
ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಮೂರನೇಯ ಅಧ್ಯಾಯವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಡ್ವೊಕೇಟ್ ಮುರಳಿ ಬಲಿಪ ಇವರಿಗೆ ರವೀಂದ್ರ ಶೆಟ್ಟಿ ಬಳಂಜ ಇವರು ಮತ್ತು ಸಂಪನ್ಮೂಲ ವ್ಯಕ್ತಿ ಡಾ| ಪ್ರದೀಪ್ ಆಟಿಕುಕ್ಕೆ ಇವರನ್ನು ರಮೇಶ್ ಮಯ್ಯ ಇವರು ತಾಂಬೂಲ ನೀಡಿ ಗೌರವಿಸಿದರು.
ವೇದವ್ಯಾಸ ಶಿಶು ಮಂದಿರದ ಅಧ್ಯಕ್ಷೆ ಶ್ರೀಮತಿ ಇಂದುಮತಿ ಶಾರದೆಯನ್ನು ಸ್ತುತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರ ರಚನೆಯ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು.

ಡಾ| ಪ್ರದೀಪ್ ಆಟಿಕುಕ್ಕೆ ಇವರು ಭಗವದ್ಗೀತೆಯ ಮೂರನೇ ಅಧ್ಯಾಯದ ಉಪನ್ಯಾಸ ಮಾಲಿಕೆಯ ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಕೃಷ್ಣನ ತತ್ವ ಚಿಂತನೆಯ ಉಪದೇಶ ಕೇಳಿದ ಅರ್ಜುನನಿಗೆ ಕರ್ಮಕ್ಕಿಂತ ಜ್ಞಾನವೇ ಶ್ರೇಷ್ಠ ಎನ್ನುವ ಯೋಚನೆ ಬಂದಾಗ ಕೃಷ್ಣನು ಉತ್ತರಿಸುತ್ತಾ.. ಕರ್ಮವನ್ನು ಪ್ರಕೃತಿ ಸಹಜವಾಗಿ ಎಲ್ಲರೂ ಮಾಡಲೇಬೇಕು. ಶ್ರದ್ಧೆಯಿಂದ ಮಾಡುವ ಕೆಲಸವೇ ಕರ್ಮಯೋಗವಾಗುತ್ತದೆ ಮತ್ತು ಪ್ರತಿಯೊಂದು ಕೆಲಸದ ಹಿನ್ನೆಲೆಯಲ್ಲೂ ಫಲತ್ಯಾಗವನ್ನು ಮಾಡುವುದೇ ನಿಜವಾದ ಜ್ಞಾನ ವಾಗುತ್ತದೆ ಆದ್ದರಿಂದ ಕರ್ಮಯೋಗ ಮತ್ತು ಜ್ಞಾನಯೋಗ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ. ನಮ್ಮ ನಮ್ಮ ಗುಣಕ್ಕೆ ಅನುಗುಣವಾಗಿ ನಮ್ಮ ಕೆಲಸಗಳಾಗಿರುತ್ತವೆ. ಫಲದ ನಿರೀಕ್ಷೆ ಇಲ್ಲದೆ ಕರ್ಮವನ್ನು ಮಾಡುವುದೇ ಕರ್ಮಶುದ್ಧಿಯಾಗಿದೆ ಎಂದು ಗೀತೆಯ ಸ್ವಾರಸ್ಯವನ್ನು, ವಿವಿಧ ಉದಾಹರಣೆಗಳ ಮೂಲಕ ಮನೋಜ್ಞವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಡ್ವೊಕೇಟ್ ಮುರಳಿ ಬಲಿಪ ಇವರು ಯಾರು ತನಗೋಸ್ಕರ ಕರ್ಮವನ್ನು ಮಾಡುವನೋ ಅವನು ಯಾರ ಮನಸ್ಸಲ್ಲೂ ಉಳಿಯಲಾರ, ಅದೇ ಯಾರು ಇತರರಿಗಾಗಿ ಕೆಲಸ ಮಾಡುವನೋ ಅವನನ್ನು ಜಗತ್ತು ನೆನಪಿಸಿಕೊಳ್ಳುತ್ತದೆ. ಮಾತ್ರವಲ್ಲ ಶ್ರದ್ಧೆಯಿಂದ ಮಾಡುವ ಕೆಲಸ ಯಶಸ್ಸನ್ನು ತರುತ್ತದೆ ಎನ್ನುವುದನ್ನು ಕಥೆಗಳ ಮೂಲಕ ವಿವರಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿ ಆಯೋಜಿಸಿದ ಈ ಕಾರ್ಯಕ್ರಮ ಅನುಕರಣೀಯ ಎಂದು ನುಡಿದು ಶುಭ ಹಾರೈಸಿದರು.
ಇವರಿಗೆ ಶ್ರೀಮತಿ ಅಶ್ವಿನಿ ಹೆಬ್ಬಾರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ| ಪ್ರದೀಪ್ ಆಟಿಕುಕ್ಕೆ ಇವರಿಗೆ ಶ್ರೀಮತಿ ಜಯಂತಿ ಶೆಟ್ಟಿ ಇವರು ಪುಸ್ತಕ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಸಮಿತಿಯ ಅಧ್ಯಕ್ಷ ಪ್ರೊ.ಗಣಪತಿ ಭಟ್ ಕುಳಮರ್ವ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶ್ರೀಮತಿ ಸಂತೋಷಿಣಿ ಕಾರ್ಯಕ್ರಮವನ್ನು ನಿರೂಪಿಸಿ, ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ಧನ್ಯವಾದವನ್ನಿತ್ತರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಪ್ರಕಾರ ಪ್ರಮುಖರು ಮತ್ತು ಸದಸ್ಯರು, ನಮ್ಮ ಮನೆ ಹವ್ಯಕ ಭವನ ಕ್ರಿಯಾ ಸಮಿತಿಯ ಸದಸ್ಯರು, ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸದಸ್ಯರು, ಸ್ಥಳೀಯ ಭಜನಾ ಮಂಡಲದ ಪದಾಧಿಕಾರಿಗಳು ಸದಸ್ಯರು, ವೇದವ್ಯಾಸ ಶಿಶುಮಂದಿರದ ಪದಾಧಿಕಾರಿಗಳು, ಹಾಗೂ ಊರಿನ ಮಹನೀಯರು ಮತ್ತು ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ದ್ವಿತೀಯ ಅಧ್ಯಾಯದ ಪ್ರಯೋಜನವನ್ನು ಪಡೆದುಕೊಂಡರು.