯಾದರೂ ನೀಡಿ ಎಂದು ಬಟ್ಟೆ ಹಾಕಿ ಶೇಖರಣೆ ಮಾಡಲಾಯಿತು. ಸಾಂಕೇತಿಕವಾಗಿ ಶೇಖರಣೆಯಾದ ಮೊತ್ತವನ್ನು ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಪಾವತಿಸುವುದಾಗಿ ನಿರ್ಣಯಿಸಲಾಗಿದೆ.ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ಸಾರ್ವಜನಿಕ ಬಂಧುಗಳಿಗೆ ಸಂಘಟನೆಯ ಮುಖ್ಯಸ್ಥರಿಗೆ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸಲಾಯಿತು. ಅದೇ ರೀತಿ ಪುಂಜಾಲಕಟ್ಟೆ ಆರಕ್ಷಕ ಠಾಣೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ, ಉಪಹಾರ ವ್ಯವಸ್ಥೆ ಮಾಡಿದ ಶ್ರೀ ವಿಜಯ ಚಂದ್ರ ಮಾಲಾಡಿಯವರಿಗೆ, ಕೃತಜ್ಞತೆ ಸಲ್ಲಿಸಲಾಯಿತು.













