ಉಜಿರೆ: ಕರ್ನಾಟಕ ರಾಜ್ಯದಲ್ಲಿ 12 ಬರಪೀಡಿತ ಜಿಲ್ಲೆಗಳು ಹಾಗೂ ಎರಡು ನಗರ ಪ್ರದೇಶದ ವ್ಯಾಪ್ತಿಯಲ್ಲಿ 14,80,519 ಯುವ ಸ್ವಯಂ ಸೇವಕರನ್ನು ತೊಡಗಿಸಿಕೊಳ್ಳುವ ಮೂಲಕ 3,86,432 ಘನ ಮೀಟರ್ ನೀರನ್ನು ಈಗಾಗಲೆ ಸಂರಕ್ಷಿಸಲಾಗಿದೆ ಯುನಿಸೆಫ್ನ ಹಿರಿಯ ಅಧಿಕಾರಿ ವೆಂಕಟೇಶ್ ಅರಳಿಕಟ್ಟೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಸೇವಾಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದಲ್ಲಿ ನೀರಿನ ಉಳಿತಾಯ ಮತ್ತು ಸಂರಕ್ಷಣೆ ಬಗ್ಗೆ ಹೈದ್ರಾಬಾದ್ನ ಯುನಿಸೆಫ್ನ ಜಂಟಿ ಆಶ್ರಯದಲ್ಲಿ ಆಯೋಜಿಸಿದ ನೀರು ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲಾ ಶಿಕ್ಷಣ ಸಂಸ್ಥೆಗಳ ಮೂಲಕ ರಾಜ್ಯ ವ್ಯಾಪ್ತಿಯಲ್ಲಿ ನೀರು ಉಳಿಸಿ ಅಭಿಯಾನವನ್ನು ಯುನಿಸೆಫ್ ಆಶ್ರಯದಲ್ಲಿ ಆಯೋಜಿಸಿದ್ದು, ಸರ್ವರ ಸಹಕಾರವನ್ನು ಕೋರಿದರು. ಯುನಿಸೆಫ್ನ ಡಾ. ಪ್ರಭಾತ್ ಮಟ್ಟಾಡಿ ಶುಭ ಹಾರೈಸಿದರು.
ಎಸ್.ಡಿ.ಎಂ. ಕಾಲೇಜಿನ ಇನ್ನೂರು ವಿದ್ಯಾರ್ಥಿಗಳು ನೀರು ಉಳಿಸಿ ಜಾಥಾದಲ್ಲಿ ಭಾಗವಹಿಸಿದರು.
ಮಡಂತ್ಯಾರು ಸೇಕ್ರೆಡ್ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಜಲಸಂರಕ್ಷಣೆ ತಜ್ಞರಾದ ಡಾ. ಜೋಸೆಫ್, ಎನ್. ಎಂ. ನೀರುಸಂರಕ್ಷಣೆ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿದರು.
ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ. ಮಹೇಶ್ಕುಮಾರ್ ಶೆಟ್ಟಿ ಮತ್ತು ಪ್ರೊ. ದೀಪಾ, ಆರ್.ಪಿ., ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಎಸ್.ಎಸ್. ಉಪಸ್ಥಿತರಿದ್ದರು.