ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿಯ ಜೆಸಿ ಸಪ್ತಾಹದ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆ ಮತ್ತು ಗೌರವಾರ್ಪಣೆ ಕಾರ್ಯಕ್ರಮವು ಜೆಸಿ ಭವನದಲ್ಲಿ ನಡೆಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ( ರೆಸಿಡೆನ್ಸಿಯಲ್ )ನ ನಿವೃತ್ತ ಪ್ರಾಂಶುಪಾಲರು, ಹಾಗೂ ಜೆಸಿಐ ಭಾರತದ ರಾಷ್ಟೀಯ ತರಬೇತುದಾರರು, ಘಟಕದ ಪೂರ್ವಧ್ಯಕ್ಷರಾದ ಡಾ. ಕೃಷ್ಣಮೂರ್ತಿ ಟಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಕರು ಆದರ್ಶ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು. ವ್ಯಕ್ತಿತ್ವ ವಿಕಾಸನಕ್ಕೆ ಜೆಸಿ ಸಂಸ್ಥೆಯು ಅನೇಕ ಅವಕಾಶಗಳನ್ನು ನೀಡುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಶಿಕ್ಷಕರಿಗೆ ತಮ್ಮ ವೃತ್ತಿ ಜೀವನದಲ್ಲಿ ಜೆಸಿ ಸಂಸ್ಥೆಯು ಅಪಾರ ಕೊಡುಗೆಯನ್ನು ನೀಡುತ್ತದೆ ಎಂದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಎಚ್ ಡಿಯವರು ಅಧ್ಯಕ್ಷತೆಯನ್ನು ವಹಿಸಿ, ಎಲ್ಲರನ್ನು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವೃತ್ತಿಯಲ್ಲಿ ಉಪನ್ಯಾಸಕನಾಗಿ ಬೆಳ್ತಂಗಡಿ ಜೆಸಿ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತಿರುವ ಸದಸ್ಯರುಗಳನ್ನು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಗುರುತಿಸಿ ಗೌರವಿಸುವುದು ಸಂತೋಷವನ್ನು ನೀಡುತ್ತದೆ ಎಂದರು.

ಘಟಕದ ಪೂರ್ವ ಅಧ್ಯಕ್ಷರಾದ ಡಾ. ಕೃಷ್ಣಮೂರ್ತಿ ಟಿ, ಜೆಸಿರೇಟ್ ಪೂರ್ವ ಅಧ್ಯಕ್ಷರುಗಳಾದ ನಿವೃತ್ತ ಶಿಕ್ಷಕಿ ಉಮಾ ರಾವ್, ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಕೊರಂಜದಲ್ಲಿ ಶಿಕ್ಷಕಿ ಆಗಿರುವ ಅನುರಾಧ ಸುಭಾಷ್ ಚಂದ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರುನಲ್ಲಿ ಶಿಕ್ಷಕಿಯಾಗಿರುವ ಶುಭಾ ಎಮ್, ವಾಣಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಶಿಕ್ಷಕಿಯಾಗಿರುವ ನಮಿತಾ ನಿರ್ಮಲ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟುವಿನಲ್ಲಿ ಶಿಕ್ಷಕಿ ಆಗಿರುವ ದೀಪ ಕಿರಣ್, ಎಎ ಅಕಾಡೆಮಿ, ಪ್ರಸನ್ನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಹೇಮಾವತಿ ಕೆ ಗೌರವಿಸಲಾಯಿತು. ಘಟಕದ ನಿಕಟಪೂರ್ವಧ್ಯಕ್ಷರಾಗಿ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶಂಕರ ರಾವ್, ಘಟಕದ ಉಪಾಧ್ಯಕ್ಷರಾಗಿ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಸುಧೀರ್ ಕೆ ಏನ್, ಘಟಕದ ಮಾಜಿ ಕಾರ್ಯದರ್ಶಿಗಳಾಗಿ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಗಣೇಶ್ ಶಿರ್ಲಾಲ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಡ್ರುಪಾಡಿ ಧರ್ಮಸ್ಥಳದಲ್ಲಿ ಶಿಕ್ಷಕಿಯಾಗಿರುವ ಚಿತ್ರಪ್ರಭ, ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ದೀಕ್ಷ ಗಣೇಶ್ ಹಾಗೂ ಕಾರುಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಕ್ಕಿಂಜೆಯಲ್ಲಿ ಶಿಕ್ಷಕಿ ಆಗಿರುವ ಸ್ವಾತಿಯವರುಗಳನ್ನು ಎಲ್ಲಾ ಪೂರ್ವ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಸೇರಿ ಗೌರವಿಸಿದರು. ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ (MITE) ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ, ಘಟಕದ ಅಧ್ಯಕ್ಷರಾಗಿರುವ ರಂಜಿತ್ ಎಚ್ ಡಿ ಯವರನ್ನು ಕೂಡ, ಪೂರ್ವಧ್ಯಕ್ಷರುಗಳು, ಪದಾಧಿಕಾರಿಗಳು ಸೇರಿ ಗೌರವಿಸಿದರು.

ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷರಾದ ಪ್ರಶಾಂತ್ ಲಾಯಿಲ, ಜೇಸಿವಾಣಿಯನ್ನು ದೀಪ್ತಿ ಕುಲಾಲ್, ಉದ್ಘಾಟಕರ ಪರಿಚಯವನ್ನು ಹೇಮಾವತಿ ಕೆ, ಎಲ್ಲಾ ಶಿಕ್ಷಕರ ಪರಿಚಯವನ್ನು ಉಪಾಧ್ಯಕ್ಷರಾದ ಆಶಾ ಪ್ರಶಾಂತ್ ರವರು ನಡೆಸಿಕೊಟ್ಟರು. ಕಾರ್ಯದರ್ಶಿ ಅನುದೀಪ್ ಜೈನ್ ರವರ ಧನ್ಯವಾದವಿತ್ತರು.

Leave a Comment

error: Content is protected !!