ಬೆಳ್ತಂಗಡಿ: ಲಾಯಿಲ ಗ್ರಾಮದಲ್ಲಿ ಚಿರತೆ ಓಡಾಟ ಕಂಡು ಬಂದಿದೆ. ಮಾ.18 ರಂದು ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಚಂದ್ಕೂರು ರಸ್ತೆಯ ನಿರ್ಪರಿ ಎಂಬಲ್ಲಿ ಸ್ಥಳೀಯರಾದ ಸಿಪ್ರಿಯನ್ ಎಂಬವರು ಮನೆ ಬಳಿಯ ರಸ್ತೆಯಲ್ಲಿ ಬರುತಿದ್ದಾಗ ದೊಡ್ಡ ಗಾತ್ರದ ಚಿರತೆ ರಸ್ತೆಯಲ್ಲಿ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಪಕ್ಕದ ಮನೆಯ ಸುನೀಲ್ ಎಂಬವರಿಗೆ ವಿಷಯ ತಿಳಿಸಿದಾಗ ಅವರು ಸ್ಥಳೀಯ ಪಂಚಾಯತ್ ಸದಸ್ಯ ಪ್ರಸಾದ್ ಅವರಿಗೆ ಈ ಬಗ್ಗೆ ಪೋನ್ ಮೂಲಕ ತಿಳಿಸಿದ್ದು, ಅವರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.
ಈ ಬಗ್ಗೆ ಹಂದೆವೂರು, ಅಮ್ಮನಂಗಡಿ, ನಿರ್ಪರಿ ಭಾಗದ ಕೆಲವು ಮನೆಗಳಿಗೆ ತೆರಳಿ ರಾತ್ರಿ ಹೊತ್ತು ಒಬ್ಬಂಟಿಯಾಗಿ ಸಂಚರಿಸದಂತೆ ಹಾಗೂ ಸಾಕು ಪ್ರಾಣಿಗಳ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ. ಅದಲ್ಲದೇ ಮತ್ತೊಮ್ಮೆ ಚಿರತೆ ಕಂಡು ಬಂದರೆ ಗೂಡು ಇಡುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದಿದ್ದಾರೆ. ಕಳೆದ ವರ್ಷ ಕೂಡ ಇದೇ ಸಮಯಗಳಲ್ಲಿ ಚಿರತೆ ಈ ಭಾಗದಲ್ಲಿ ಕಂಡು ಬಂದಿದ್ದು, ಕೆಲವು ಮನೆಗಳ ಸಾಕು ನಾಯಿಗಳನ್ನು ಹಿಡಿದಿದ್ದು ಮತ್ತೆ ಈ ಬಾರಿ ಚಿರತೆ ಸಂಚಾರ ಸ್ಥಳೀಯರನ್ನು ಚಿಂತೆಗೀಡು ಮಾಡಿದೆ.