ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಜಯಾನಂದ ಗೌಡ, ಉಪಾಧ್ಯಕ್ಷರಾಗಿ ಗೌರಿ ಅವಿರೋಧ ಆಯ್ಕೆ

Suddi Udaya

Updated on:

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಆ.28ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ.ಪಂ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್ ಹಾಗೂ ಉಪಾಧ್ಯಕ್ಷರಾಗಿ ಗೌರಿ ಅವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣ ಪಂಚಾಯತದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆಯು ಆ.28ರಂದು ಚುನಾವಣಾಧಿಕಾರಿ ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಅವರ ಉಪಸ್ಥಿತಿಯಲ್ಲಿ ಜರುಗಿತು. ಪಟ್ಟಣ ಪಂಚಾಯತ್

ಎರಡನೇ ಅವಧಿಯ ಅಧ್ಯಕ್ಷ ಗಾದಿ ಸಾಮಾನ್ಯರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿತ್ತು. ಪಂಚಾಯತದಲ್ಲಿ ಒಟ್ಟು 11 ಸದಸ್ಯರಿದ್ದು ಇದರಲ್ಲಿ 7 ಸದಸ್ಯರನ್ನು ಹೊಂದಿರುವ ಬಿಜೆಪಿ ಬಹುಮತವನ್ನು ಪಡೆದುಕೊಂಡಿದೆ. ಕಾಂಗ್ರೆಸ್ 4ಸದಸ್ಯರ ಬಲವನ್ನು ಹೊಂದಿದೆ.

ಬಿಜೆಪಿ ಬಹುಮತ ಹೊಂದಿರುವುದರಿಂದ ಅಧ್ಯಕ್ಷ ಗಾದಿಗೆ ಬಿಜೆಪಿ ಬೆಂಬಲಿತರಾದ ಪ.ಪಂ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್ ಹಾಗೂ ಉಪಾಧ್ಯಕ್ಷೆತೆಗೆ ಬಿಜೆಪಿ ಬೆಂಬಲಿತರಾದ ಗೌರಿ ಅವರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸಿ, ಪ್ರಕ್ರಿಯೆ ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆಗೆ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಜಯಾನಂದ ಗೌಡ ಹಾಗೂ ಉಪಾಧ್ಯಕ್ಷರಾಗಿ ಗೌರಿ ಅವರ ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ರಜನಿ ಕುಡ್ವ ಸದಸ್ಯರಾದ ಶರತ್‌ಕುಮಾರ್ ಶೆಟ್ಟಿ, ಲೋಕೇಶ್ ನಾಯ್ಕ, ಅಂಬರೀಷ್ ಮೊದಲಾದವರು ಉಪಸ್ಥಿತರಿದ್ದರು. ಪ.ಪಂ ಮುಖ್ಯಾಧಿಕಾರಿ ರಾಜೇಶ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಪ್ರಥಮ ಅವಧಿಯಲ್ಲಿ ಪ.ಪಂ. ಅಧ್ಯಕ್ಷರಾಗಿ ರಜನಿ ಕುಡ್ವ ಹಾಗೂ ಉಪಾಧ್ಯಕ್ಷರಾಗಿ ಜಯಾನಂದ ಗೌಡ ಸೇವೆ ಸಲ್ಲಿಸಿದ್ದರು.

ಎಂ.ಪಿ- ಶಾಸಕರಿಂದ ಅಭಿನಂದನೆ: ಎಂ.ಪಿ ಬ್ರಿಜೇಶ್ ಚೌಟ,
ಶಾಸಕ ಹರೀಶ್ ಪೂಂಜ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹೂ ಹಾರ ಹಾಕಿ ಅಭಿನಂದಿಸಿದರು.

ಈ ಸಂದರ್ಭ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್,ಬಿಜೆಪಿ ಪಕ್ಷದ ಪ್ರಮುಖ ನಾಯಕರಾದ ಜಯಂತ ಕೋಟ್ಯಾನ್, ಪ್ರಶಾಂತ್ ಪಾರೆಂಕಿ,ಈಶ್ವರ ಭೈರ, ಸದಾನಂದ ಪೂಜಾರಿ, ವಿಜಯ ಗೌಡ, ವಿಶ್ವನಾಥ್ ಹೊಳ್ಳ , ರಾಜೇಶ್ ಪ್ರಭು ಸೇರಿದಂತೆ ಕಾಯ೯ಕತ೯ರು ಉಪಸ್ಥಿತರಿದ್ದರು.

Leave a Comment

error: Content is protected !!