32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ: ಕೋಟ್ಯಾಂತರ ರೂ. ದುರುಪಯೋಗ: ಡಿ.ಆರ್ ಹಾಗೂ ಎಸ್.ಪಿಗೆ ದೂರು

ಬೆಳ್ತಂಗಡಿ: ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರ ಕೋಟ್ಯಾಂತರ ರೂಪಾಯಿ ದುರುಪಯೋಗವಾಗಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಹಕಾರ ಸಂಘಗಳ ಉಪನಿಬಂಧಕರು ಮಂಗಳೂರು ಹಾಗೂ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.
ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಕಾಂತ್ ಎಂಬವರ ವಿರುದ್ಧ ಈ ದೂರನ್ನು ನೀಡಲಾಗಿದೆ. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ್ ಅವರು ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ಹಲವಾರು ಉಳಿತಾಯ ಖಾತೆಯನ್ನು ತೆರೆದಿದ್ದು, ಈ ವರೆಗೆ ಸುಮಾರು ರೂ. 5 ಕೋಟಿಗೂ ಅಧಿಕ ಮೊತ್ತದ ಹಣವನ್ನು ಸಂಘದ ನಿಯಮಗಳನ್ನು ಪಾಲಿಸದೇ ತೆಗೆದಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಪ್ಟೆಂಬರ್ ತಿಂಗಳಲ್ಲಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಡೆಸುತ್ತಿರುವ ಅವ್ಯವಹಾರ ಮತ್ತು ಸಂಘದ ಸದಸ್ಯರಿಗೆ ಆಗುತ್ತಿರುವ ತೊಂದರೆ, ಅನಾನುಕೂಲತೆಯ ಬಗ್ಗೆ ಸದಸ್ಯರು ಮತ್ತು ಸಾರ್ವಜನಿಕರಿಂದ ಹಲವಾರು ಮೌಖಿಕ ದೂರುಗಳು ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಬಂದಿರುತ್ತದೆ. ಇದರ ಬಗ್ಗೆ ಸಂಘದ ಅಧ್ಯಕ್ಷರ ಮುತುವರ್ಜಿಯಲ್ಲಿ ಆಡಳಿತ ಮಂಡಳಿಯು ತುರ್ತು ಕ್ರಮವನ್ನು ಕೈಗೊಂಡು, ದೂರುಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಸಲುವಾಗಿ, ಸಂಘದ ಕಾನೂನು ಸಲಹೆಗಾರರು ಮತ್ತು ಲೆಕ್ಕ ಪರಿಶೋಧಕರ ನೆರವಿನಿಂದ ಹಲವಾರು ದಿನ ಸಂಘದ ದಾಖಲೆಗಳನ್ನು ಮತ್ತು ಲೆಕ್ಕಪತ್ರಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿರುತ್ತದೆ.
ಸದ್ರಿ ಪರಿಶೀಲನೆಯಿಂದ, ಸಂಘದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ್ ಅವರು ಅತೀ ದೊಡ್ಡ ಪ್ರಮಾಣದಲ್ಲಿ ಸಂಘಕ್ಕೆ ಸೇರಿದ ಹಣ ಮತ್ತು ಸ್ವತ್ತುಗಳನ್ನು ದುರುಪಯೋಗಪಡಿಸಿ ದುರ್ಬಳಕೆ ಮಾಡಿರುವ ಬಗ್ಗೆ ಸಾಕ್ಷಗಳು ಲಭ್ಯವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸಾರ್ವಜನಿಕ ಹಣವನ್ನು ದುರ್ಲಾಭ ಮಾಡುವ ದುರುದ್ದೇಶದಿಂದ ದಾಖಲೆ ಮತ್ತು ಲೆಕ್ಕಪತ್ರದಲ್ಲಿ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕೋಟ್ಯಾಂತರ ರೂಪಾಯಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ. ಸದ್ರಿ ಕೃತ್ಯದ ಬಗ್ಗೆ ಅರಿತು ಕೂಡಲೇ ಕಾರ್ಯಪ್ರವೃತ್ತವಾದ ಆಡಳಿತ ಮಂಡಳಿಯು, ಅವರು ಸಂಘದಲ್ಲಿರುವ ಸಾಕ್ಷ್ಯ ನಾಶಕ್ಕೆ ಪ್ರಯತ್ನಪಡುವ ಸಾಧ್ಯತೆಯನ್ನು ಮನಗಂಡು ಕೂಡಲೇ ಅಡಳಿತ ಮಂಡಳಿಯ ವಿಶೇಷ ಸಭೆಯನ್ನು ಕರೆದು ಅವರನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಘದ ಹಣ ದುರುಪಯೋಗ ಪಡಿಸಿದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧಕರು ಮಂಗಳೂರು ಹಾಗೂ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನೀಡಿದ ದೂರಿನಲ್ಲಿ ಆಡಳಿತ ಮಂಡಳಿ ಒತ್ತಾಯಿಸಿದೆ.

ದೂರು ಕೊಟ್ಟಿದ್ದೇವೆ: ಆಡಳಿತ ಮಂಡಳಿ
ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರ ಹಣ ದುರುಪಯೋಗವಾಗಿರುವ ಬಗ್ಗೆ ಸಾಕ್ಷಿಗಳು ಲಭಿಸಿದ್ದು, ಇದರ ಬಗ್ಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಸಹಕಾರ ಸಂಘಗಳ ಉಪನಿಬಂಧಕರು ಮಂಗಳೂರು ಹಾಗೂ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೊಸೈಟಿಯ ವತಿಯಿಂದ ದೂರು ನೀಡಲಾಗಿದೆ ಎಂದು ಅಧ್ಯಕ್ಷರಾದ ಸಿ.ಹೆಚ್ ಪ್ರಭಾಕರ್, ಉಪಾಧ್ಯಕ್ಷರಾದ ಸದಾನಂದ, ನಿರ್ದೇಶಕರಾದ ವಿ.ಆರ್ ನಾಯಕ್, ಪ್ರಮೋದ್ ಆರ್. ನಾಯಕ್, ವಿಶ್ವನಾಥ್, ರತ್ನಾಕರ್, ಕಿಶೋರ್, ಸುಮಾದಿನೇಶ್, ಜಗನ್ನಾಥ್, ನಯನ ಶಿವಪ್ರಸಾದ್, ಮೋಹನ್‌ದಾಸ್ ಹೇಳಿಕೆ ನೀಡಿದ್ದಾರೆ.

Related posts

ಕಳಿಯ ಕುಂಟಿನಿ ನಿವಾಸಿ ಹರಿಪ್ರಸಾದ್ ಭಟ್ ನಿಧನ

Suddi Udaya

ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ : ವಿಶೇಷ ಪೂಜೆ ಸಲ್ಲಿಸಿದ ಸಚಿವ ದಂಪತಿ

Suddi Udaya

ಸೇವಾನಿಕೇತನಕ್ಕೆ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಭೇಟಿ

Suddi Udaya

ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರನ್ನು ಭೇಟಿಯಾದಸೆ.12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಚಲನ ಚಿತ್ರ ರಾನಿ – RONNY‌ದ ನಿರ್ಮಾಪಕರಾದ ಉಮೇಶ್ ಹೆಗ್ಡೆ

Suddi Udaya

ಉಜಿರೆ: ಕೃತಿಕಾ ಹಾಗೂ ಪುಣ್ಯಶ್ರೀ ರವರ ಚಿಕಿತ್ಸೆಗಾಗಿ ನೆರವಿಗೆ ಮನವಿ

Suddi Udaya

ಹರೀಶ್ ಎನ್. ನಾಳ ಹೃದಯಾಘಾತದಿಂದ ನಿಧನ

Suddi Udaya
error: Content is protected !!