ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಉಡುಪಿ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಭಾಗಿತ್ವದೊಂದಿಗೆ “ವಿಮಾ ಗ್ರಾಮ” ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳ ಪೋಲೀಸ್ ಠಾಣೆಗೆ ಮಂಜೂರಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಜ.28 ರಂದು ಕೇಂದ್ರ ಕಛೇರಿಯ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲಿಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಎಲ್.ಐ.ಸಿ. ವಿಭಾಗೀಯ ಕಛೇರಿಯ ಮೈಕ್ರೋ ಇನ್ಸೂರೆನ್ಸ್ ಪ್ರಬಂಧಕರಾದ ದಿನೇಶ್ ಪ್ರಭುರವರು ಎಲ್.ಐ.ಸಿ. ಯ ಧೈಯೋದ್ದೇಶಗಳು ಹಾಗೂ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಯೋಜನೆಯೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಧರ್ಮಸ್ಥಳ ಪೋಲೀಸ್ ಠಾಣೆಯ ಅಧಿಕಾರಿ ಕಿಶೋರ್ರವರು. ಠಾಣೆಗೆ ಬರುವ ಸಿಬ್ಬಂದಿಗಳು ಹಾಗೂ ಬರುವ ಸಾರ್ವಜನಿಕರಿಗೆ ತೀರಾ ಅವಶ್ಯಕತೆಯಿದ್ದ ಕುಡಿಯುವ ನೀರಿನ ಮೂಲ ಸೌಕರ್ಯವನ್ನು ಒದಗಿಸಿ ಕೊಟ್ಟದ್ದಕ್ಕಾಗಿ ಎಲ್.ಐ.ಸಿ. ಹಾಗೂ ಯೋಜನೆಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಂಡಿದ್ದು, ಸಮಾಜದಲ್ಲಿ ಒಗ್ಗಟ್ಟು ಮೂಡಿದೆ. ಧರ್ಮಾಧಿಕಾರಿಗಳ ದೂರದೃಷ್ಟಿಯ ಕಾರ್ಯಕ್ರಮಗಳಿಂದಾಗಿ ಇಡೀ ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರುವಾಸಿಯಾಗಿದ್ದು, ಬರುವ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಿದ ಯೋಜನೆ ಹಾಗೂ ಎಲ್.ಐ.ಸಿ. ಗೆ ಗ್ರಾಮದ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಧರ್ಮಸ್ಥಳ ಠಾಣಾಧಿಕಾರಿ ಸಮರ್ಥ್, ಕೇಂದ್ರ ಕಛೇರಿಯ ಯೋಜನಾಧಿಕಾರಿ ಸತೀಶ್ ಎಂ. ಹಾಗೂ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಉಪಸ್ಥಿತರಿದ್ದರು. ವಿಮಾ ಸಮನ್ವಯಾಧಿಕಾರಿ ಶ್ರೀಮತಿ ಹೇಮಲತಾ ಹೆಗಡೆಯವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಪೊಲೀಸ್ ಸಿಬ್ಬಂದಿ ಚೈತ್ರಾರವರು ಧನ್ಯವಾದವಿತ್ತರು.











