ಬೆಳ್ತಂಗಡಿ : ಮನೆಯಲ್ಲಿ ನಡೆದ ಸಣ್ಣ ಗಲಾಟೆಯಿಂದ ನೊಂದು ಬೆಂಗಳೂರಿನಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಬಂದು ಆತ್ಮಹತ್ಯೆ ಮಾಡಲು ಮುಂದಾದ ಮಹಿಳೆಯನ್ನು ಧರ್ಮಸ್ಥಳ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ಹೋಗಿ ಮಹಿಳೆಯನ್ನು ರಕ್ಷಣೆ ಮಾಡಿದ ಘಟನೆ ಫೆ.10 ರಂದು ರಾತ್ರಿ ನಡೆದಿದೆ.
![](https://suddiudaya.com/wp-content/uploads/2025/02/mahile.jpg)
ಬೆಂಗಳೂರು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅನ್ನಪೂರ್ಣ (50) ಎಂಬಾಕ್ಕೆ ತನ್ನ ಮನೆಯಲ್ಲಿ ನಡೆದ ಸಣ್ಣ ಗಲಾಟೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಫೆ.10 ರಂದು ಬೆಳಗ್ಗೆ ಬಸ್ ಮೂಲಕ ಧರ್ಮಸ್ಥಳಕ್ಕೆ ರಾತ್ರಿ ಬಂದಿದ್ದು ನಂತರ ಮಗ ಚಿಕ್ಕಜಾಲ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಮೊಬೈಲ್ ಲೋಕೇಷನ್ ಮೂಲಕ ಮಹಿಳೆ ಧರ್ಮಸ್ಥಳದಲ್ಲಿರುವುದು ಕಂಡು ಬಂದಿದೆ ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿ ಲೊಕೇಷನ್ ಕಳುಹಿಸಿದ್ದರು. ಕಿಶೋರ್ ಕುಮಾರ್ ಕರ್ತವ್ಯ ಬಿಟ್ಟು ಫೆ.10 ರಂದು ರಾತ್ರಿ ಮನೆಗೆ ಹೋಗಿದ್ದರು. ತಕ್ಷಣ ಠಾಣೆಯ ಕೆಲ ಸಿಬ್ಬಂದಿಗಳನ್ನು ವಿವಿಧೆಡೆ ಹುಡುಕಾಟ ನಡೆಸಲು ಕಳುಹಿಸಿದ್ದರು. ಅದಲ್ಲದೆ ಸಬ್ ಇನ್ಸ್ಪೆಕ್ಟರ್ ಮಾಫ್ತಿಯಲ್ಲಿ ಧರ್ಮಸ್ಥಳ ಸುತ್ತಮುತ್ತ ನಡೆದುಕೊಂಡು ಹೋಗಿ ಮಹಿಳೆಗಾಗಿ ಹುಡುಕಾಟ ನಡೆಸಿದಾಗ ರಾತ್ರಿ ಸುಮಾರು 10:30 ಕ್ಕೆ ಧರ್ಮಸ್ಥಳ ದ್ವಾರದ ಬಳಿ ಪತ್ತೆಯಾಗಿದ್ದಾರೆ.
ಮಹಿಳೆಯನ್ನು ರಕ್ಷಣೆ ಮಾಡಿ ಅವರನ್ನು ಸಮಾಧಾನ ಮಾಡಿ ನೀರು, ಊಟ ತೆಗೆಸಿಕೊಟ್ಟು ನೇರ ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆತಂದು ವಿಶಾಂತ್ರಿ ಮಾಡಿಸಿ ಕುಟುಂಬದವರಿಗೆ ಕರೆ ಮಾಡಿ ರಾತ್ರಿಯೇ ಕರೆಸಿ ಅವರೊಂದಿಗೆ ಕಳುಹಿಸಿಕೊಟ್ಟು ಸಬ್ ಇನ್ಸ್ಪೆಕ್ಟರ್ ಮಾನವೀಯತೆ ಮೆರೆದಿದ್ದಾರೆ.
![](https://suddiudaya.com/wp-content/uploads/2025/02/mahile2.jpg)
ಈ ಘಟನೆ ಬಗ್ಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ಮಹಿಳೆಯ ಬಳಿ ವರದಿಗಾರರು ಸಂಪರ್ಕ ಮಾಡಿ ಮಾಹಿತಿ ಕೇಳಿದಾಗ ನನಗೆ ಗಲಾಟೆಯಿಂದ ನೊಂದು ನೇರ ಬಸ್ ನಲ್ಲಿ ಧರ್ಮಸ್ಥಳಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದೆ ಅವಾಗ ಸಬ್ ಇನ್ಸ್ಪೆಕ್ಟರ್ ಒಬ್ರು ಬಂದು ರಕ್ಷಣೆ ಮಾಡಿ ಊಟ ಮಾಡಿಸಿದ್ದಾರೆ. ನೋವಿನಿಂದ ಈಗ ಜಾಸ್ತಿ ಮಾತಾನಾಡಲು ಅಗುತ್ತಿಲ್ಲ. ಮನೆಯವರು ಬಂದ ಮೇಲೆ ಅವರೊಂದಿಗೆ ಹೋಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.