ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ಪೋಕ್ಸೋ ಕಾಯಿದೆಯ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಯಾದ ವಿನಿತ್ ಲ್ಯಾನ್ಸನ್ ಸಿಕ್ವೇರಾ ಇವರು ಮಾತನಾಡಿ ಶಾಲೆಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಳೆ ವಯಸ್ಸಿನ ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ಜರುಗುತ್ತಿದ್ದು ಎಳೆ ಮನಸ್ಸನ್ನು ಕರಟಿ ಹೋಗುವಂತೆ ಮಾಡುತ್ತಿದೆ. ಇವುಗಳನ್ನು ಹತ್ತಿಕ್ಕಲು ಪೋಕ್ಸೋ ಕಾಯಿದೆ ಎಂಬ ಕಾನೂನಿನ ಚೌಕಟ್ಟು ಅತೀ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಕ್ಷಕರಲ್ಲಿ, ಪೋಷಕರಲ್ಲಿ ಮತ್ತು ಸಮುದಾಯದ ಸದಸ್ಯರಲ್ಲಿ ತಮ್ಮ ಮಕ್ಕಳ ಕುರಿತಾಗಿ ಕಾಳಜಿಯನ್ನು ಮೂಡಿಸುವುದರೊಂದಿಗೆ ಮಕ್ಕಳಿಗೆ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸುವುದೇ ಈ ಕಾಯಿದೆಯ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.


ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಶಿಕ್ಷಣಾರ್ಥಿ ಚೈತ್ರಾ ಎಸ್ ರವರು ಕಾಯಿದೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಾಗ ಮಾತ್ರ ಸಮಾಜದಲ್ಲಿ ಶಿಸ್ತು, ರಕ್ಷಣೆ ಮತ್ತು ಭದ್ರತೆ ದೊರಕಲು ಸಾಧ್ಯವಿದೆ ಎಂದರು.


ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಅವರು ಶಿಕ್ಷಕರಿಗೆ ಶಾಲೆಗಳಲ್ಲಿ ವೈಯಕ್ತಿಕ ಶಿಸ್ತಿನ ಜೊತೆಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಉತ್ತಮ ನಡೆನುಡಿಗಳು ಅವಶ್ಯಕ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕ ವೃಂದದವರು, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಶಂಕರಲಿಂಗ ಇವರು ಅತಿಥಿ ಪರಿಚಯಿಸಿ, ಆಧ್ಯ ಯು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

error: Content is protected !!